India vs Australia: ಮೊದಲ ಟೆಸ್ಟ್​ಗೆ ಬೆಂಗಳೂರಿನ ಆಲೂರಿನಲ್ಲಿ ಆಸ್ಟ್ರೇಲಿಯಾ ಆಟಗಾರರ ಭರ್ಜರಿ ಅಭ್ಯಾಸ

Australia Cricket Team

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಪಂದ್ಯದಲ್ಲಿ ಭರ್ಜರಿ ಆಗಿ ಆಡಿ ಸರಣಿ ವಶಪಡಿಸಿಕೊಂಡ ಭಾರತ (India vs New Zealand) ಇದೀಗ ತವರಿನಲ್ಲಿ ಮತ್ತೊಂದು ಮಹತ್ವದ ಸರಣಿಗೆ ಸಜ್ಜಾಗುತ್ತಿದೆ. ಫೆಬ್ರವರಿ 9 ರಿಂದ ಶುರುವಾಗಲಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳು ಅಭ್ಯಾಸ ಶುರು ಮಾಡಿವೆ. ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಕಾಂಗರೂ ಪಡೆ ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿರುವ ಸ್ಪಿನ್‌ ಪಿಚ್‌ಗಳಲ್ಲಿ ಕಸರತ್ತು ನಡೆಸುತ್ತಿದೆ. ವಿಶೇಷ ಎಂದರೆ ಆಸ್ಟ್ರೇಲಿಯಾ ತಂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಜಮ್ಮು ಕಾಶ್ಮೀರದ ಮಿಸ್ಟರಿ ಸ್ಪಿನ್ನರ್ ಅಬಿದ್ ಮುಷ್ತಾಕ್‌ರನ್ನು ಆಹ್ವಾನಿಸಿದೆ. ಟೀಮ್ ಇಂಡಿಯಾ (Team India) ಸ್ಪಿನ್ನರ್​ಗಳ ವಿರುದ್ಧ ಆಡಲು ಆಸ್ಟ್ರೇಲಿಯಾ ಹೂಡಿರುವ ರಹಸ್ಯ ಉಪಾಯ ಇದಾಗಿದೆ.

ಆಸೀಸ್ ತಂಡವನ್ನು ಪ್ಯಾಟ್‌ ಕಮಿನ್ಸ್‌ ನಾಯಕನಾಗಿ ಮುನ್ನಡೆಸುತ್ತಿದ್ದು ಅನುಭವಿ ಬ್ಯಾಟರ್‌ ಸ್ಟೀವ್‌ ಸ್ಮಿತ್‌ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ಆಸ್ಟ್ರೇಲಿಯಾ ತಂಡದ ಬಹುತೇಕ ಆಟಗಾರರು ಈಗಾಗಗಲೇ ಬೆಂಗಳೂರಿಗೆ ಬಂದಿಳಿದಾಗಿದೆ. ವೀಸಾ ಸಮಸ್ಯೆಯಿಂದ ಪಾರಾಗಿರುವ ಸ್ಟಾರ್‌ ಓಪನರ್‌ ಉಸ್ಮಾನ್‌ ಖವಾಜ ಸದ್ಯದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆಷ್ಟನ್‌ ಅಗರ್‌, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಸೀಸ್‌ ಪಡೆಯ ಅಭ್ಯಾಸದ ಬಗ್ಗೆ ಅಭಿಮಾನಿಗಳೊಟ್ಟಿಗೆ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

 

Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ವಿರಾಟ್ ಕೊಹ್ಲಿ ಇನ್​ಸ್ಟಾದಲ್ಲಿ ಶೇರ್ ಮಾಡಿದ ಸ್ಟೇಟಸ್ ಏನು ಗೊತ್ತೇ?

ಫೆಬ್ರವರಿ 9 ರಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದ್ದು, ಇದಾದ ಬಳಿಕ ಮಾರ್ಚ್ 17 ರಿಂದ ಏಕದಿನ ಸರಣಿ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಗೆ ನಾಗ್​ಪುರದ ವಿಧರ್ಭ ಕ್ರಿಕೆಟ್​ ಸ್ಟೇಡಿಯಂ, ದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂ, ಧರ್ಮಶಾಲದ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಸ್ಟೇಡಿಯಂ ಹಾಗೂ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಏಕದಿನ ಪಂದ್ಯಗಳು ಮುಂಬೈ, ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲಿ ನಡೆಯಲಿದೆ. ಈ ಸರಣಿಯ ಟೆಸ್ಟ್ ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದಾಗಿದ್ದು, ಇದರಲ್ಲಿ ಸರಣಿ ಜಯಿಸುವ ಮೂಲಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಬಹುದು.

ರವೀಂದ್ರ ಜಡೇಜ ಫಿಟ್‌:

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ರವೀಂದ್ರ ಜಡೇಜ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಈ ಮೂಲಕ ಆಸೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಬುಧವಾರ ರವೀಂದ್ರ ಜಡೇಜ ಅವರಿಗೆ ಫಿಟ್‌ನೆಸ್‌ ಟೆಸ್ಟ್‌ ನಡೆದಿತ್ತು. ಇದರ ವರದಿ ಈಗ ಬಿಸಿಸಿಐ ಕೈಸೇರಿದ್ದು ತೇರ್ಗಡೆಯಾಗಿದ್ದಾರೆ. ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ರವೀಂದ್ರ ಜಡೇಜ ನಾಗ್ಪುರದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದ ಏಷ್ಯಾಕಪ್‌ ಪಂದ್ಯಾವಳಿಯ ವೇಳೆ ಜಡೇಜ ಮಂಡಿನೋವಿನಿಂದಾಗಿ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದರು. ಅನಂತರದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲೂ ಆಡಲು ಸಾಧ್ಯವಾಗಿರಲಿಲ್ಲ. ಸುಮಾರು 5 ತಿಂಗಳ ಕಾಲ ಜಡೇಜಾ ಕ್ರಿಕೆಟ್​ನಿಂದ ದೂರ ಉಳಿದಿದ್ದರು.

ಶ್ರೇಯಸ್ ಅಯ್ಯರ್ ಔಟ್:

ಭಾರತದ ಪ್ರಮುಖ ಬ್ಯಾಟರ್‌ ಶ್ರೇಯಸ್ ಅಯ್ಯರ್‌ ಅವರು ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಎನ್‌ಸಿಎನಲ್ಲಿ ಫಿಟ್‌ನೆಸ್‌ ಪ್ರಮಾಣಪತ್ರ ಪಡೆಯಲು ಶ್ರೇಯಸ್‌ ಆಗಮಿಸಿದ್ದಾರೆ. ಆದರೆ, ಸಂಪೂರ್ಣ ಚೇತರಿಕೆ ಕಾಣಲು ಇನ್ನಷ್ಟು ಸಮಯ ಬೇಕು ಎಂದು ಅವರಿಗೆ ತಿಳಿಸಲಾಗಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಕ್ರೀಡಾ ವೆಬ್‌ಸೈಟ್‌ ವರದಿ ಮಾಡಿದೆ. ಬಾಂಗ್ಲಾದೇಶ ವಿರುದ್ಧ 2022ರ ಡಿಸೆಂಬರ್‌ನಲ್ಲಿ ನಡೆದ ಟೆಸ್ಟ್‌ ಸರಣಿಯ ಬಳಿಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅಯ್ಯರ್ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಕೂಡ ಆಯ್ಕೆ ಆಗಿರಲಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/border-gavaskar-trophy-ind-vs-aus-australian-team-has-begun-practice-in-alur-camp-bengaluru-vb-au48-513500.html

Leave a Reply

Your email address will not be published. Required fields are marked *