ಮುಂಗುಸಿ ತಪ್ಪಿಸಲು ಹೋಗಿ ಕಾರು ಅಪಘಾತ: ಎದೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡ ನಟ ಕಿರಣ್​ ರಾಜ್​.

ಬೆಂಗಳೂರು: ಕಾರು ಅಪಘಾತದಲ್ಲಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿರುವ ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್​ ರಾಜ್ ಅವರನ್ನು ಕೆಂಗೇರಿ ಬಳಿಯ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಎದೆ ಭಾಗಕ್ಕೆ ಹೆಚ್ಚು ಪೆಟ್ಟಾಗಿರುವ ಕಾರಣ ಕಿರಣ್​ ರಾಜ್​ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇದೇ ಶುಕ್ರವಾರ ಅವರ ನಟನೆಯ ರಾನಿ ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನವೇ ಅಪಘಾತದಲ್ಲಿ ಗಾಯಗೊಂಡಿರುವುದು ಬೇಸರ ಸಂಗತಿಯಾಗಿದೆ.

ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಈ ಕೇಂದ್ರಕ್ಕೆ ಪ್ರತಿವಾರ ಭೇಟಿ ನೀಡಿ ಅನಾಥ ಮಕ್ಕಳಿಗೆ ಊಟ ನೀಡುತ್ತಿದ್ದರು. ನಾಳೆ (ಸೆ.12) ಕಿರಣ್ ರಾಜ್​​ ಅಭಿನಯದ ರಾನಿ ಸಿನಿಮಾ ರಿಲೀಸ್ ಹಿನ್ನೆಲೆ ಎರಡು ದಿನಗಳ ಮುಂಚೆಯೇ ಆಹಾರ ನೀಡಲು ಹೋಗಿದ್ದರು. ಈ ನಡುವೆ ಅಪಘಾತ ಸಂಭವಿಸಿದ್ದು, ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ.

ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಕಿರಣ್​ ರಾಜ್​ ಜತೆ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಇದ್ದರು. ಅವರು ಸೀಟ್ ಬೆಲ್ಟ್ ಧರಿಸಿದ್ದರಿಂದ ಬಚಾವ್​ ಆಗಿದ್ದಾರೆ. ಆದರೆ, ಕಿರಣ್​ ರಾಜ್​ ಅವರ ಎದೆ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿರುವುದರಿಂದ ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್​ಗೆ ದಾಖಲಿಸಲಾಗಿದೆ. ಗಿರೀಶ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ರಸ್ತೆಗೆ ಅಡ್ಡಲಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ, ಗುದ್ದಿದ ರಭಸಕ್ಕೆ ಕಾರಿನ ಮುಂಭಾಗದ ಟೈರ್ ಕಿತ್ತುಬಂದಿದೆ.

Source : https://m.dailyhunt.in/news/india/kannada/vijayvani-epaper-vijaykan/mungusi+tappisalu+hogi+kaaru+apaghaata+edege+pettu+biddu+pragne+kaledukonda+nata+kiran+raaj+-newsid-n630395140?listname=topicsList&topic=for%20you&index=1&topicIndex=0&mode=pwa&action=click

Leave a Reply

Your email address will not be published. Required fields are marked *