ಪಿಲಾಜನಹಳ್ಳಿಯಲ್ಲಿ ಈಡಿಗ ಮಹಾಮಂಡಳಿ ಚಿಂತನ ಮಂಥನ: ಸಮುದಾಯ ಒಗ್ಗಟ್ಟು, ಶಿಕ್ಷಣ ಮತ್ತು ಹಕ್ಕುಗಳ ಬಗ್ಗೆ ಬಿ.ಕೆ. ಹರಿಪ್ರಸಾದ್ ಕರೆ.

ಚಿತ್ರದುರ್ಗ ಸೆ. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚುನಾವಣೆಯ ಸಮಯದಲ್ಲಿ ತಮ್ಮ ಮತಗಳನ್ನು ಹೆಂಡ, ಹಣಕ್ಕೆ ಮಾರಿಕೊಳ್ಳದೆ ನಿಮ್ಮ ಸಮುದಾಯಕ್ಕೆ ನೆರವನ್ನು ನೀಡುವಂತ ವ್ಯಕ್ತಿ ಯಾವುದೇ ಪಕ್ಷವಾದರೂ ಸಹಾ ಅಂತಹವರನ್ನು ಆಯ್ಕೆ ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಂತೆ ಸಮಾಜದ ಮುಖಂಡರು, ರಾಜ್ಯ ಸಭಾದ ಮಾಜಿ ಸದಸ್ಯರು, ಹಾಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಸಮುದಾಯಕ್ಕೆ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಿಲಾಜನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಈಡಿಗ ಮಹಾಮಂಡಳಿವತಿಯಿಂದ ಏರ್ಪಡಿಸಿದ್ದ ಚಿಂತನ ಮಂಥನ ಶಿಬಿರ, ನೂತನ ಜಿಲ್ಲೆ, ತಾಲ್ಲೂಕು ಅಧ್ಯಕ್ಷರಗಳ ಮತ್ತು ಪದಾಧಿಕಾರಿಗಳ ಘೋಷಣೆ ಹಾಗೂ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮುದಾಯ ನಮ್ಮ ಕುಲ ಕಸುಬನ್ನು ಹೆಚ್ಚಾಗಿ ಮಾಡುವುದರ ತಲ್ಲಿನವಾಗಿದ್ದರಿಂದ ನಮ್ಮ ಸಮುದಾಯದ ಬೆಳವಣಿಗೆಯ ಬಗ್ಗೆ ಅಷ್ಠಾಗಿ ತಲೆ ಕೆಡಿಸಿಕೊಳ್ಳಲಿಲ್ಲ ಇದರಿಂದ ನಾವುಗಳು ಹಿಂದೆ ಉಳಿಯಬೇಕಾಯಿತು, ಆದರೆ ಈಗ ನಮ್ಮ ಸಮುದಾಯದ ಬೆಳವಣಿಗೆಯ ಬಗ್ಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ, ನಮ್ಮ ಸಮುದಾಯದಲ್ಲಿನ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವಂತ ಕಾರ್ಯವನ್ನು ನಮ್ಮ ಸಮುದಾಯದವರು ಮಾಡಬೇಕಿದೆ ಶ್ರೀಮಂತರಾದವರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೂಡಿಸಿ ಆರ್ಥಿಕವಾಗಿ ಸಬಲರಾಗಿ ಇಲ್ಲದಿದ್ದರು ತಮ್ಮ ಒಂದು ಹೊತ್ತಿನ ಊಟವನ್ನು ಬಿಡುವುದರ ಮೂಲಕ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೂಡಿಸುವಂತೆ ತಿಳಿ ಹೇಳಿದರು. ಭಗವಂತ ಎಲ್ಲರಿಗೂ ಸಹಾ ಪ್ರತಿಭೆಯನ್ನು ನೀಡಿದ್ಧಾನೆ ಆದರೆ ಅದನ್ನು ನಾವು ಶಿಕ್ಷಣದ ಮೂಲಕ ಹೊರ ತೆಗೆಯುವ ಕಾರ್ಯವನ್ನು ನಾವುಗಳು ಮಾಡಬೇಕಿದೆ, ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ.

ಅದರಂತೆ ದೇವರಾಜು ಅರಸು ರವರು ಸಹಾ ತಮ್ಮ ಅಧಿಕಾರದ ಅವಧಿಯನ್ನು ನಮ್ಮ ಸಮುದಾಯಕ್ಕೆ ಮಹತ್ವವಾದ ನಿರ್ಧಾರವನ್ನು ತೆಗೆದುಕೊಳ್ಳುವುದರ ಮುಲಕ ನಮ್ಮ ಸಮುದಾಯಕ್ಕೆ ನೆರವಾದರು, ಈಗ ನಾನು ಇಲ್ಲಿ ನಿಂತು ಮಾತನಾಡುವುದಕ್ಕೆ ಅರಸುರವರು ಕಾರಣರಾಗಿದ್ದಾರೆ ಎಂದ ಹರಿಪ್ರಸಾದ್ ಅರಸುರವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಚುನಾವಣೆಯಲ್ಲಿ ಮೇಲ್ವರ್ಗದವರು ಮಾತ್ರ ಗೆಲುವುನ್ನು ಸಾಧಿಸುತ್ತಿದ್ದರು, ಅರಸುರವರು ಬಂದ ಮೇಲೆ ನಮ್ಮ ಸಮುದಾಯದವರು ಗೆಲುವನ್ನು ಸಾಧಿಸಲು ಸಾಧ್ಯವಾಯಿತು ಎಂದರು.

ಅರಸುರವರು ಹಾವನೂರು ವರದಿಯನ್ನು ತಯಾರಿಸುವುದರ ಮೂಲಕ ನಮ್ಮ ಸಮುದಾಯಕ್ಕೆ ದಾರಿ ದೀಪವಾಗಿದ್ದಾರೆ. ಊಳುವವನೆ ಭೂಮಿ ಒಡೆಯ ಎಂಬ ಕಾನೂನು ಜಾರಿ ಮಾಡಿ ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಭೂಮಿಯನ್ನು ಕೊಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ನಿಮ್ಮ ಮತಗಳನ್ನು ಹೆಂಡ, ಹಣಕ್ಕಾಗಿ ಮಾರಾಟ ಮಾಡಿಕೊಳ್ಳದೆ ನಿಮ್ಮ ಸಮುದಾಯದ ಹಿತವನ್ನು ಕಾಯುವ ಯಾವುದೇ ಪಕ್ಷದವರಾದರೂ ಸಹಾ ಅವರನ್ನು ಮತ ನೀಡುವುದರ ಮೂಲಕ ಗೆಲ್ಲಿಸಿಕೊಳ್ಳಿ, ಹಿರಿಯೂರಿನಲ್ಲಿ ನಮ್ಮ ಸಮುದಾಯದವರು 2000 ಜನ ಇದ್ದಾರೆ ಎಂದರೆ ಸಾಕು ನೀವು ಒಗ್ಗಟಾಗಿ ಇದ್ದರೆ ಚುನಾವಣೆಯಲ್ಲಿ ಸ್ಪರ್ದೆ ಮಾಡಿದವರು ನಿಮ್ಮ ಮುಂದೆ ಬರುತ್ತಾರೆ ನಿಮ್ಮ ಮಾತನ್ನು ಕೇಳುತ್ತಾರೆ ಇದರಿಂದ ಎಲ್ಲರು ಒಗ್ಗಟಾಗಿ ಇರಿ ಹರಿದು ಹಂಚಿ ಹೋಗಬೇಡಿ ಎಂದು ಹರಿಪ್ರಸಾದ್ ಕಿವಿ ಮಾತು ಹೇಳಿದರು. ಸರ್ಕಾರಕ್ಕೆ ನೀವು ನೀಡುವಂತ ವಿವಿಧ ರೀತಿಯ ತೆರಿಗೆಯ ಹಣದಿಂದ ನಿಮಗೆ ಬೇಕಾದ ಮೂಲಭೂತ ಸೌಕರ್ಯವನ್ನು ಸರ್ಕಾರ ನೀಡಬೇಕಿದೆ ನಿಮಗೆ ಅಗತ್ಯವಾದ ಸೌಲಭ್ಯವನ್ನು ಕೇಳಲು ಹಿಂಜರಿಯಬೇಡಿ, ಸರ್ಕಾರದಿಂದ ಸೌಲಭ್ಯ ಕೇಳುವುದು ನಿಮ್ಮ ಹಕ್ಕು ಇದರಿಂದ ಅದನ್ನು ಮರೆಯದೇ ಕೇಳಿ ಎಂದ ಅವರು, ನಾನು ಜಾತಿಯಿಂದ ಮೇಲೆ ಬಂದವನಲ್ಲ ಹೋರಾಟದ ಮೂಲಕ ಮೇಲೆ ಬಂದವನಾಗಿದ್ದಾನೆ, ಬಡವರ ಪರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ ಎಂದ ಅವರು ಈಗ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಮ್ಮ ಸ್ಥಿತಿಗತಿಗಳನ್ನು ಸರಿಯಾದ ರೀತಿಯಲ್ಲಿ ಬರೆಯಿಸಿ, ಇದರಿಂದ ನಿಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಸರ್ಕಾರದಿಂದ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದ ಅವರು. ಈಗ ಇಲ್ಲಿ ನಡೆಯುತ್ತಿರುವ ಚಿಂತನ ಮಂಥನ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಮುದಾಯದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.

ನಾರಾಯಣ ಗುರು ಪೀಠದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶ್ರೀ ಪ್ರಣವನಂದ ಶ್ರೀಗಳು ಮಾತನಾಡಿ, ಸೇಂದಿ ಸಾರಾಯಿ ಮಾರಾಟ ಮಾಡಿಕೊಂಡು ಬದುಕಿದ ಸಮಾಜ ನಮ್ಮದು. ಬೆಂಗಳೂರಿನ ವಿಧಾನಸೌಧದ ಮುಂಭಾಗ ನಾರಾಯಣ ಗುರೂಜಿಗಳ ಪುತ್ಥಳಿ ನಿರ್ಮಾಣವಾಗಬೇಕು. ಸೇಂದಿ ಮಾರಾಟ ಬಂದ್ ಮಾಡಿರುವುದರ ಹಿಂದೆ ರಾಜಕೀಯ ಹುನ್ನಾರವಿದೆ. ಗೋಮಾಳ ಜಮೀನುಗಳನ್ನು ನಮ್ಮ ವಶಕ್ಕೆ ಕೊಡಬೇಕು, ಸರ್ಕಾರವೆ ಈಚಲು ಮರ ಬೆಳೆಸಿ ಕುಲಕಸುಬು ಸೇಂದಿ ಮಾರುವುದನ್ನು ಕಳೆದುಕೊಂಡಿರುವ ನಮ್ಮ ಜನಾಂಗಕ್ಕೆ ತಲಾ ಎರಡು ಎಕರೆ ಜಮೀನು ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಬಿಜೆಪಿ.ಯಲ್ಲಿ ನಮ್ಮ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರೆ ಮಂತ್ರಿಯಿದ್ದಾರೆ. ಆರು ಶಾಸಕರುಗಳು ಪಕ್ಷದಲ್ಲಿದ್ದಾರೆ.

ಈಡಿಗರನ್ನು ಮುಗಿಸುವ ಕೆಲಸವಾಗುತ್ತಿದೆ. ಬ್ರಹ್ಮಶ್ರಿ ನಾರಾಯಣ ಗುರೂಜಿ ನಿಗಮಕ್ಕೆ ಐದು ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದು ಸೇರಿದಂತೆ ಹದಿನಾರು ಬೇಡಿಕೆಗಳ ಈಡೇರಿಕೆಗಾಗಿ ಜ.6 ರಂದು ಕಲ್ಬುರ್ಗಿ ಜಿಲ್ಲೆಯ ಶಕ್ತಿ ಪೀಠದಿಂದ ಬೆಂಗಳೂರುವರೆಗೆ 42 ದಿನಗಳ ಪಾದಯಾತ್ರೆ ನಡೆಸಲಾಗುವುದೆಂದು ತಿಳಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಗಣತಿಯಲ್ಲಿ ಈಡಿಗ ಎಂದು ಬರೆಸಬೇಕು. 26 ಪಂಗಡಗಳಿವೆ. 10 ರಲ್ಲಿ ಈಡಿಗ, ಕಾಲಂ 9 ರಲ್ಲಿ ಅವರವರ ಜಾತಿ ಬರೆಸಿಕೊಳ್ಳಲಿ ಎಂದರು. ಕಾರ್ಯಕ್ರಮದಲ್ಲಿ ಬಸವಮೂರ್ತಿ ಕುಂಬಾರ ಗುಂಡಯ್ಯ ಸಾನಿಧ್ಯವಹಿಸಿದ್ದರು. ಈಡಿಗ ಮಹಾ ಮಂಡಳದ ರಾಜ್ಯಾಧ್ಯಕ್ಷರಾದ ಸಿ.ತಿಪ್ಪೇಸ್ವಾಮಿ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಜೆಪಿ ಮುಖಂಡರಾದ ರಘುಚಂದನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಹಿರಿಯೂರು ಮಾಜಿ ನಗರಸಭೆಯ ಅಧ್ಯಕ್ಷ ಅಜ್ಜಪ್ಪ. ಚಿತ್ರದುರ್ಗ ನಗರಾಧ್ಯಕ್ಷ ಲಕ್ಷ್ಮೀಕಾಂತ, ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ದಾಸಪ್ಪ, ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷರಾದ ಮಂಜುನಾಥ್ ಸೇರಿದಂತೆ ಪಿಲಾಜನಹಳ್ಳಿಯ ಮುಂಖಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *