ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 02
ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಯ ಬಗ್ಗೆ ಮಸೂದೆಯೊಂದನ್ನು ರೂಪಿಸಿ ಸಮರ್ಪಕ ಚರ್ಚೆಗೂ ಅವಕಾಶ ಕೊಡದೆ ಸಂಖ್ಯಾಬಲದಿಂದ ಅಂಗೀಕಾರ ಪಡೆದಿದೆ. ಆದರೆ ಈ ಮಸೂದೆಯಲ್ಲೂ ಒಳಮೀಸಲಾತಿಯ ಜಾರಿ ಅಪೂರ್ಣವಾಗಿಯೇ ಉಳಿದಿದೆ.ರಾಜಕೀಯ ಒತ್ತಡಗಳಿಗೆ ಮಣಿದು ಬಡ್ತಿ ಅವಕಾಶಗಳನ್ನು ಒಳಮೀಸಲಾತಿ ಯಿಂದ ಹೊರಗಿಡಲಾಗಿದೆ ಸರ್ಕಾರದ ನಿಯಮಾನುಸಾರ ಖಾಲಿ ಇರುವ ಹುದ್ದೆಗಳಲ್ಲಿ ಶೇ 50% ರಷ್ಟು ನೇರ ನೇಮಕಾತಿಯ ಮೂಲಕ ಉಳಿದ ಶೇ 50% ರಷ್ಟು ಹುದ್ದೆಗಳು ಬಡ್ತಿ ಮೂಲಕ ಆಗುತ್ತದೆ. ಆದರೆ ಮಸೂದೆಯಲ್ಲಿ ಉದ್ದೇಶ ಪೂರ್ವಕವಾಗಿ ಬಡ್ತಿ ಅವಕಾಶಗಳನ್ನು ಸೇರ್ಪಡೆಗೊಳಿಸಿಲ್ಲ.ಸರ್ಕಾರದ ಈ ಧೋರಣೆ ಒಳಮೀಸ ಲಾತಿಯ ಆಶಯವನ್ನೇ ಮರೆತಿದೆ ಎಂದು ಚಿತ್ರದುರ್ಗ ಜಿಲ್ಲಾ ಸ್ವಾಭಿಮಾನಿ ಮಾದಿಗ ಮಹಾಸಭಾದ ಮುಖಂಡರಾದ ಜಿ.ಹೆಚ್ ಮೋಹನ್ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿಯನ್ನು ನ್ಯಾಯಬದ್ಧವಾಗಿ ಜಾರಿ ಮಾಡುವ ಸುವರ್ಣಾವಕಾಶವಿತ್ತು.ಆದರೆ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ 101 ಜಾತಿಗಳಿಗೆ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿದೆ. ಸಾಮಾಜಿಕ ನ್ಯಾಯದ ಎದುರು ಓಟ್ ಬ್ಯಾಂಕ್ ರಾಜಕಾರಣ ಮೇಲುಗೈ ಸಾಧಿಸಿದೆ. ಸುಪ್ರೀಂಕೋರ್ಟ್ ತೀರ್ಪು ಬಂದು 16 ತಿಂಗಳು ಕಳೆದರೂ ಒಳಮೀಸಲಾತಿಯ ಸಮರ್ಪಕವಾಗಿ ಜಾರಿಯಾಗದೇ ಎಲ್ಲಾ ಪರಿಶಿಷ್ಟ ಜಾತಿಗಳಲ್ಲಿ ಅಸಮಾಧಾನ ಮನೆ ಮಾಡಿದೆ. ಸುಪ್ರೀಂಕೋರ್ಟಿನ ಏಳು ಸದಸ್ಯರ ಪೀಠ 2024 ಆಗಸ್ಟ್ – 1ರಂದು ಐತಿಹಾಸಿಕ ತೀರ್ಪು ನೀಡಿ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಿತು… ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ ಸರ್ಕಾರಗಳು ಕೇವಲ 6 ತಿಂಗಳಲ್ಲಿ ಒಳಮೀಸಲಾತಿಯನ್ನು ವೈಜ್ಞಾನಿಕವಾಗಿ ಗೊಂದಲ ಇಲ್ಲದಂತೆ ಜಾರಿ ಮಾಡಿದವು.ಆದರೆ ರಾಜ್ಯ ಸರ್ಕಾರ 16 ತಿಂಗಳ ನಂತರವೂ ತಾನೇ ಮಾಡಿಕೊಂಡ ಗೊಂದಲಗಳಿಂದ ಒಳಮೀಸಲಾತಿ ಜಾರಿಮಾಡಲಾಗದೇ ತಿಣುಕಾಡುತ್ತಿದೆ ಎಂದು ಟಾಂಗ್ ನೀಡಿದರು.
ಚಿತ್ರದುರ್ಗ ಜಿಲ್ಲಾ ಸ್ವಾಭಿಮಾನಿ ಮಾದಿಗ ಮಹಾಸಭಾದ ಚನ್ನಗಾನಹಳ್ಳಿ ಮಲ್ಲೇಶ್ ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ ದಲಿತರ ಮೀಸಲು ನಿಧಿಯಿಂದ 120 ಕೋಟಿ ರೂಗಳನ್ನು ಪರಿಶಿಷ್ಟ ಜಾತಿಗಳ ಗಣತಿ ನೆಡಸಿ ವರದಿ ಸಿದ್ಧಪಡಿಸುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ… ಅದರೆ ಅದೇ ಸರ್ಕಾರ ನ್ಯಾ ನಾಗಮೋಹನ್ ದಾಸ್ ಆಯೋಗದ 1:6:5:4:1 ಹಂಚಿಕೆಯ ಶಿಫಾರಸ್ಸನ್ನು ಮೂಲೆಗೆ ಹಾಕಿ ತಾನೇ 6:6:5 ರ ಅವೈಜ್ಞಾನಿಕ ರಾಜಕೀಯ ಸೂತ್ರ ಮಾಡಿದೆ.ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಗೊಂದಲ ಹಾಗೆಯೇ ಮುಂದುವರಿದಿದೆ. ಂಏ, ಂಆ, ಂಂ ಜಾತಿಗಳಲ್ಲಿ ಗುರುತಿಸಿಕೊಂಡವರು ಪ್ರವರ್ಗ-1 ಅಥವಾ ಪ್ರವರ್ಗ 2 ರಲ್ಲಿ ಎಲ್ಲಿ ಬೇಕಾದರೂ ಜಾತಿ ಪ್ರಮಾಣ ಪತ್ರ ಪಡೆಯಬಹುದು ಎಂದು ಸರ್ಕಾರ ಮಾಡಿರುವ ಅದೇಶವನ್ನು ದುರುಪಯೋಗ ಮಾಡಲಾಗುತ್ತಿದೆ. ಮಾದಿಗರಲ್ಲದವರೂ ಪ್ರವರ್ಗ-1ರಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಅವಕಾಶ ಕೊಟ್ಟಿರುವುದು ಒಳ ಮೀಸಲಾತಿಯ ಮೂಲ ಉದ್ದೇಶವನ್ನೇ ಸೋಲಿಸಿದೆ.ಈಗಲೂ ಕರ್ನಾಟಕದ ಎಸ್.ಸಿ ಪಟ್ಟಿಯಲ್ಲಿ 98 ಜಾತಿಗಳಿದೆಯೋ ಅಥವಾ 101 ಜಾತಿಗಳಿದೆಯೋ ಸ್ಪಷ್ಟವಿಲ್ಲ ಎಂದ ಅವರು, ಪರಿಶಿಷ್ಟ ಜಾತಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲೆಂದೆ SಅP (ವಿಶೇಷ ಘಟಕ ಯೋಜನೆ) ರೂಪಿಸಲಾಗಿದೆ. ಇಲ್ಲಿಯೂ ಒಳ ಮೀಸಲಾತಿ ಜಾರಿಯಾಗಬೇಕೆಂಬುದು ನಮ್ಮ ಆಗ್ರಹವಾಗಿತ್ತು… ಅದರೆ ರಾಜ್ಯ ಸರ್ಕಾರ SಅP ಯೋಜನೆಯಲ್ಲಿ ಒಳ ಮೀಸಲಾತಿ ಜಾರಿಗೆ ತರಲು ಮುಂದಾಗಿಲ್ಲ. ಸರ್ಕಾರ ಅರೆ ಮನಸ್ಸಿನಿಂದ ಒಳಮೀಸಲಾತಿ ಜಾರಿಮಾಡುತ್ತಿರುವುದು ಈ ಧೋರಣೆಯಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಸ್ವಾಭಿಮಾನಿ ಮಾದಿಗ ಮಹಾಸಭಾದ ಗೂಳಿಹಟ್ಟಿ ಕೃಷ್ಣಮೂರ್ತಿ ಮಾತನಾಡಿ ನ್ಯಾ. ನಾಗಮೋಹನ್ ದಾಸ್ ಅವರು ಸುಪ್ರೀಂಕೋರ್ಟ್ ನಿರ್ದೇಶನದಂತೆಯೇ ಐದು ಗುಂಪುಗಳಾಗಿ ವರ್ಗೀಕರಣ ಮಾಡಿದ್ದರು. ನ್ಯಾ ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಕೂಡ ನಾಲ್ಕು, ಗುಂಪುಗಳಾಗಿ ವರ್ಗೀಕರಣ ಮಾಡಿತ್ತು. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜಕರಣ ಬೆರಸಿ ಸಾಮಾಜಿಕ ನ್ಯಾಯವನ್ನು ಬಲಿಕೊಟ್ಟಿತು. 6: 6: 5 ರ ಸೂತ್ರದಲ್ಲಿ ಮೂರು ಗುಂಪಿನ ವರ್ಗೀಕರಣ ಮಾಡಿ ದೊಡ್ಡ ಗೊಂದಲ ಮಾಡಿದೆ. ಈ ಗೊಂದಲಕ್ಕೆ ಮಸೂದೆಯಲ್ಲಿಯೂ ಸಮರ್ಪಕ ಪರಿಹಾರ ಒದಗಿಸಿಲ್ಲ.ಅತ್ಯಂತ ಹಿಂದುಳಿದ, ಅತಿ ಸಣ್ಣ 59 ಜಾತಿಗಳಿರುವ ಅಲೆಮಾರಿಗಳ ಗುಂಪಿಗೆ ನ್ಯಾ ನಾಗಮೋಹನ್ ದಾಸ್ ಅವರು ಅದ್ಯತೆ ಒದಗಿಸಿ ಪ್ರವರ್ಗ-1ರಲ್ಲಿ ಪ್ರತ್ಯೇಕ ಅವಕಾಶ ಕಲ್ಪಿಸಿದ್ದರು. ಆದರೆ ರಾಜ್ಯ ಸರ್ಕಾರ ಅಲೆಮಾರಿಗಳನ್ನು ಕೊನೆಯ ಗುಂಪಿಗೆ ಬಲಿಷ್ಠ ಜಾತಿಗಳ ಜೊತೆಗೆ ಹಾಕಿ ಅನ್ಯಾಯವೆಸಗಿದೆ. ಅಲೆಮಾರಿ ಸಮುದಾಯಗಳನ್ನು ಬೀದಿಗೆ ಬರುವಂತೆ ಮಾಡಿದ ಸರ್ಕಾರ ತನ್ನ ಮಸೂದೆಯಲ್ಲಿಯೂ ಪ್ರತ್ಯೇಕ ಪ್ರವರ್ಗ ಕೊಡದೇ ವಂಚಿಸಿದೆ.ಇದು ಪರೋಕ್ಷವಾಗಿ ಸುಪ್ರೀಂಕೋರ್ಟ್ ಆದೇಶವನ್ನೇ ಕಡೆಗಣಿಸಿದೆ ಎಂದು ಟೀಕಿಸಿದರು.
ಸರ್ಕಾರ ನಮ್ಮ ಈ ಬೇಡಿಕೆಗಳನ್ನು ತುರ್ತು ನಿಗಾವಹಿಸಿ ಸರಿಪಡಿಸಬೇಕು. 30 ವರ್ಷಗಳ ಹೋರಾಟವನ್ನು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಅದೇಶವನ್ನು ಮೂಲೆಗುಂಪು ಮಾಡಿ ರಾಜಕೀಯ ಒತ್ತಡಕ್ಕೆ ಮಣಿದು ಮಾಡಿರುವ ಅರೆಬರೆ ವರ್ಗೀಕರಣವನ್ನು ಒಪ್ಪಲಾಗದು. ಸರ್ಕಾರ ತಕ್ಷಣ ಒಳಮೀಸಲಾತಿಯ ಗೊಂದಲಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ಮಾರಘಟ್ಟ ಜಯ್ಯಣ್ಣ, ಪರಶುರಾಮ್, ರವಿಕುಮಾರ್ ಭಾಗವಹಿಸಿದ್ದರು.
Views: 41