ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 29 ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಪ್ರಾಂಶುಪಾಲರ ಮೇಲ್ವಿಚಾರಣೆ, ಉಪನ್ಯಾಸಕರ ಪರಿಣಾಮಕಾರಿ ಬೋಧನೆ, ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಹಾಗೂ ಪೋಷಕರ ಪ್ರೋತ್ಸಾಹ ಪ್ರಮುಖ ಪಾತ್ರವಹಿಸುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ತಿಮ್ಮಯ್ಯ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗಾಗಿ ಶನಿವಾರ ಮಧ್ಯಾಹ್ನ ರೋಟರಿ ಭವನದಲ್ಲಿ ಆಯೋಜಿಸಿದ್ದ “ಫಲಿತಾಂಶ ಸುಧಾರಣಾ ಸಮಾಲೋಚನಾ ಸಭೆ” ಯನ್ನು ಉದ್ಘಾಟಿಸಿ ಮಾತಾನಾಡಿದರು.
ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ಖಾಲಿ ಹುದ್ದೆ ಇರುವ ಕಾಲೇಜಿಗಳಿಗೆ ನಿಯೋಜಿಸಿ ವಿದ್ಯಾರ್ಥಿಗಳ ಪಾಠಪ್ರವಚನಕ್ಕೆ ಯಾವುದೇ ತೊಂದರೆಯಾಗದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕ್ರಮವಹಿಸಲಾಗಿದೆ. ನಮ್ಮ ಜಿಲ್ಲೆಯ ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖಾ ನಿಯಮಗಳನ್ವಯ ಹೊಸ ಕಾರ್ಯಸೂಚಿಗಳ ಪಟ್ಟಿ ತಯಾರಿಸಲಾಗಿದ್ದು ಅವುಗಳನ್ನು ಎಲ್ಲಾ ಉಪನ್ಯಾಸಕರು ಪಾಲನೆ ಮಾಡುವ ಮೂಲಕ ಫಲಿತಾಂಶ ವೃದ್ದಿಗೆ ಶ್ರಮಿಸುವಂತೆ ಕರೆ ನೀಡಿದರು.
ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಮಾತನಾಡಿ ಪ್ರತಿ ಉಪನ್ಯಾಸಕರು ಇಲಾಖಾ ಆದೇಶಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಇನ್ನಷ್ಟು ಪರಿಣಾಮಕಾರಿ ಬೋಧನೆಗೆ ಮುಂದಾಗಿ ರಾಜ್ಯಮಟ್ಟದ ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲ ಹದಿನೈದು ಸ್ಥಾನಗಳಲ್ಲಿ ಕಾಣಿಸಿಕೊಳ್ಳಲು ಸೇವಾ ಬದ್ದತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದರು. ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಸ್.ದೇವೇಂದ್ರಪ್ಪ ಮಾತನಾಡಿ ಯಾವುದೇ ಉಪನ್ಯಾಸಕ ತನ್ನಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ತಿಳಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಮಾತ್ರ ಉತ್ತಮ ಉಪನ್ಯಾಸಕನಾಗಲು ಸಾಧ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಳಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್ ವಸಂತಕುಮಾರ್ ವಹಿಸಿದ್ದರು. ಸಭೆಯಲ್ಲಿ ನಾಯಕನಹಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್,ಸರೋಜಮ್ಮ,ಪುಷ್ಪಲತಾ,ದೇವರಾಜ್,ನಾಗರಾಜಪ್ಪ,ಮಂಜನಾಯ್ಕ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಂ.ಶ್ರೀನಿವಾಸ್,ಉಪನ್ಯಾಸಕರಾದ ಅಶ್ವಥರೆಡ್ಡಿ ಸಹಿತ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕಿ ಜಾನಕಮ್ಮ ಪ್ರಾರ್ಥಿಸಿದರು. ಬೇಡರೆಡ್ಡಿಹಳ್ಳಿ ಕಾಲೇಜಿನ ಪ್ರಾಂಶುಪಾಲರಾದ ಭೀಮರೆಡ್ಡಿ ಸ್ವಾಗತಿಸಿದರು, ಚಳ್ಳಕೆರೆ ಬಾಪೂಜಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಜಗದೀಶ್ ವಂದಿಸಿದರು.ಉಪನ್ಯಾಸಕ ನಾಗರಾಜ್ ಬೆಳಗಟ್ಟ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು