IND vs SL: ‘ಮಹಾಪರಾಧ, ಮಾಡಬಾರದ ತಪ್ಪು ಮಾಡಿದ್ದೇವೆ’! ಸೋಲಿನ ಬಳಿಕ ಸಿಟ್ಟಾದ ಹಾರ್ದಿಕ್ ಪಾಂಡ್ಯ

IND vs SL this is a crime Hardik Pandya got angry on Arshdeep after the defeat vs sri lanka

ಮೊದಲು ಕಳಪೆ ಬೌಲಿಂಗ್, ನಂತರ ಕಳಪೆ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ (India Vs Sri Lanka) ಎರಡನೇ ಟಿ20 ಪಂದ್ಯದಲ್ಲಿ ಸೋಲಿನ ಬೆಲೆ ತೆರಬೇಕಾಯಿತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಗೊಂಡಿದೆ. ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 16 ರನ್‌ಗಳಿಂದ ಸೋತ ನಂತರ ಮಾತನಾಡಿದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಅರ್ಷದೀಪ್ ಸಿಂಗ್ (Arshdeep Singh) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಾಸ್ತವವಾಗಿ ಅರ್ಷದೀಪ್ ಮೇಲೆ ಕೋಪಗೊಳ್ಳಲು ಕಾರಣವು ಇದ್ದು, ಇಡೀ ಪಂದ್ಯದಲ್ಲಿ ಅರ್ಷದೀಪ್ ಒಬ್ಬರೇ ಬರೋಬ್ಬರಿ 5 ನೋ ಬಾಲ್ ಎಸೆದು ಟೀಂ ಇಂಡಿಯಾ (Team India) ಪಾಲಿನ ವಿಲನ್ ಆದರು. ಇದು ಸಾಲದೆಂಬಂತೆ ನಿನ್ನೆಯ ಒಂದೇ ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ಗಳು ಒಟ್ಟು 7 ನೋ ಬಾಲ್‌ಗಳನ್ನು ಎಸೆದರು. ಇದು ಟೀಂ ಇಂಡಿಯಾದ ಸೋಲಿಗೆ ಒಂದು ಪ್ರಮುಖ ಕಾರಣ ಕೂಡ ಆಯಿತು.

ಈ ಪಂದ್ಯದಲ್ಲಿ ಅರ್ಷದೀಪ್ ಹೊರತುಪಡಿಸಿ ಉಮ್ರಾನ್ ಮಲಿಕ್ ಮತ್ತು ಶಿವಂ ಮಾವಿ ಕೂಡ ತಲಾ ಒಂದೊಂದು ನೋ ಬಾಲ್ ಎಸೆದರು. ‘ಇಡೀ ಪಂದ್ಯದಲ್ಲಿ ನಮ್ಮ ತಂಡ ಪವರ್‌ಪ್ಲೇಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲೂ ವೈಫಲ್ಯ ಕಂಡಿದ್ದೆ ಸೋಲಿಗೆ ಕಾರಣ ಎಂದು ಪಾಂಡ್ಯ ಹೇಳಿದ್ದಾರೆ. ನಾವು ಮಾಡಬಾರದ ತಪ್ಪುಗಳನ್ನು ಮಾಡಿದ್ದೇವೆ. ಈ ದಿನ ನಿಮ್ಮದಾಗಿಲ್ಲದೆ ಇರಬಹುದು, ಆದರೆ ಕೆಲವು ಮೂಲಭೂತ ವಿಷಯಗಳಿಂದ ದೂರ ಹೋಗಬಾರದು. ಅರ್ಷದೀಪ್ ಈ ಹಿಂದೆಯೂ ನೋ ಬಾಲ್ ಎಸೆದಿದ್ದರು. ಇದು ಯಾರನ್ನೂ ದೂರುತ್ತಿರುವುದಲ್ಲ. ಆದರೆ ನೋ ಬಾಲ್ ಎಸೆಯುವುದು ಮಹಾಪರಾಧ’ ಎಂದು ಪಾಂಡ್ಯ ಟೀಂ ಇಂಡಿಯಾ ವೇಗಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

IND vs SL: ಹ್ಯಾಟ್ರಿಕ್ ನೋಬಾಲ್, ಒಂದೇ ಎಸೆತದಲ್ಲಿ 14 ರನ್! ಬೇಡದ ವಿಶ್ವ ದಾಖಲೆ ಬರೆದ ಅರ್ಷದೀಪ್ ಸಿಂಗ್

ದುಬಾರಿಯಾದ ಅರ್ಷದೀಪ್

ಎರಡನೇ ಟಿ20ಯಲ್ಲಿ, ಅರ್ಷದೀಪ್ ಕೇವಲ 2 ಓವರ್ ಬೌಲ್ ಮಾಡಿ, ಇದರಲ್ಲಿ 18.50 ರ ಎಕಾನಮಿಯೊಂದಿಗೆ 37 ರನ್ ನೀಡಿದರು. ಅಲ್ಲದೆ ಒಂದೇ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಠ ಸಂಖ್ಯೆಯ ನೋಬಾಲ್ ಬೌಲ್ ಮಾಡಿದ ಮುಜುಗರದ ದಾಖಲೆಯೂ ಅರ್ಷದೀಪ್ ಹೆಸರಿಗೆ ದಾಖಲಾಯಿತು. ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್‌ಗೆ 206 ರನ್ ಗಳಿಸಿತು. ತಂಡದ ಪರ ಕುಸಾಲ್ ಮೆಂಡಿಸ್ 52 ರನ್ ಮತ್ತು ದಸುನ್ ಶನಕ ಔಟಾಗದೆ 56 ರನ್ ಗಳಿಸಿದರು.

ಭಾರತದ ಕಳಪೆ ಬ್ಯಾಟಿಂಗ್

ಗುರಿ ಬೆನ್ನಟ್ಟಿದ ಭಾರತ ತಂಡ ಅತ್ಯಂತ ಕಳಪೆ ಆರಂಭ ಮಾಡಿತು. ತಂಡದ ಮೊದಲ ಐದು ಬ್ಯಾಟರ್​ಗಳಾದ ಇಶಾನ್ ಕಿಶನ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ತಂಡದ ಮೊತ್ತ ಕೇವಲ 57 ರನ್‌ ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಸೂರ್ಯಕುಮಾರ್ ಯಾದವ್ 51 ರನ್ ಮತ್ತು ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಗಳಿಸಿ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಸೂರ್ಯ ತಂಡದ ಸ್ಕೋರ್ 148 ರನ್ ಇದ್ದಾಗ ಔಟಾದರು. ಬಳಿಕ ಏಕಾಂಗಿ ಹೋರಾಟ ನಡೆಸಿದ ಅಕ್ಷರ್ ಕೂಡ ಕೊನೆಯ ಓವರ್​ನಲ್ಲಿ ಔಟಾಗುವುದರೊಂದಿಗೆ ಭಾರತದ ಗೆಲುವಿನ ಭರವಸೆಯನ್ನು ಮುರಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-sl-this-is-a-crime-hardik-pandya-got-angry-on-arshdeep-after-the-defeat-vs-sri-lanka-psr-au14-496602.html

Leave a Reply

Your email address will not be published. Required fields are marked *