
ಬೆಂಗಳೂರು, ಫೆಬ್ರವರಿ 17: ಮಾರ್ಚ್ 3 ರಿಂದ ವಿಧಾನಮಂಡಲ ಅಧಿವೇಶನ (Karnataka Legislative session) ಪ್ರಾರಂಭವಾಗುತ್ತದೆ. ಮಾರ್ಚ್ ಮಾರ್ಚ್ 7ರಂದು ಬಜೆಟ್ (Karnataka Budget) ಮಂಡಿಸುತ್ತೇನೆ. ಬಳಿಕ 3 ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah ) ತಿಳಿಸಿದರು.
ಬಜೆಟ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳೊಂದಿಗೆ ಈಗಾಗಲೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಇಲಾಖೆಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಫೆ.17) ಕೂಡ ಸಭೆಗಳನ್ನು ನಡೆಸಿದರು. ಇಂದು ರೈತರು ಮತ್ತು ರೈತ ಸಂಘ-ಸಂಸ್ಥೆಗಳ ಜೊತೆ ಸಭೆ ನಡೆಸಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಆದ ನಾನು ಸದಾ ರೈತ ಕುಲದ ಪರವಾಗಿ ಇರುತ್ತೇನೆ. ರೈತರ ಬೇಡಿಕೆಗಳನ್ನು ನಿರಂತರವಾಗಿ ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ. ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೃಷಿಯಲ್ಲೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆದ್ಯತೆ” ಎಂದು ಭರವಸೆ ನೀಡಿದರು.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇವತ್ತು ಕೂಡ ಸಭೆ ಮಾಡಿದ್ದೀನಿ. ಕರ್ನಾಟಕ ಸರ್ಕಾರ ಯಾವಾಗಲೂ ರೈತರ ಹಿತ ಕಾಪಾಡಲು ಹಿಂದೆ ಬಿದ್ದಿಲ್ಲ. ಯಾವತ್ತೂ ಕೂಡ ರೈತರ ಜೊತೆ ಇರುತ್ತೇವೆ. ಕೃಷಿಕರ ಜೊತೆ ಇರುತ್ತೇವೆ ಎಂಬ ಮಾತು ಕೊಡುತ್ತೇನೆ. ಬೆಲೆ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಧಾರ. ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ ಎಂದು ಹೇಳಿದರು.
ಮೆಟ್ರೋ ರೈಲಿನ ದರ ನಿಗದಿ ಕಮಾಡಲು ಕೇಂದ್ರ ಸರ್ಕಾರ ಕಮಿಟಿ ಮಾಡಿದೆ. ಅದರಲ್ಲಿ ಇಬ್ಬರು ಕೇಂದ್ರದ ಅಧಿಕಾರಿಗಳು ಇರುತ್ತಾರೆ, ಒಬ್ಬರು ರಾಜ್ಯ ಸರ್ಕಾರದವರು ಇರುತ್ತಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ದರ ಏರಿಕೆ ಮಾಡಿವೆ. ಬೆಲೆ ನಿಗದಿ ಮಾಡಲು ನಾವು ಮನವಿ ಕೊಡುತ್ತೇವೆ. ಆದರೆ,ಬೆಲೆ ನಿಗದಿ ಮಾಡುವುದು ಕಮಿಟಿಯವರು ಎಂದು ತಿಳಿಸಿದರು.