ಜಂತರ್​​​ ಮಂತರ್​​ನಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಐಒಎ ಮುಖ್ಯಸ್ಥೆ ಪಿಟಿ ಉಷಾ

ಜಂತರ್​​​ ಮಂತರ್​​ನಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಐಒಎ ಮುಖ್ಯಸ್ಥೆ ಪಿಟಿ ಉಷಾ
PT Usha

ದೆಹಲಿ: ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್  (Brij Bhushan Sharan Singh) ವಿರುದ್ದ ಕುಸ್ತಿಪಟುಗಳು ನಡೆಸುತ್ತಿರುವ #MeToo ಪ್ರತಿಭಟನೆಯನ್ನು(Wrestlers Protest) ಟೀಕಿಸಿದ ಕೆಲವು ದಿನಗಳ ನಂತರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಮುಖ್ಯಸ್ಥೆ ಪಿಟಿ ಉಷಾ (PT Usha) ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದಾರೆ. ಸಾರ್ವಜನಿಕ ಪ್ರತಿಭಟನೆಗೆ ಕುಳಿತುಕೊಳ್ಳಲು ನಿರ್ಧರಿಸುವ ಮೊದಲು ಕುಸ್ತಿಪಟುಗಳು ತಮ್ಮ ಆರೋಪಗಳನ್ನು ಪರಿಶೀಲಿಸಲು ನಿಯೋಜಿಸಲಾದ ಸಮಿತಿಯ ವರದಿಗಾಗಿ ಕಾಯಬೇಕಿತ್ತು. ಈ ಪ್ರತಿಭಟನೆಯು ಅಶಿಸ್ತಿಗೆ ಸಮಾನ ಎಂದು ಪಿಟಿ ಉಷಾ ಟೀಕಿಸಿದ್ದರು. ಆಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡಬಾರದಿತ್ತು. ಸಮಿತಿಯ ವರದಿಗಾಗಿಯಾದರೂ ಕಾಯಬೇಕಿತ್ತು. ಅವರು ಮಾಡಿರುವುದು ಆಟಕ್ಕೆ ಮತ್ತು ದೇಶಕ್ಕೆ ಒಳ್ಳೆಯದಲ್ಲ. ಇದು ನೆಗೆಟಿವ್ ವಿಧಾನವಾಗಿದೆ ಎಂದು ಉಷಾ ಹೇಳಿದ್ದರು.

ಕುಸ್ತಿಪಟುಗಳು ಉಷಾ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ನಾವು ಬೆಂಬಲಕ್ಕಾಗಿ ಎದುರು ನೋಡುತ್ತಿರುವಾಗ ಇಂಥಾ ಹೇಳಿಕೆಗಳಿಂದ ನಮಗೆ ನೋವಾಗಿದೆ ಎಂದು ಹೇಳಿದ್ದಾರೆ. ಪಿಟಿ ಉಷಾ ಅವರ ಹೇಳಿಕೆಯಿಂದ ನಮಗೆ ನೋವಾಗಿದೆ. ಸ್ವತಃ ಮಹಿಳೆಯಾಗಿದ್ದರೂ ಅವರು ನಮಗೆ ಬೆಂಬಲ ನೀಡುತ್ತಿಲ್ಲ. ನಾವೇನು ಅಶಿಸ್ತು ಮಾಡಿದ್ದೇವೆ? ನಾವು ಇಲ್ಲಿ ಶಾಂತಿಯುತವಾಗಿ ಕುಳಿತಿದ್ದೇವೆ. ನಮಗೆ ನ್ಯಾಯ ಸಿಕ್ಕಿದ್ದರೆ ನಾವು ಇದನ್ನು ಮಾಡುತ್ತಿರಲಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.


ತಮ್ಮ ವಿಷಯವನ್ನು ಚರ್ಚಿಸಲು ಉಷಾಗೆ ಅವರಿಗೆ ಮಾಡಿದ್ದೆ. ಆದರೆ ಅವರು ಅವರ ಕರೆಗೆ ಉತ್ತರಿಸಲಿಲ್ಲ. ಅವರು ಒತ್ತಡದಲ್ಲಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ ಎಂದಿದ್ದಾರೆ ಕುಸ್ತಿಪಟು ವಿನೇಶ್ ಫೋಗಟ್.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಹೊರಿಸಿರುವ ಭಾರತದ ಪ್ರಮುಖ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳಿಗೆ ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮೇ9ಕ್ಕೆ ಮುಂದೂಡಿದ ಸುಪ್ರೀಂ

ದೆಹಲಿ ಪೊಲೀಸರು ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್‌ಗಳಲ್ಲಿ ಒಂದು ಅಪ್ರಾಪ್ತ ವಯಸ್ಕರ ದೂರನ್ನು ಆಧರಿಸಿದ್ದು, ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಪೊಲೀಸ್ ಕ್ರಮದ ಭರವಸೆಯ ಹೊರತಾಗಿಯೂ, ಕುಸ್ತಿಪಟುಗಳು ಡಬ್ಲ್ಯುಎಫ್ ಐ ಮುಖ್ಯಸ್ಥರನ್ನು ತಕ್ಷಣದ ಬಂಧಿಸಬೇಕು ಎಂದು ಒತ್ತಾಯಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ನಾವು ಸುಪ್ರೀಂಕೋರ್ಟ್‌ನ ಆದೇಶವನ್ನು ಗೌರವಿಸುತ್ತೇವೆ, ಆದರೆ ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ. ಈ ಹೋರಾಟ ಎಫ್‌ಐಆರ್‌ಗಾಗಿ ಅಲ್ಲ. ಈ ಹೋರಾಟ ಅವರಂತಹವರನ್ನು ಶಿಕ್ಷಿಸಲು. ಅವರು ಜೈಲಿನಲ್ಲಿರಬೇಕು ಮತ್ತು ಅವರು ಆ ಹುದ್ದೆಯಲ್ಲಿರಬಾರದು ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/national/days-after-her-indiscipline-remark-ioa-chief-pt-usha-meets-wrestlers-at-delhis-jantar-mantar-rak-569111.html

Leave a Reply

Your email address will not be published. Required fields are marked *