Sports News: ಭಾರತ ಪುರುಷರ ಕ್ರಿಕೆಟ್ ತಂಡವು ಇತ್ತೀಚೆಗೆ ಮೈದಾನದ ಪ್ರದರ್ಶನಕ್ಕಿಂತ ಹೊರಗಿನ ವಿಚಾರಗಳಿಂದಲೇ ಹೆಚ್ಚಿನ ಸುದ್ದಿಯಲ್ಲಿದೆ. ಟೆಸ್ಟ್ ಸರಣಿಯಲ್ಲಿ ಸತತ ಸೋಲು, ಕೋಚ್ ಗೌತಮ್ ಗಂಭೀರ್ ವಿರುದ್ಧ ಬರುತ್ತಿರುವ ಆರೋಪಗಳು ಹಾಗೂ ಹಿರಿಯ ತಾರೆಯರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಉಂಟಾದ ಅನಿಶ್ಚಿತತೆಯ ನಡುವೆ ತಂಡದಲ್ಲಿ ಗೊಂದಲ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನಕ್ಕೂ ಮುನ್ನ ಬಿಸಿಸಿಐ ತುರ್ತು ಸಭೆ ಕರೆದಿದೆ. ಸ್ಪೋರ್ಟ್ಸ್ ಸ್ಟಾರ್ ವರದಿಯ ಪ್ರಕಾರ, ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಜಂಟಿ ಕಾರ್ಯದರ್ಶಿ ಪ್ರಭತೇಜ್ ಸಿಂಗ್ ಭಾಟಿಯಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಜರಿರಲಿದ್ದಾರೆ. ಹೊಸ ಅಧ್ಯಕ್ಷ ಮಿಥುನ್ ಮನ್ಹಾಸ್ ಭಾಗವಹಿಸುವ ಬಗ್ಗೆ ಸ್ಪಷ್ಟತೆ ಇಲ್ಲ.
ಪಂದ್ಯದ ದಿನವೇ ಸಭೆ ನಡೆಯುತ್ತಿರುವುದರಿಂದ ಕೊಹ್ಲಿ, ರೋಹಿತ್ ಸೇರಿದಂತೆ ಹಿರಿಯ ಆಟಗಾರರನ್ನು ಸಭೆಗೆ ಕರೆಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಪ್ರಮುಖ ಅಜೆಂಡಾ:
ತಂಡದ ಆಯ್ಕೆ ಸ್ಥಿರತೆಗೆ ಸಂಬಂಧಿಸಿದ ಚರ್ಚೆ
ಇತ್ತೀಚಿನ ಟೆಸ್ಟ್ ಸರಣಿ ಸೋಲಿನಲ್ಲಿ ಕಂಡುಬಂದ ದೌರ್ಬಲ್ಯಗಳ ವಿಶ್ಲೇಷಣೆ
ಕೋಚ್–ಸೆಲೆಕ್ಷನ್ ಸಮಿತಿಯ ಕಾರ್ಯಪದ್ದತಿ ಕುರಿತು ಸ್ಪಷ್ಟತೆ
ಭವಿಷ್ಯದ ಕ್ರಮ ಮತ್ತು ತಂಡದ ರಚನೆಗೆ ಸಂಬಂಧಿಸಿದ ಮಾರ್ಗಸೂಚಿಗಳ ರೂಪುರೇಷೆ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಉತ್ತಮ ಫಾರ್ಮ್ಗೆ ಮರಳಿರುವ ಹಿನ್ನೆಲೆಯಲ್ಲಿ, ಅವರ ಭವಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಈ ತುರ್ತು ಸಭೆ ಮಹತ್ವ ಪಡೆದುಕೊಂಡಿದೆ. ತಂಡದ ಒಳಗಿನ ನಿರ್ಧಾರಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟತೆ ಮೂಡಿಸಲು ಬಿಸಿಸಿಐ ಈ ಹೆಜ್ಜೆ ತೆಗೆದುಕೊಂಡಿದೆ.