ದಸರಾ ರಜೆ ವಿಸ್ತರಣೆ: ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ ಘೋಷಣೆ!

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಖುಷಿ ದೀರ್ಘವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಅಕ್ಟೋಬರ್ 18ರವರೆಗೆ ದಸರಾ ರಜೆ ವಿಸ್ತರಣೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವು ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ.

ರಜೆ ವಿಸ್ತರಣೆ ಹಿನ್ನೆಲೆ

ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಮೀಕ್ಷೆ ಕಾರ್ಯ ಅಕ್ಟೋಬರ್ 7ರೊಳಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಹಲವೆಡೆ ಈ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ 10 ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಿದ್ದಾರೆ.

ಶಿಕ್ಷಕರ ಮನವಿ ಮೇರೆಗೆ ಕ್ರಮ

ರಾಜ್ಯದಲ್ಲಿ 1.20 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯ ಶಿಕ್ಷಕರ ಸಂಘವು ದಸರಾ ರಜೆ ವಿಸ್ತರಿಸಲು ಸರ್ಕಾರಕ್ಕೆ ಮನವಿ ಮಾಡಿತ್ತು. ಇದರ ಆಧಾರದ ಮೇಲೆ ಅಕ್ಟೋಬರ್ 18ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಮುಖ್ಯಮಂತ್ರಿಗಳು ತಿಳಿಸಿದ್ದಾರೆ – ಸಮೀಕ್ಷೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ 8 ವರ್ಕಿಂಗ್ ರಜೆಗಳು ಹಾಗೂ ಸರ್ಕಾರಿ ರಜೆಗಳು ಲಭ್ಯವಿರುತ್ತವೆ. ಸಮೀಕ್ಷೆ ಪೂರ್ಣಗೊಳಿಸದವರು ಅಥವಾ ನಿರ್ಲಕ್ಷ್ಯ ತೋರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಜಿಲ್ಲಾವಾರು ಸಮೀಕ್ಷೆಯ ಪ್ರಗತಿ

ಕೊಪ್ಪಳ: ಶೇ. 97%

ಉಡುಪಿ: ಶೇ. 63%

ದಕ್ಷಿಣ ಕನ್ನಡ: ಶೇ. 60%
ಬೆಂಗಳೂರಿನಲ್ಲಿ ಮಾತ್ರ 46 ಲಕ್ಷ ಮನೆಗಳ ಸಮೀಕ್ಷೆ ನಡೆಯುತ್ತಿದ್ದು, 6,700 ಶಿಕ್ಷಕರು ಮತ್ತು ಒಟ್ಟು 27,000 ಗಣತಿದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ 10–15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ.

ಸರ್ವೇ ವೇಳೆ ಮೃತರಾದವರಿಗೆ ಪರಿಹಾರ

ಸಮೀಕ್ಷೆ ಕಾರ್ಯದ ವೇಳೆ ಸಾವನ್ನಪ್ಪಿದ ಮೂರು ಮಂದಿ ಶಿಕ್ಷಕರ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಸಮೀಕ್ಷೆ ಪೂರ್ಣಗೊಳ್ಳುವ ಗುರಿ

ಸರ್ಕಾರವು ನರಕ ಚತುರ್ದಶಿಯೊಳಗೆ ಸಮೀಕ್ಷೆ ಸಂಪೂರ್ಣ ಮುಗಿಸಲು ಸೂಚನೆ ನೀಡಿದೆ. ಶಿಕ್ಷಕರೂ ಸಹ ಇದೇ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು:

“ಸೆಪ್ಟೆಂಬರ್ 2ರಿಂದ ರಾಜ್ಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಕೆಲವೆಡೆ ಕಾರ್ಯ ಪೂರ್ಣಗೊಂಡಿದೆ, ಕೆಲವೆಡೆ ಇನ್ನೂ ನಡೆಯುತ್ತಿದೆ. ಅಕ್ಟೋಬರ್ 18ರವರೆಗೆ ವಿಸ್ತರಿಸಿ ಈ ಕಾರ್ಯ ಸಂಪೂರ್ಣಗೊಳಿಸಲು ಎಲ್ಲರೂ ಸಹಕಾರ ನೀಡಬೇಕು.”

Views: 103

Leave a Reply

Your email address will not be published. Required fields are marked *