
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ.01: ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ಆದರೆ ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರು. ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿ
ಮಾಡಲಾಯಿತು. 19 ತಿಂಗಳಿಂದ ನಿರಾಂತಕವಾಗಿ ಯೋಜನೆಗಳು ಮುಂದುವರೆದಿವೆ. ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ
ಮಾತುಗಳು ಕೇಳಿ ಬರುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಶನಿವಾರ ನಗರದ ಜಿ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕವಾಗಿ ರೂ.60,000 ಕೋಟಿ ಖರ್ಚು ಮಾಡುತ್ತಿದೆ. ಪಕ್ಷಭೇದವಿಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಷಿಕವಾಗಿ ರೂ.240 ಕೋಟಿಗೂ ಅಧಿಕ, ಅಂದರೆ ಪ್ರತಿ ತಿಂಗಳಿಗೆ ರೂ.20 ಕೋಟಿಯಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಇದು ಹುಡುಗಾಟದ ವಿಷಯವಲ್ಲ, ಪಂಚಗ್ಯಾರಂಟಿಗಳು ಜನಪ್ರಿಯವಾಗಿವೆ ಇದರೊಂದಿಗೆ ರಾಜ್ಯದ ಇತರೆ ಅಭಿವೃದ್ಧಿಗಳಿಗೂ ಸರ್ಕಾರ ಒತ್ತು ನೀಡಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಗೃಹಜ್ಯೋತಿ
ಯೋಜನೆಯಡಿ 3,78,084 ಫಲಾನುಭವಿಗಳ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ
ತಿಂಗಳು ಸರಿ ಸುಮಾರು ರೂ.14 ಕೋಟಿ ವ್ಯಯಿಸಲಾಗುತ್ತಿದೆ. ಕಳೆದ 17 ತಿಂಗಳಿನಲ್ಲಿ ರೂ.234 ಕೋಟಿ ಅಧಿಕ ಹಣವನ್ನು
ಯೋಜನೆಗಾಗಿ ಸರ್ಕಾರ ಬಿಡುಗಡೆ ಮಾಡಿದೆ.
ಗೃಹಲಕ್ಷ್ಮೀ ಯೋಜನೆಯಡಿ 3,96,025 ಫಲಾನುಭವಿಗಳಿಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ರೂ.2000 ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರ ಮೊತ್ತ ರೂ.1092 ಕೋಟಿಗೂ ಅಧಿಕವಾಗಿದೆ.
ಅನ್ನಭಾಗ್ಯ ಯೋಜನೆಯಡಿ 3,65,890 ಫಲಾನುಭವಿಗಳಿಗೆ 7014 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. 5 ಕೆ.ಜಿ ಅಕ್ಕಿ ಪರ್ಯಾಯವಾಗಿ ರೂ.170 ರಂತೆ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ರೂ.20 ಕೋಟಿ ಜಮೆ ಮಾಡಲಾಗಿದೆ.
ಶಕ್ತಿ ಯೋಜನೆಯಡಿ ಚಿತ್ರದುರ್ಗ ವಿಭಾಗದ ಬಸ್ಗಳಲ್ಲಿ ಪ್ರತಿನಿತ್ಯ 62,000 ಕ್ಕೂ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕಾಗಿ ರೂ.147.13 ಕೋಟಿ ಹಣವನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಸರ್ಕಾರ ಪಾವತಿಸಿದೆ.
ಜಿಲ್ಲೆಯಲ್ಲಿ 26,086 ಪದವಿ ಹಾಗೂ 291 ಡಿಪ್ಲೋಮೊ ವ್ಯಾಸಾಂಗ ಪೂರ್ಣಗೊಳಿಸಿದ ಯುವಕರು ಯುವನಿಧಿಯಡಿ ನೊಂದಣಿ ಮಾಡಿಕೊಂಡಿದ್ದಾರೆ.
ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೆ ರೂ.3000 ಹಾಗೂ ಡಿಪ್ಲೋಮೊ ಮುಗಿಸಿದವರಿಗೆ ರೂ.1,500 ಮಾಸಿಕ ನಿರುದ್ಯೋಗ ಭತ್ಯ ನೀಡಲಾಗುತ್ತಿದೆ. ಇದುವರೆಗೂ ರೂ.7.8 ಕೋಟಿ ಯುವನಿಧಿಯಡಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.