Fugitive Economic Offenders: ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಯಾಗಿರುವ ಈ 19 ಜನರು 40,000 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ನವದೆಹಲಿ: ವಿಜಯ್ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಗಳಿಂದ 15,113 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವಸೂಲಿ ಮಾಡಿದ್ದು, ಆ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ನೀಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ. ಮಂಗಳವಾರ ರಾಜ್ಯಸಭೆಗೆ ಈ ಮಾಹಿತಿ ನೀಡಿರುವ ಅವರು, ಪ್ರತಿಯೊಬ್ಬ ಆರೋಪಿಯಿಂದ ವಸೂಲಿಯಾದ ನಿಖರ ಮೊತ್ತದ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
19 ಮಂದಿಯ ಪೈಕಿ ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಎಂಬ 10 ಮಂದಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿಗಳು(Fugitive Economic Offenders -FEO) ಎಂದು ಘೋಷಿಸಲಾಗಿದೆ.
ಈ 10 ಜನರು ಸರಿಸುಮಾರು 40,000 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಜಾರಿ ನಿರ್ದೇಶನಾಲಯವು ಇತರ 9 ಮಂದಿಯ ವಿರುದ್ಧವೂ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ, 2018(FEOA) ಅಡಿಯಲ್ಲಿ ಕೇಸ್ ದಾಖಲಿಸಿದೆ. ಸಂದೇಸರಸ್ ಮತ್ತು ಹಿತೇಶ್ ಕುಮಾರ್ ಪಟೇಲ್ ಗುಜರಾತ್ ಮೂಲದ ಫಾರ್ಮಾ ದೈತ್ಯ ಸ್ಟರ್ಲಿಂಗ್ ಬಯೋಟೆಕ್ನೊಂದಿಗೆ ತೊಡಗಿಸಿಕೊಂಡಿದ್ದರು, ಒಂದು ಕಾಲದಲ್ಲಿ ವಿಶ್ವದ 6ನೇ ಅತಿದೊಡ್ಡ ಜೆಲಾಟಿನ್ ಉತ್ಪಾದಕರಾಗಿದ್ದರು. ಮಾಲೀಕರ ಸಂಪತ್ತಿನ ಲಾಲಾಸೆಗೆ ಕಂಪನಿ ದಿವಾಳಿಯಾಗಿತ್ತು, ನಂತರ ಆ ಕಂಪನಿಯನ್ನು ಅಮೆರಿಕ ಮೂಲದ food startup ಪರ್ಫೆಕ್ಟ್ ಡೇ ಸ್ವಾಧೀನಪಡಿಸಿಕೊಂಡಿತು.
ಜುನೈದ್ ಮೆಮೊನ್, ಹಜ್ರಾ ಮೆಮನ್ ಮತ್ತು ಆಸಿಫ್ ಮೆಮನ್ ಅವರು ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ಪ್ರಸಿದ್ಧ ಡ್ರಗ್ ಲಾರ್ಡ್, ಗ್ಯಾಂಗ್ಸ್ಟರ್ ಇಕ್ಬಾಲ್ ಮಿರ್ಚಿಯ ಕುಟುಂಬ ಸದಸ್ಯರಾಗಿದ್ದರು. ಈ ಪಟ್ಟಿಯಲ್ಲಿ ದೇವಾಸ್ ಮಲ್ಟಿಮೀಡಿಯಾದ ರಾಮಚಂದ್ರನ್ ವಿಶ್ವನಾಥನ್, ಮಾಜಿ ಮದ್ಯದ ಉದ್ಯಮಿ ವಿಜಯ್ ಮಲ್ಯ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ಅವರೂ ಸೇರಿದ್ದಾರೆ. ಆದಾಗ್ಯೂ, ಜಾರಿ ನಿರ್ದೇಶನಾಲಯವು ಈ 19 ಜನರ ಪೈಕಿ ಕೇವಲ ನಾಲ್ವರನ್ನು ಮಾತ್ರ ಭಾರತಕ್ಕೆ ಗಡಿಪಾರು ಮಾಡಲಾಗಿದೆ / ಹಸ್ತಾಂತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Views: 0