ಬೆಂಗಳೂರು, ಜುಲೈ 19: ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅದೆಷ್ಟೋ ಮನೆಗಳು ನೆಲಸಮವಾಗಿವೆ. ಒಂದು ಕಡೆ ಗುಡ್ಡ ಕುಸಿಯುತ್ತಿದ್ರೆ, ಇನ್ನೊಂದು ಕಡೆ ನದಿಗಳ ಆರ್ಭಟ ಜೋರಾಗಿದ್ದು, ನಿರಂತರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಳೆದ ವರ್ಷ ಮಳೆಯಿಲ್ಲದೇ ರೈತ ಕಂಗಾಲಾಗಿದ್ದು, ಈ ವರ್ಷ ನಿರೀಕ್ಷೆಗೂ ಹೆಚ್ಚಿನ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ. ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ರಾಜ್ಯಕ್ಕೆ ಎಂಟ್ರಿ ಕೊಟ್ಟ ವರುಣ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕರ್ನಾಟಕದಲ್ಲಿ ಮಹಾಮಳೆ ಜುಲೈ 24ರವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಿಂದ ಹಲವೆಡೆ ಗುಡ್ಡ ಕುಸಿದಿದ್ದು, ಹಲವು ಕಡೆ ಗೋಡೆ ಕುಸಿದ್ದು ಸಾವು ನೋವುಗಳು ಸಂಭವಿಸಿದೆ. ಇನ್ನೂ ನದಿಗಳಲ್ಲಿ ನೀರು ತುಂಬಿವೆ, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಎಲ್ಲೆಡೆ ಅತಿ ಹೆಚ್ಚಿನ ಮಳೆಯಾಗಿದೆ. ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಹಲವೆಡೆ ಮತ್ತಷ್ಟು ಮಳೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 5 ದಿನಗಳ ಕಾಲ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಇಂದು ಜೋರಾದ ಗಾಳಿಯೊಂದಿಗೆ ಅತ್ಯಧಿಕ ಮಳೆಯಾಗಲಿದೆ ಹಾಗೂ ಕರಾವಳಿ ಜಿಲ್ಲೆಗಳಿಗೆ ನಾಳೆ(ಜುಲೈ 20) ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಜೋರಾದ ಗಾಳಿಯೊಂದಿಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಉತ್ತರ ಒಳನಾಡು ಜಿಲ್ಲೆಗಳಿಗೆ, ಜುಲೈ 19 ರಿಂದ 23 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜುಲೈ 21 ರಿಂದ 23 ರವರೆಗೆ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸೋಮವಾರಪೇಟೆ, ಹಾಸನ, ನಾಪೊಕ್ಲು, ಎನ್ಆರ್ಪುರ, ಕಿರವತ್ತಿ, ಕೋಟ, ಜಯಪುರ, ಶೃಂಗೇರಿ, ಬಂಡೀಪುರ, ಮುಂಡಗೋಡು, ಹಿರೇಕೆರೂರು, ಭದ್ರಾವತಿ, ಶಿವಮೊಗ್ಗ, ಬೆಳಗಾವಿ, ಆನವಟ್ಟಿ, ಸಂಕೇಶ್ವರ, ಸವಣೂರು, ಚಿಕ್ಕೋಡಿ, ಕುಶಾಲನಗರ, ಶ್ರವಣಬೆಳಗೊಳ, ಗೌರಿಬಿದನೂರು, ಬೈಲಹೊಂಗಲ, ಬಾದಾಮಿ, ಹುಕ್ಕೇರಿ, ಇಳಕಲ್, ರಾಯಭಾಗ್, ಹಾರಂಗಿ, ಕೃಷ್ಣರಾಜಪೇಟೆ, ಚನ್ನಗಿರಿ, ಹರಪನಹಳ್ಳಿ, ಕೃಷ್ಣರಾಜಸಾಗರ, ದಾವಣಗೆರೆಯಲ್ಲಿ ಮಳೆಯಾಗಿದೆ.
ಇನ್ನೂ ಬೆಂಗಳೂರಿನಲ್ಲಿ ಕೂಡ ಮಳೆಯಾಗುತ್ತಿದ್ದು, ಸಿದ್ದಾಪುರ, ಕುಮಟಾ, ಆಗುಂಬೆ, ಭಾಗಮಂಡಲ, ಬೆಳ್ತಂಗಡಿ, ಗೇರುಸೊಪ್ಪ, ಲೋಂಡಾ, ಲಿಂಗನಮಕ್ಕಿಯಲ್ಲಿ ಮಳೆಯಾಗಿದೆ. ಮಾಣಿ, ಶಿರಾಲಿ, ಧರ್ಮಸ್ಥಳ, ಮಂಕಿ, ಕಳಸ, ಪಣಂಬೂರು, ಹೊನ್ನಾವರ, ಗೋಕರ್ಣ, ಮಂಗಳೂರು ವಿಮಾನ ನಿಲ್ದಾಣ, ಪುತ್ತೂರು, ಉಪ್ಪಿನಂಗಡಿ, ಯಲ್ಲಾಪುರ, ಕಾರ್ಕಳ, ಹಳಿಯಾಳ, ಸುಳ್ಯ, ಕಾರವಾರ, ಕಮ್ಮರಡಿ, ಕೊಪ್ಪ, ವಿರಾಜಪೇಟೆ, ಪೊನ್ನಂಪೇಟೆಯಲ್ಲಿ ಕೂಡ ಭಾರಿ ಮಳೆ ಸುರಿದಿದೆ.