ರಾಜ್ಯದಲ್ಲಿ ಚಳಿ ಮಾಯ, ಶುರುವಾಯ್ತು ಬೇಸಿಗೆ: ಕರಾವಳಿಗೆ ‘ಯೆಲ್ಲೋ ಅಲರ್ಟ್’,ಇಲ್ಲಿದೆ ಜಿಲ್ಲಾವಾರು ಹವಾಮಾನ ವರದಿ.

ಬೆಂಗಳೂರು: ಫೆಬ್ರವರಿ ತಿಂಗಳ ಚಳಿ ಕಣ್ಮರೆಯಾಗುತ್ತಿದ್ದು, ರಾಜ್ಯಾದ್ಯಂತ ಬೇಸಿಗೆಯ ಬಿಸಿಲಿನ ಝಳ ಮುನ್ಸೂಚನೆಗೂ ಮುನ್ನವೇ ಆರಂಭವಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗೆ (36°C) ಏರಿಕೆಯಾಗಿದ್ದು, ಜನರ ಮೈ ಬೆವರಲಾರಂಭಿಸಿದೆ. ಕರಾವಳಿ ಭಾಗದಲ್ಲಿ ತೇವಾಂಶ ಮತ್ತು ಆರ್ದ್ರತೆಯ ಪ್ರಮಾಣ ಬರೋಬ್ಬರಿ ಶೇ. 85 ರಷ್ಟು ಹೆಚ್ಚಳವಾಗಿದ್ದು, ಮುಂಬರುವ ಕಠಿಣ ಬೇಸಿಗೆಯ ಮುನ್ಸೂಚನೆ ನೀಡುತ್ತಿದೆ.

ಕರಾವಳಿಗೆ ಯೆಲ್ಲೋ ಅಲರ್ಟ್ (Yellow Alert): ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಖದ ಗಾಳಿ (Heat wave) ಹಾಗೂ ತೀವ್ರ ಆರ್ದ್ರತೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಫೆಬ್ರವರಿ 17 ಹಾಗೂ 18 ರಂದು ಕರಾವಳಿ ಭಾಗಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಬೆಂಗಳೂರು ಹವಾಮಾನ ಹೇಗಿದೆ? ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶುಭ್ರ ಆಕಾಶವಿದ್ದು, ಮುಂಜಾನೆ ವೇಳೆ ಕೊಂಚ ಮಂಜು ಮುಸುಕಿದ ವಾತಾವರಣ ಇರಲಿದೆ. ಮುಂದಿನ ಒಂದು ವಾರಗಳ ಕಾಲ ರಾಜ್ಯದಾದ್ಯಂತ ಬಹುತೇಕ ಒಣ ಹವೆ ಮುಂದುವರಿಯಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಕರ್ನಾಟಕದ ಇತರ ಭಾಗಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುತ್ತಿರುವುದು ವಿಶಿಷ್ಟವಾಗಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟಿದೆ ತಾಪಮಾನ?

1. ಕರಾವಳಿ ಕರ್ನಾಟಕ: ಇಲ್ಲಿ ಬಿಸಿಲಿನ ಜೊತೆಗೆ ಸೆಕೆಯ ಅನುಭವ ಹೆಚ್ಚಾಗಿದೆ.

  • ಕಾರವಾರ: 36.6°C (ರಾಜ್ಯದಲ್ಲೇ ಅತಿ ಹೆಚ್ಚು)
  • ಹೊನ್ನಾವರ: 33.8°C
  • ಮಂಗಳೂರು ವಿಮಾನ ನಿಲ್ದಾಣ: 33.6°C
  • ಕನಿಷ್ಠ ತಾಪಮಾನವು 19.2°C ಯಿಂದ 22.7°C ಆಸುಪಾಸಿನಲ್ಲಿದೆ.

2. ದಕ್ಷಿಣ ಒಳನಾಡು:

  • ಬಳ್ಳಾರಿಯಲ್ಲಿ ತಾಪಮಾನ 36°C ಗೆ ತಲುಪಿ ಬಿಸಿಲಿನ ಝಳ ಹೆಚ್ಚಾಗಿದೆ.
  • ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಚಿಂತಾಮಣಿ, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 30°C ಯಿಂದ 32°C ನಷ್ಟಿದೆ.
  • ಚಿಂತಾಮಣಿ, ಹಾಸನದಲ್ಲಿ ಕನಿಷ್ಠ ತಾಪಮಾನ 11°C-12°C ದಾಖಲಾಗಿದ್ದು, ರಾತ್ರಿ ವೇಳೆ ತುಸು ಚಳಿಯ ಅನುಭವವಿದೆ.

3. ಉತ್ತರ ಒಳನಾಡು:

  • ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 34.6°C ದಾಖಲಾಗಿದೆ.
  • ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಗರಿಷ್ಠ ತಾಪಮಾನ 31°C ಯಿಂದ 33°C ನಷ್ಟಿದೆ. ಧಾರವಾಡ ಮತ್ತು ಬೆಳಗಾವಿಯಲ್ಲಿ ಕನಿಷ್ಠ ತಾಪಮಾನ 14°C ದಾಖಲಾಗಿದೆ.

ಸಾರ್ವಜನಿಕರಿಗೆ ಸಲಹೆ: ಬಿಸಿಲಿನ ತಾಪಮಾನ ಏಕಾಏಕಿ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ. ಮಧ್ಯಾಹ್ನದ ವೇಳೆ ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಆಗಾಗ್ಗೆ ನೀರು, ಮಜ್ಜಿಗೆ, ಎಳನೀರು ಅಥವಾ ಹಣ್ಣಿನ ರಸ ಸೇವಿಸುತ್ತಿರಿ.

Leave a Reply

Your email address will not be published. Required fields are marked *