Virat Kohli captaincy: ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಂಡು ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಕೊಹ್ಲಿ ನೇತೃತ್ವದಲ್ಲಿ ವೇಗದ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾವನ್ನು 181 ರನ್ಗಳಿಗೆ ಸೀಮಿತಗೊಳಿಸಿದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಟೀಂ ಇಂಡಿಯಾ ನಾಯಕತ್ವ ತೊರೆದಿದ್ದ ವಿರಾಟ್ ಕೊಹ್ಲಿ ಒಂದು ದಿನದ ಮಟ್ಟಿಗೆ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ವಾಸ್ತವವಾಗಿ ನಿಯಮಿತ ನಾಯಕ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ಮೈದಾನ ತೊರೆಯಬೇಕಾಯಿತು. ಹೀಗಾಗಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಬೇಕಾಯಿತು. ವಿರಾಟ್ ನಾಯಕತ್ವ ವಹಿಸಿಕೊಂಡ ತಕ್ಷಣ, ಬುಮ್ರಾ ಅನುಪಸ್ಥಿಯಲ್ಲೂ ತಂಡದ ವೇಗಿಗಳು ಮಾರಕ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದ ವೇಗಿಗಳು ಇಡೀ ತಂಡವನ್ನು 181 ರನ್ಗಳಿಗೆ ಕಟ್ಟಿಹಾಕಿದರು. ಇದನ್ನು ನೋಡಿದ್ದ ಟೀಂ ಇಂಡಿಯಾ ಅಭಿಮಾನಿಗಳು ಇದೀಗ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ
ವಾಸ್ತವವಾಗಿ ಇಡೀ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ವೇಗಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದವರೆಂದರೆ ಅದು ಜಸ್ಪ್ರೀತ್ ಬುಮ್ರಾ. ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗಲೆಲ್ಲ ಬುಮ್ರಾ ವಿಕೆಟ್ ಉರುಳಿಸುವ ಕೆಲಸ ಮಾಡಿದ್ದಾರೆ. ಉಳಿದಂತೆ ತಂಡದ ಯಾವೊಬ್ಬ ವೇಗಿಯೂ ಆ ರೀತಿಯ ಸ್ಥಿರ ಪ್ರದರ್ಶನ ನೀಡಿಲ್ಲ. ಹೀಗಾಗಿ ಬುಮ್ರಾ ತಂಡವನ್ನು ತೊರೆದ ಬಳಿಕ ಅಭಿಮಾನಿಗಳ ಆತಂಕ ಮನೆ ಮಾಡಿತ್ತು. ಆಸೀಸ್ ಬ್ಯಾಟರ್ಗಳು ಪ್ರಾಬಲ್ಯ ಮೆರೆಯುವ ಭಯ ಹುಟ್ಟಿತ್ತು.
ಗಾಯದಿಂದಾಗಿ ಬುಮ್ರಾ ಮೈದಾನದಿಂದ ನಿರ್ಗಮಿಸಿದಾಗ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ಗೆ 96 ರನ್ ಕಲೆಹಾಕಿತ್ತು. ಇಲ್ಲಿಂದ ತಂಡದ ನಾಯಕತ್ವ ವಹಿಸಿಕೊಂಡ ವಿರಾಟ್ ಇಡೀ ಆಸ್ಟ್ರೇಲಿಯಾ ತಂಡವನ್ನು 181 ರನ್ಗಳಿಗೆ ಕಟ್ಟಿಹಾಕಿದರು. ವಿರಾಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಆಸ್ಟ್ರೇಲಿಯಾ ತನ್ನ ಕೊನೆಯ 6 ವಿಕೆಟ್ಗಳನ್ನು 85 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಇದರೊಂದಿಗೆ ವಿರಾಟ್ ಮತ್ತೊಮ್ಮೆ ತಮ್ಮ ನಾಯಕತ್ವದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಮುನ್ನಡೆ ಸಾಧಿಸುವಂತೆ ತೋರುತ್ತಿತ್ತು. ಆದರೆ ಕೊನೆಯಲ್ಲಿ ಭಾರತದ ಮೊದಲ ಇನ್ನಿಂಗ್ಸ್ ಸ್ಕೋರ್ಗಿಂತ 4 ರನ್ಗಳಷ್ಟ ಹಿನ್ನಡೆ ಪಡೆಯಬೇಕಾಯಿತು.
ಹೆಚ್ಚಿದ ಅಭಿಮಾನಿಗಳ ಒತ್ತಾಯ
ಕೊಹ್ಲಿ ನಾಯಕತ್ವದಲ್ಲಿ ತಂಡದ ಪ್ರದರ್ಶನವನ್ನು ಗಮನಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಯನ್ನು ಮತ್ತೊಮ್ಮೆ ನಾಯಕನನ್ನಾಗಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಅಚ್ಚರಿಯೆಂಬಂತೆ ವಿಕೆಟ್ಗೆ ಹಾತೊರೆಯುತ್ತಿದ್ದ ಟೀಂ ಇಂಡಿಯಾ ವೇಗಿಗಳು ಆಸ್ಟ್ರೇಲಿಯಾದ ಎಲ್ಲಾ ವಿಕೆಟ್ಗಳನ್ನು ಉರುಳಿಸಿದ್ದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಇದರಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಮೂರು ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು.