ನಾಯಕನಹಟ್ಟಿ: ಸಮೀಪದ ಮಾದಯ್ಯನಹಟ್ಟಿ ಬಳಿ ಇರುವ ಕಾವಲು ಬಸವೇಶ್ವರ ಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಹಾಗೂ 108 ಬಿಂದಿಗೆಗಳ ಗಂಗಾಭಿಷೇಕ ಅನ್ನಸಂತರ್ಪಣೆ ಕಾರ್ಯ ಇತ್ತೀಚೆಗೆ ನೆರವೇರಿಸಲಾಯಿತು.
ದೇವಾಲಯದಿಂದ ಪಟ್ಟಣದ ಅಲಂಕೃತ ಗೂಳಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ದೇವಾಲಯದ ಧಾರ್ಮಿಕ ವಿಧಿ ವಿಧಾನಗಳಂತೆ ನಂದಿದ್ವಜ, ಪಂಜು, ದೇವಾಲಯದ ಮಂಗಳವಾದ್ಯಗಳೊಂದಿಗೆ ಮಾದಯ್ಯನ ಹಟ್ಟಿ ಬಳಿಯಲ್ಲಿಯ ಕಾವಲು ಬಸಪ್ಪನ ದೇವಾಲಯಕ್ಕೆ ಕರೆದೊಲಾಯಿತು.
ನಂತರ ದೇವಾಲಯದಲ್ಲಿರುವ ಬಸವಣ್ಣನ ಮೂರ್ತಿಗೆ 108 ಬಿಂದಿಗೆಗಳ ನೀರಿನಿಂದ ನೊಂದಿಗೆ ನಂದಿ ಪ್ರತಿಮೆಗೆ ಅಭಿಷೇಕ ನೆರವೇರಿಸಲಾಯಿತು. ಬಿಲ್ವಪತ್ರೆ ಪಂಚಾಮೃತ ಅಭಿಷೇಕ ಸಲ್ಲಿಸಲಾಯಿತು. ಬಯಲಿನಲ್ಲಿ ನೆಲೆಸಿರುವ ಕಾವಲು ಬಸವೇಶ್ವರನಿಗೆ ವಿಶೇಷವಾಗಿ ಅಲಂಕರಿಸಲಾಯಿತು. ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
ಪೂಜೆಯ ವಿಧಿ ವಿಧಾನಗಳು ಜರುಗಿದ ತರುವಾಯ ಪಟ್ಟಣದ ಗೂಳಿಯನ್ನು ಕರಡಿ ವಾದ್ಯ, ನಂದಿ ಕುಣಿತಗಳೊಂದಿಗೆ ನಾಯಕನಹಟ್ಟಿಗೆ ಕರೆತರಲಾಯಿತು. ನಾಯಕನಹಟ್ಟಿ ಕಾವಲುಬಸವೇಶ್ವರ ನಗರ, ಕನ್ನಯ್ಯನ ಹಟ್ಟಿ, ಜಾಗನೂರು ಹಟ್ಟಿ ಹಾಗೂ ಮಾದಯ್ಯನ ಹಟ್ಟಿಯ ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕರಾದ ಮಹಾಂತೇಶ ದಿವಾಕರ್, ಹಿರೇಮಠದ ಬಸವರಾಜ್, ತಿಪ್ಪೇಸ್ವಾಮಿ ಅಭಿಷೇಕದ ಕಾರ್ಯ ನಡೆಸಿಕೊಟ್ಟರು.