ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
![](https://samagrasuddi.co.in/wp-content/uploads/2024/08/image-96.png)
ಚಿತ್ರದುರ್ಗ ಆ.23 : ತುಮಕೂರು-ರಾಯದುರ್ಗ ನೂತನ ರೈಲುಮಾರ್ಗ ಈ ಭಾಗದ ಅತ್ಯಂತ ಮಹತ್ವದ ಯೋಜನೆಯಾಗಿದೆ, ಈ ಯೋಜನೆಯ ಭಾಗವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡದಿಂದ ಮಡಕಶಿರಾ ನಡುವಿನ 22ಕಿ.ಮೀ ಉದ್ದದ ಹೊಸ ಬ್ರಾಡ್ಗೇಜ್ ರೈಲುಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರೂ.265.92ಕೋಟಿ ಅನುದಾನ ಒದಗಿಸುವ ಮೂಲಕ ತುಮಕೂರು-ರಾಯದುರ್ಗ ಹೊಸ ಬ್ರಾಡ್ಗೇಜ್ ರೈಲು ಮಾರ್ಗಕ್ಕೆ ವೇಗ ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಅವರು ಈಗಾಗಲೇ ಈ ಬಗ್ಗೆ ನೈರುತ್ಯ ರೈಲ್ವೆ ವಲಯದಿಂದ ಟೆಂಡರ್ ಕರೆಯಲಾಗಿದೆ, ದಿನಾಂಕ:11.09.2024 ರಂದು ಈ ಕಾಮಗಾರಿಯ ಬಿಡ್ ತೆರೆಯಲಿದ್ದು, ಕಾಮಗಾರಿ ನಿರ್ವಹಿಸುವ ಏಜೆನ್ಸಿ ಅಂತಿಮಗೊಳ್ಳಲಿದೆ. ಒಟ್ಟಾರೆಯಾಗಿಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಈ ಯೋಜನೆಯಡಿ ಪಾವಗಡ ಮತ್ತು ಮಡಕಶಿರಾ ನಗರಗಳಲ್ಲಿ 510 ಚದರ ಮೀಟರ್ ವಿಸ್ತೀರ್ಣದ ಸುಸಜ್ಜಿತ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ, ಹಾಗೂ ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಚಾರಕ್ಕೆ 3 ಪ್ರಮುಖ ಸೇತುವೆಗಳು, 32 ಸಣ್ಣ ಸೇತುವೆಗಳು, 21RUB (Riad under bridge) ಗಳು ಹಾಗೂ 4ROB (Road over bridge )ಗಳು ನಿರ್ಮಾಣವಾಗಲಿವೆ.
ಒಟ್ಟಾರೆಯಾಗಿ ಯಾವುದೇ ಅಡೆತಡೆಯಿಲ್ಲದೇ ರೈಲುಗಳು ಪ್ರತಿಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸಲು ಯಾವ ಅಗತ್ಯ ಮೂಲಸೌಕರ್ಯಗಳು ಬೇಕೋ ಆ ಎಲ್ಲವನ್ನೂ ಈ ಯೋಜನೆ ಒಳಗೊಂಡಿದೆ. ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಪೂರ್ಣಗೊಂಡರೆ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ ಎಂದಿದ್ದಾರೆ.