5-6 ವರ್ಷಗಳಿಂದಲೂ ಅನಾರೋಗ್ಯದಿಂದ ಎಟಿ ರಘು ಬಳಲುತ್ತಿದ್ದರು. ನಿನ್ನೆ ರಾತ್ರಿ ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯ ಮನೆಯಲ್ಲಿ ಅವರು ನಿಧನರಾಗಿದ್ದಾರೆ.

ಬೆಂಗಳೂರು: ನಟ ರೆಬೆಲ್ ಸ್ಟಾರ್ ಅಂಬರೀಷ್ ಅಭಿನದ ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಖ್ಯಾತ ನಿರ್ದೇಶಕ ಎಟಿ ರಘು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಕಳೆದ 5-6 ವರ್ಷಗಳಿಂದಲೂ ಅನಾರೋಗ್ಯದಿಂದ ಎಟಿ ರಘು ಬಳಲುತ್ತಿದ್ದರು. ನಿನ್ನೆ ರಾತ್ರಿ ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯ ಮನೆಯಲ್ಲಿ ಅವರು ನಿಧನರಾಗಿದ್ದಾರೆ.
ಮಠದಹಳ್ಳಿಯ ಮನೆಯಲ್ಲಿ ರಘು ಅವರ ಪಾರ್ಥಿವ ಶರೀರ ಇಡಲಾಗಿದ್ದು. ಶುಕ್ರವಾರ ಮಧ್ಯಾಹ್ನ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಅಂಬರೀಷ್ ಜೊತೆ 27 ಚಿತ್ರ.. ಒಟ್ಟಾರೆ 55 ಚಿತ್ರಗಳ ನಿರ್ದೇಶನ
ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಇವರು, ಸಾಹಸ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳುತ್ತಿದ್ದರು. ನಿರ್ದೇಶಕ ರಘು ಒಟ್ಟು 55 ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಪೈಕಿ ಬರೊಬ್ಬರಿ 27 ಚಿತ್ರಗಳನ್ನು ನಟ ಅಂಬರೀಷ್ ಅವರಿಗೆ ನಿರ್ದೇಶಿಸಿದ್ದರು.
ಅಂಬರೀಷ್ ಅಲ್ಲದೆ ರಜನೀಕಾಂತ್ ನಟನೆಯ ಬಾಲಿವುಡ್ ಚಿತ್ರ ಮೇರಿ ಅದಾಲತ್ ಸಿನಿಮಾಗೂ ಎಟಿ ರಘು ನಿರ್ದೇಶನ ಮಾಡಿದ್ದರು. ಇವರ ನಿರ್ದೇಶನದಲ್ಲಿ ಅವಳ ನೆರಳು, ಮಂಡ್ಯದ ಗಂಡು, ಕಾಡಿನ ರಾಜ , ಮೈಸೂರು ಜಾಣ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದವು.
ಕನ್ನಡದ ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ ಇನ್ನಿತರ ಸಿನಿಮಾಗಳನ್ನು ರಘು ನಿರ್ದೇಶಿಸಿದ್ದಾರೆ.
Source : https://www.kannadaprabha.com/cinema/news/2025/Mar/21/sandalwood-director-at-raghu-is-no-more