Pariksha Pe Charcha 2025: ಹೊಸ ಆಯಾಮದಲ್ಲಿ ಪರೀಕ್ಷಾ ಪೆ ಚರ್ಚಾ, ಮೋದಿ ಜತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು

ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸುವ ವಾರ್ಷಿಕ ಸಂವಾದ ‘ಪರೀಕ್ಷಾ ಪೆ ಚರ್ಚಾ’ಗೆ ಈ ಬಾರಿ ಹೊಸ ಆಯಾಮ ದೊರೆತಿದೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದು, ವಿವಿಧ ಕ್ಷೇತ್ರಗಳ ಏಳು ಸೆಲೆಬ್ರಿಟಿಗಳು ಪರೀಕ್ಷೆಯ ಸಮಯದಲ್ಲಾಗುವ ಒತ್ತಡವನ್ನು ನಿವಾರಿಸುವ ಕುರಿತು ಸಲಹೆ ನೀಡಲಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ಫೆಬ್ರವರಿ 10ರಂದು ನವದೆಹಲಿಯಲ್ಲಿರುವ ಭಾರತ್ ಮಂಟಪದಲ್ಲಿ ನಡೆಯುತ್ತಿದೆ. ಈ ಮೊದಲು ಕೇವಲ ಪ್ರಧಾನಿಯೊಂದಿಗೆ ಮಾತ್ರ ಸಂವಾದ ನಡೆಯುತ್ತಿತ್ತು ಆದರೆ ಈಗ ಸೆಲೆಬ್ರಿಟಿಗಳು ಕೂಡ ಇದರ ಭಾಗವಾಗಿರಲಿದ್ದಾರೆ.

ಸದ್ಗುರು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಮೇರಿ ಕೋಮ್ ಮತ್ತು ಅವನಿ ಲೇಖರಾ ಸಲಹೆಗಳನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸುವ ವಿಶೇಷ ಸಂವಾದ, ಇದರಲ್ಲಿ ಅವರು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ.

ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ 35 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರುತ್ತಾರೆ. 50-60 ವಿದ್ಯಾರ್ಥಿಗಳು ಮತ್ತು ಇತರೆ ಪ್ರಮುಖರು ಪಾಲ್ಗೊಳ್ಳಿಲಿದ್ದಾರೆ. ಈ ಬಾರಿ ಸುಮಾರು ಆರುನೂರು ವಿದ್ಯಾರ್ಥಿಗಳು ಈ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಿದ್ದಾರೆ.

ಆದಾಗ್ಯೂ, ಈ ಬಾರಿ ಪ್ರಧಾನಿ ಮೋದಿಯವರೊಂದಿಗಿನ ಈ ಚರ್ಚೆಗಾಗಿ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ದಾಖಲೆಯ 3.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರೂ ಈಗ ಫೆಬ್ರವರಿ 10 ರಂದು ಈ ಚರ್ಚೆಯನ್ನು ಕೇಳಲು ಸಾಧ್ಯವಾಗುತ್ತದೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 14, 2024 ರಿಂದ ಪ್ರಾರಂಭವಾಗಿ ಜನವರಿ 14, 2025 ರವರೆಗೆ ನಡೆಯಿತು. ಒಟ್ಟು 2,500 ಆಯ್ದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಕಲಿಕಾ ಅನುಭವವನ್ನು ಹೆಚ್ಚಿಸಲು ಶಿಕ್ಷಣ ಸಚಿವಾಲಯದಿಂದ ಪಿಪಿಸಿ ಕಿಟ್‌ಗಳನ್ನು ಸ್ವೀಕರಿಸಲಿದ್ದಾರೆ.

ಪರೀಕ್ಷಾ ಪೆ ಚರ್ಚಾದಲ್ಲಿ ವಿದ್ಯಾರ್ಥಿಗಳು ಕೇಳಬಹುದಾದ ಪ್ರಶ್ನೆಗಳಿವು

  • ದೀರ್ಘ ಸಮಯದ ಅಧ್ಯಯನ, ಅತಿಯಾಗಿ ಸ್ಕ್ರೀನ್ ನೋಡುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ತಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು?
  • ಶಾಲೆ, ಟ್ಯೂಷನ್, ಸ್ವ-ಅಧ್ಯಯನ ಮತ್ತು ವೈಯಕ್ತಿಕ ಸಮಯದ ನಡುವೆ ಸಮತೋಲನ ಸಾಧಿಸುವುದು ವಿದ್ಯಾರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ. ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ದೈನಂದಿನ ದಿನಚರಿಯನ್ನು ರೂಪಿಸಲು ಕೆಲವು ಪ್ರಾಯೋಗಿಕ ತಂತ್ರಗಳನ್ನು ಹಂಚಿಕೊಳ್ಳಬಹುದೇ?
  • ತಾವು ಅನುತ್ತೀರ್ಣರಾಗುತ್ತೇವೆ ಎಂಬ ಭಯವು ವಿದ್ಯಾರ್ಥಿಗಳನ್ನು ದಿಟ್ಟ ಹೆಜ್ಜೆಗಳನ್ನು ಇಡದಂತೆ ತಡೆಯುತ್ತದೆ. ಈ ಭಯವನ್ನು ನಿವಾರಿಸಿಕೊಂಡು ಆತ್ಮವಿಶ್ವಾಸದ ಹಾಗೂ ಅಪಾಯವನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಹೇಗೆ?
  • ಅತ್ಯುತ್ತಮ ಪ್ರಯತ್ನ ಮಾಡಿದರೂ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಹೇಗಿದೆಯೋ ಹಾಗೆ ಸ್ವೀಕರಿಸುವುದು, ಭವಿಷ್ಯದ ಸವಾಲುಗಳಿಗೆ ತಮ್ಮನನ್ನು ಸಿದ್ಧಪಡಿಸಿಕೊಳ್ಳುವುದು ಹೇಗೆ?

Source : https://tv9kannada.com/education/pariksha-pe-charcha-to-be-held-in-new-format-to-bring-in-more-personalities-along-with-pm-narendra-modi-kannada-news-nyr-974645.html

Leave a Reply

Your email address will not be published. Required fields are marked *