CCL 2025: ಮೈಸೂರಲ್ಲಿ ಕಿಚ್ಚನ ಕ್ರಿಕೆಟ್ ದಸರಾ; ಸಿಸಿಲ್ ಸೆಮೀಸ್ ಹಾಗೂ ಫಿನಾಲೆ ಅರಮನೆ ನಗರಿಯಲ್ಲಿ!

ವಾರಾಂತ್ಯದಲ್ಲಿ ನಡೆಯುತ್ತಿರುವ 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಿಂದ ಪಂದ್ಯಕ್ಕೆ ತನ್ನ ಜನಪ್ರಿಯತೆಯನ್ನು ದ್ವಿಗುಣಗೊಳಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಯಾವ ಐಪಿಎಲ್​ಗೂ ಕಡಿಮೆ ಇಲ್ಲದಂತಹ ಪ್ರದರ್ಶನ ಸಿನಿ ತಾರೆಯಿಂದ ಹೊರಬರುತ್ತಿರುವುದು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್​ನಲ್ಲೂ ಯಾವ ವೃತ್ತಿಪರ ಕ್ರಿಕೆಟರ್​ಗೂ ಕಡಿಮೆ ಇಲ್ಲದಂತಹ ಪ್ರದರ್ಶನ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಕಂಡುಬರುತ್ತಿದೆ. ಇದೇ ಕಾರಣಕ್ಕೆ ಪ್ರತಿ ಪಂದ್ಯಕ್ಕೂ ಕ್ರೀಡಾಂಗಣಗಳು ಕಿಕ್ಕಿರಿದು ತುಂಬುತ್ತಿವೆ. ಅದರಲ್ಲೂ ಜನಪ್ರಿಯ ನಟರಿಂದಲೇ ತುಂಬಿ ತುಳುಕುತ್ತಿರುವ ಕರ್ನಾಟಕ ಬುಲ್ಡೋಜರ್ಸ್​ ತಂಡ ಕಿಚ್ಚ ಸುದೀಪ್ ನಾಯಕತ್ವದಲ್ಲಿ ಅಜೇಯ ಓಟವನ್ನು ಮುಂದುವರೆಸಿರುವುದು ಕರ್ನಾಟಕದಲ್ಲಿ ಈ ಲೀಗ್​ಗೆ ಇನ್ನಷ್ಟು ಮನ್ನಣೆ ಸಿಗುವಂತೆ ಮಾಡಿದೆ. ಈ ನಡುವೆ ಕನ್ನಡದ ಸಿಸಿಎಲ್ ಪ್ರಿಯರಿಗೆ ಸಂತಸ ಸುದ್ದಿಯೊಂದು ಸಿಕ್ಕಿದ್ದು, ಈ ಲೀಗ್​ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೈಸೂರು ಆತಿಥ್ಯವಹಿಸಲಿದೆ. ಸ್ವತಃ ಈ ವಿಚಾರವನ್ನು ಕರ್ನಾಟಕ ಬುಲ್ಡೋಜರ್ಸ್​ ತಂಡದ ನಾಯಕ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

https://0b63d7563bd4432d3a4167b5d232a80a.safeframe.googlesyndication.com/safeframe/1-0-41/html/container.html

ಕಿಚ್ಚನ ಒತ್ತಡಕ್ಕೆ ಮಣಿದ ಆಯೋಜಕರು

ವಾಸ್ತವವಾಗಿ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ವೇಳಾಪಟ್ಟಿಯಲ್ಲಿ ಲೀಗ್ ಹಂತದ ಪಂದ್ಯಗಳಿಗೆ ಮಾತ್ರ ಸ್ಥಳವನ್ನು ನಿಗದಿಪಡಿಸಲಾಗಿತ್ತು. ಉಳಿದಂತೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಸ್ಥಳ ನಿಗದಿಪಡಿಸಲಾಗಿರಲಿಲ್ಲ. ಆದರೆ ವರದಿಯ ಪ್ರಕಾರ ಈ ಲೀಗ್​ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಕೊಯಮತ್ತೂರು ಹಾಗೂ ಸೇಲಂನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆಯೋಜಕರ ಎದುರು ಪಟ್ಟು ಹಿಡಿದು ಕುಳಿತ ಕಿಚ್ಚ ಸುದೀಪ್ ಕೊನೆಗೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿಯ ಸಿಸಿಎಲ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಕರ್ನಾಟಕದಲ್ಲಿ ಅದರಲ್ಲೂ ಮೈಸೂರಿನಲ್ಲಿ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಾಸ್ತವವಾಗಿ ಉದ್ಘಾಟನಾ ಪಂದ್ಯವನ್ನೂ ಈ ಮೊದಲು ಹೈದರಾಬಾದ್​ನಲ್ಲಿ ನಡೆಸಲು ತೀಮಾರ್ನಿಸಲಾಗಿತ್ತು. ಆಗಲೂ ಆಯೋಜಕರ ಮುಂದೆ ಕುಳಿತಿದ್ದ ಕಿಚ್ಚ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಕಿಚ್ಚನ ಈ ಶ್ರಮಕ್ಕೆ ಪ್ರತಿಫಲವಾಗಿ ಉದ್ಘಾಟನಾ ಪಂದ್ಯದ ಎಲ್ಲಾ ಟಿಕೆಟ್​ಗಳು ಸೋಲ್ಡ್ ಔಟ್ ಆಗಿ ಇಡೀ ಕ್ರೀಡಾಂಗಣವೇ ಪ್ರೇಕ್ಷಕರಿಂದ ತುಂಬಿ ತುಳುಕಿತ್ತು. ಇದೀಗ ಮೈಸೂರಿನಲ್ಲಿ ನಡೆಯುವ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೂ ಇದೇ ರೀತಿಯ ಪ್ರೋತ್ಸಾಹ ಸಿಗುವ ನಿರೀಕ್ಷೆಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವಿದೆ.

ಮೊದಲ ಬಾರಿಗೆ ಮೈಸೂರಿನಲ್ಲಿ ಸಿಸಿಎಲ್

ಕಿಚ್ಚನ ಈ ಮನವಿಗೆ ಕಾರಣವೂ ಇದ್ದು, ಈ ಲೀಗ್​ನಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಆಡಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಆಡಿರುವ ಮೂರು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದುಕೊಂಡು ನಾಕೌಟ್ ಸುತ್ತಿಗೆ ಭಾಗಶಃ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಹೀಗಾಗಿ ಕನ್ನಡಿಗರ ಬೆಂಬಲದೊಂದಿಗೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವನ್ನು ಆಡಬೇಕೆಂಬ ಇರಾದೆ ಕಿಚ್ಚ ಸುದೀಪ್ ಅವರದ್ದು. ಅದರಂತೆ ಕಿಚ್ಚನ ಮನವಿಗೆ ಒಪ್ಪಿಗೆ ಸೂಚಿಸಿರುವ ಆಯೋಜಕರು ಮೈಸೂರಿನಲ್ಲಿ ಸಿಸಿಎಲ್ ನಾಕೌಟ್ ಪಂದ್ಯಗಳನ್ನು ಆಯೋಜಿಸುತ್ತಿದ್ದಾರೆ. ಈ ಮೂಲಕ 11 ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲ್ಲಿವೆ. ಅದರಲ್ಲೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತಿರುವುದು ಮೈಸೂರಿನ ಜನತೆಗೆ ಎರಡನೇ ದಸರಾದ ರಂಗು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

https://twitter.com/KicchaSudeep/status/1891854620231946550

ಮಾಹಿತಿ ನೀಡಿದ ಕಿಚ್ಚ ಸುದೀಪ್

ಇನ್ನು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಿಚ್ಚ ಸುದೀಪ್, ಮೈಸೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲ್ಲಿವೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಸಿಸಿಎಲ್ ನಾಕೌಟ್ ಸುತ್ತಿನ ಪಂದ್ಯಗಳು ಅಂದರೆ ಸೆಮಿಫೈನಲ್ ಪಂದ್ಯಗಳು ಮಾರ್ಚ್​ 1 ರಂದು ಹಾಗೂ ಫೈನಲ್ ಪಂದ್ಯ ಮಾರ್ಚ್​ 2 ರಂದು ನಡೆಯಲ್ಲಿವೆ. ಮೈಸೂರಿನಲ್ಲಿ ಈ ನಾಕೌಟ್ ಪಂದ್ಯಗಳನ್ನು ಆಯೋಜಿಸಲು ಅನುವು ಮಾಡಿಕೊಟ್ಟ ಸಿಸಿಎಲ್ ಹಾಗೂ ಕೆಎಸ್​ಸಿಎಗೆ ಧನ್ಯವಾದಗಳು. ನಾವು ನಿಮ್ಮೆಲ್ಲರನ್ನೂ ಅಲ್ಲಿ ನೋಡಲು ಎದುರು ನೋಡುತ್ತಿದ್ದೇವೆ. ಟಿಕೆಟ್‌ಗಳ ಲಭ್ಯತೆ ಮತ್ತು ಆನ್‌ಲೈನ್ ಮಾರಾಟ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.

Source : https://tv9kannada.com/sports/cricket-news/kichcha-sudeep-ccl-2025-mysore-psr-980348.html

Leave a Reply

Your email address will not be published. Required fields are marked *