ಭಾರತ-ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿ: ಕರುಣ್‌ ನಾಯರ್ ಅಥವಾ ದೇವದತ್ತ ಪಡಿಕ್ಕಲ್‌? ತಂಡದ ಆಯ್ಕೆ ಕುತೂಹಲ

ದುಬೈ: ಇಂಗ್ಲೆಂಡ್‌ ವಿರುದ್ಧ ಸಾಧಾರಣ ಪ್ರದರ್ಶನ ನೀಡಿದ ಕರುಣ್‌ ನಾಯರ್ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಟೆಸ್ಟ್‌ಗಳ ಕ್ರಿಕೆಟ್‌ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವರೇ ಎಂಬ ಕುತೂಹಲವಿದೆ. ರಾಜ್ಯದ ಇನ್ನೊಬ್ಬ ಆಟಗಾರ ದೇವದತ್ತ ಪಡಿಕ್ಕಲ್‌ ಅವರೂ ರೇಸ್‌ನಲ್ಲಿದ್ದಾರೆ.

ಅಕ್ಟೋಬರ್‌ 2 ರಂದು ಅಹಮದಾಬಾದಿನಲ್ಲಿ ಆರಂಭವಾಗುವ ಎರಡು ಟೆಸ್ಟ್‌ಗಳ ಸರಣಿಗೆ 15 ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲು ಅಜಿತ್‌ ಅಗರಕರ್‌ ನೇತೃತ್ವದ ಆಯ್ಕೆ ಸಮಿತಿ ಈ ವಾರ ಸಭೆ ಸೇರಲಿದೆ. ಬುಧವಾರ ಅಥವಾ ಗುರುವಾರ ಆನ್‌ಲೈನ್ ಮೂಲಕ ಸಭೆ ನಡೆಯುವ ಸಾಧ್ಯತೆಯಿದೆ. ಭಾರತ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವೆ ಎರಡನೇ ‘ಟೆಸ್ಟ್‌’ ಪಂದ್ಯ ಆ ವೇಳೆಗೆ ಎರಡು ಅಥವಾ ಮೂರನೇ ದಿನದಾಟ ಕಾಣಲಿದೆ.

ಬ್ಯಾಟರ್‌ ಕರುಣ್ ಅವರಿಗೆ ಪಡಿಕ್ಕಲ್‌ ಮತ್ತು ನಿತೀಶ್‌ ರೆಡ್ಡಿ ಅವರಿಂದ ಪೈಪೋಟಿ ಎದುರಾಗಲಿದೆ.
ಇಂಗ್ಲೆಂಡ್ ವಿರುದ್ಧ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಕರುಣ್ ನಾಯರ್ ಮಹತ್ವದ ಅರ್ಧ ಶತಕ ಗಳಿಸಿದ್ದರು. ಅವರು ಇತರ ಇನಿಂಗ್ಸ್‌ಗಳಲ್ಲಿ ಉತ್ತಮ ಆರಂಭ ಮಾಡಿದ್ದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾಗಿದ್ದರು. ಬೆರಳಿನ ಗಾಯದಿಂದಾಗಿ ಅವರು ದುಲೀಪ್‌ ಟ್ರೋಫಿಯಲ್ಲಿ ಆಡಿರಲಿಲ್ಲ.


ಸಂಭವನೀಯ ತಂಡ (15):
ಶುಭಮನ್ ಗಿಲ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಕೆ.ಎಲ್.ರಾಹುಲ್‌, ಸಾಯಿ ಸುದರ್ಶನ್, ಕರುಣ್ ನಾಯರ್/ ದೇವದತ್ತ ಪಡಿಕ್ಕಲ್‌, ಧ್ರುವ್‌ ಜುರೇಲ್ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್‌, ಕುಲದೀಪ್ ಯಾದವ್‌, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಅಕ್ಷರ್ ಪಟೇಲ್, ನಾರಾಯಣ ಜಗದೀಶನ್ (ವಿಕೆಟ್ ಕೀಪರ್‌, ನಿತೀಶ್ ರೆಡ್ಡಿ ಮತ್ತು ಆಕಾಶ್‌ ದೀಪ್.‌

Leave a Reply

Your email address will not be published. Required fields are marked *