₹500 ದಂಡಕ್ಕೆ ಮನನೊಂದು ಬೆಂಕಿ ಹಚ್ಚಿಕೊಂಡ ಚಾಲಕ – ಗಾಂಧಿ ವೃತ್ತದಲ್ಲಿ ಗಂಟೆಗಟ್ಟಲೆ ಉದ್ವಿಗ್ನತೆ.

ಚಿತ್ರದುರ್ಗದಲ್ಲಿ ಸಂಚಾರಿ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಕ್ಕೆ ಮನನೊಂದ ಆಟೋ ಚಾಲಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ಖಂಡಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದು, ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಚಿತ್ರದುರ್ಗ: ನಗರದ ಗಾಂಧಿ ವೃತ್ತದಲ್ಲಿ ಸಂಚಾರಿ ಪೊಲೀಸರು ಐದು ನೂರು ರೂ. ದಂಡ ವಿಧಿಸಿದ್ದಕ್ಕೆ ಮನನೊಂದ ಆಟೋರಿಕ್ಷಾ ಚಾಲಕ ಮಾಳಪ್ಪನಹಟ್ಟಿ ತಿಪ್ಪೇಸ್ವಾಮಿ (35) ಶನಿವಾರ ರಾತ್ರಿ ಮೈಮೇಲೆ ಪೆಟ್ರೋಲ್‌ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಖಂಡಿಸಿ, ಚಿತ್ರದುರ್ಗ ಆಟೋ ಚಾಲಕರ ಮತ್ತು ಮಾಲೀಕರ ಒಕ್ಕೂಟದಿಂದ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನಡೆಸಿದ್ದರ ಪರಿಣಾಮ ವೃತ್ತಕ್ಕೆ ಸೇರ್ಪಡೆಗೊಳ್ಳುವ ನಾಲ್ಕು ರಸ್ತೆಗಳನ್ನು ಬಂದ್‌ ಮಾಡಲಾಯಿತು. ಬೆಳಗ್ಗೆ ಸುಮಾರು 10.30ರಿಂದ ಮಧ್ಯಾಹ್ನ 1ರವರೆಗೆ ಅಂದಾಜು ಮೂರು ತಾಸು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶಿವಕುಮಾರ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಿದ ಪರಿಣಾಮ ಪ್ರತಿಭಟನೆ ಹಿಂಪಡೆದರು.

ಪೊಲೀಸರು ಚಾಲಕನ ಬಳಿ ಇದ್ದ ಆಟೋರಿಕ್ಷಾವನ್ನು ದಬ್ಬಾಳಿಕೆಯಿಂದ ಅವರ ವಶಕ್ಕೆ ಪಡೆದಿದ್ದಾರೆ. ಇದರಿಂದ ಮನನೊಂದ ಚಾಲಕ ತನ್ನ ಆತ್ಮಗೌರವಕ್ಕೆ ಧಕ್ಕೆ ಉಂಟಾದ ಕಾರಣ ನೋವು ತಾಳಲಾರದೆ ನೂರಾರು ಜನಗಳ ಮಧ್ಯೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಈಗ ಆ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾವುಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಎಡಿಸಿ, ಎಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಬೇಡಿಕೆಗಳು

ಚಿಕಿತ್ಸೆ ಪಡೆಯುತ್ತಿರುವ ಆಟೋರಿಕ್ಷಾ ಚಾಲಕನಿಗೆ ಉತ್ತಮ ಚಿಕಿತ್ಸೆಗಾಗಿ ಹಾಗೂ ಮುಂದಿನ ಜೀವನದ ಉದ್ದೇಶಕ್ಕಾಗಿ ಸರಕಾರದಿಂದ ಕನಿಷ್ಠ 25 ಲಕ್ಷ ರೂ. ಪರಿಹಾರ ಒದಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಲು ಆದೇಶ ಹೊರಡಿಸಬೇಕು. ಜಿಲ್ಲೆಯಲ್ಲಿ ಆಟೋರಿಕ್ಷಾ ಚಾಲಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಈ ಎಲ್ಲ ಬೇಡಿಕೆ ಬಗೆಹರಿಸದಿದ್ದಲ್ಲಿ ಆಟೋರಿಕ್ಷಾ ಚಾಲಕರು, ಮಾಲೀಕರ ಸಂಘದಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಒಕ್ಕೂಟದ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಮಗೆ ನ್ಯಾಯ ಕೊಡಿಸಿ

ನನ್ನ ಗಂಡ ಹೆಚ್ಚು ಆಟೋ ಬಾಡಿಗೆ ಓಡಿಸಲ್ಲ, ಬಾಡಿಗೆಗೆ ಹೋದರೆ ನಾಲ್ಕೈದು ನೂರು ಬಾಡಿಗೆ ಸಿಕ್ಕಿದರೆ ಸಾಕು ಮನೆಗೆ ಬರುತ್ತಿದ್ದರು. ಮನೆಗೆ ಬಂದಾಗ ಹಣ ಕೇಳಿದಾಗ ಆಟೋ ಹಿಡಿದಿದ್ದರು, ದಂಡ ಕಟ್ಟಿಬಂದಿದ್ದೇನೆ ಎಂದು ಹೇಳುತ್ತಿದ್ದರು. ಈ ತಿಂಗಳಲ್ಲಿ ನಾಲ್ಕೈದು ಬಾರಿ ಹೀಗೆ ಮಾಡಿದ್ದಾರೆ. ನಮಗೆ ಇಬ್ಬರು ಮಕ್ಕಳು, ನಮಗೆ ನ್ಯಾಯ ಕೊಡಿಸಿ ಎಂದು ಆಟೋ ಚಾಲಕ ತಿಪ್ಪೇಸ್ವಾಮಿ ಪತ್ನಿ ಅಳಲು ತೋಡಿಕೊಂಡರು.

ಪೊಲೀಸರ ತಪ್ಪು ಕಂಡರೆ ಕ್ರಮ

ಟ್ರಾಫಿಕ್‌ ಪೊಲೀಸರು ಕರ್ತವ್ಯದಲ್ಲಿದ್ದಾಗ ಆಟೋ ಚಾಲಕ ತಿಪ್ಪೇಸ್ವಾಮಿ ನಿಯಮ ಮೀರಿ ಚಾಲನೆ ಮಾಡಿದ್ದರು. ಕುಡಿದು ಆಟೋ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಡ್ರಂಕ್‌ ಆ್ಯಂಡ್‌ ಡ್ರೈವ್‌ ಕೇಸ್‌ ಹಾಕಲು ಪೊಲೀಸರು ಮುಂದಾಗಿದ್ದಾರೆ. ಎಎಸ್ಪಿ ಕಡೆಯಿಂದ ಪ್ರಕರಣ ತನಿಖೆ ಮಾಡಿ, ಪೊಲೀಸರ ತಪ್ಪು ಕಂಡು ಬಂದರೆ ಕ್ರಮಕೈಗೊಳ್ಳುತ್ತೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೊ ಚಾಲಕ ತಿಪ್ಪೇಸ್ವಾಮಿ ಆಟೋ ಬಿಟ್ಟು ಅಲ್ಲಿಂದ ಹೋಗಿದ್ದಾನೆ. ಒಂದು ಗಂಟೆ ಬಳಿಕ ಗಾಂಧಿ ವೃತ್ತಕ್ಕೆ ಬಂದು, ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಶೇ. 50ರಷ್ಟು ದೇಹಕ್ಕೆ ಸುಟ್ಟು ಗಾಯಗಳಾಗಿದೆ. ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ದಾವಣಗೆರೆ ಎಸ್‌.ಎಸ್‌. ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದೇವೆ ಎಂದರು.

ಗಾಂಧಿ ವೃತ್ತದಲ್ಲಿ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವವರೆಗೂ ಯಾರು ತಡೆದಿಲ್ಲ, ಬೆಂಕಿ ಹಚ್ಚಿಕೊಂಡಾಗ ಯಾರು ಕೂಡ ತುರ್ತಾಗಿ ರಕ್ಷಣೆ ಮಾಡಿಲ್ಲ. ಪೊಲೀಸರನ್ನ ಹೆದರಿಸಲು ಹೋಗಿದ್ದಾನೆ. ಈ ರೀತಿ ಆಗಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ, ನಾವು ವೈದ್ಯರ ಸಂಪರ್ಕದಲ್ಲಿದ್ದೇವೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಶಿಪ್ಟ್‌ ಮಾಡಲು ನಾವು ತಯಾರಿದ್ದೇವೆ ಎಂದು ಹೇಳಿದರು.

Views: 62

Leave a Reply

Your email address will not be published. Required fields are marked *