IPL 2023: ಗಿಲ್​ರನ್ನು ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಕೆಕೆಆರ್ ಸಿಇಒ

16ನೇ ಆವೃತ್ತಿಯ ಐಪಿಎಲ್​​ನ ಮೊದಲಾರ್ಧ ಮುಗಿದಿದ್ದು, ಈಗ ದ್ವಿತೀಯಾರ್ಧ ಆರಂಭವಾಗಿದೆ. ಮೊದಲಾರ್ಧದಲ್ಲಿ ಆಟಗಾರರ ಪ್ರದರ್ಶನವನ್ನು ನೋಡುವುದಾದರೆ, ಕಳಪೆ ಫಾರ್ಮ್​ನಿಂದ ತಂಡದಿಂದ ಹೊರಬಿದ್ದು, ಹೊಸ ತಂಡ ಸೇರಿಕೊಂಡಿದ್ದ ಹಲವು ಆಟಗಾರರು ಈ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಕೆಕೆಆರ್ ತಂಡದ ಮಾಜಿ ಆಟಗಾರರು ಸೇರಿದ್ದಾರೆ.ಸದ್ಯ ಈ ಐಪಿಎಲ್​​ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಾಣುತ್ತಿರುವ ಕೆಕೆಆರ್​ಗೆ ಮಾಜಿ ಆಟಗಾರರ ಪ್ರದರ್ಶನ ಹೊಟ್ಟೆ ಕಿವುಚಿಕೊಳ್ಳುವಂತೆ ಮಾಡುತ್ತಿದೆ. ತಂಡದ ಮಾಜಿ ಆಟಗಾರರಾದ ಶುಭ್​ಮನ್ ಗಿಲ್, ಕುಲ್ದೀಪ್ ಯಾದವ್, ಅಜಿಂಕ್ಯ ರಹಾನೆ ಮತ್ತು ಪಿಯೂಷ್ ಚಾವ್ಲಾ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇತರ ಫ್ರಾಂಚೈಸಿಗಳಂತೆ, ಕೆಕೆಆರ್ ಕೂಡ 2022 ರ ಮೆಗಾ ಹರಾಜಿನಲ್ಲಿ ಅನೇಕ ಆಟಗಾರರನ್ನು ಬಿಡುಗಡೆ ಮಾಡಬೇಕಾಗಿತ್ತು. ಕೆಕೆಆರ್ ಕೇವಲ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಪಡೆದಿತ್ತು.ಹೀಗಾಗಿ ಸುನೀಲ್ ನರೈನ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್​​ನಂತಹ ಆಟಗಾರರನ್ನು ಉಳಿಸಿಕೊಂಡಿದ್ದ ಕೆಕೆಆರ್ ಹಲವು ಸ್ಟಾರ್​ ಆಟಗಾರರನ್ನು ತಂಡದಿಂದ ಕೈಬಿಟ್ಟಿತ್ತು. ಇದೀಗ ಹಲವು ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.ಈ ಬಗ್ಗೆ ಮಾತನಾಡಿರುವ ಸಿಇಒ, “ಕೆಲವು ಅತ್ಯುತ್ತಮ ಆಟಗಾರರನ್ನು ಕಳೆದುಕೊಂಡಿದ್ದಕ್ಕೆ ನಾವು ವಿಷಾದಿಸುವುದಿಲ್ಲ. ಆಗ ಲಭ್ಯವಾದ ಮಾಹಿತಿ ಆಧರಿಸಿ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇವು. ನಾವು ಬೆಳೆಸಿದ ಉತ್ತಮ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿ ಇಂದು ಉತ್ತಮವಾಗಿ ಆಡುವುದನ್ನು ನೋಡಲು ಸಂತೋಷವಾಗಿದೆ. ಶುಭಮನ್ ಗಿಲ್ ಇದಕ್ಕೆ ಉತ್ತಮ ಉದಾಹರಣೆ,’’ ಎಂದು ವೆಂಕಿ ಮೈಸೂರು ಹೇಳಿದ್ದಾರೆ.ಶುಭ್​ಮನ್ ಗಿಲ್ ಪ್ರಸ್ತುತ ಗುಜರಾತ್ ಟೈಟಾನ್ಸ್ ಪರ ಮತ್ತು ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಅಜಿಂಕ್ಯ ರಹಾನೆ ಕಳೆದ ಸೀಸನ್​​ವರೆಗೂ ಕೆಕೆಆರ್ ತಂಡದಲ್ಲಿದ್ದರು. ಆದರೆ ಅಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.ಗಿಲ್ ಕೂಡ ಸಾಕಷ್ಟು ವರ್ಷ ಕೆಕೆಆರ್ ಪರ ಆಡಿದ್ದರು. ಆದರೆ ಅವರನ್ನು ತಂಡ ಉಳಿಸಿಕೊಳ್ಳಲಿಲ್ಲ. ತಂಡದಿಂದ ಹೊರಬಿದ್ದು ಗುಜರಾತ್ ಸೇರಿದ ಗಿಲ್ ಕಳೆದ ಸಿಸನ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. 2022ರಲ್ಲಿ  ಗಿಲ್ 483 ರನ್ ಬಾರಿಸಿದ್ದರು. ಈಗ ಪ್ರಸಕ್ತ ಸೀಸನ್​​ನಲ್ಲಿ 8 ಇನ್ನಿಂಗ್ಸ್‌ಗಳನ್ನಾಡಿರುವ ಗಿಲ್ 333 ರನ್ ಬಾರಿಸಿದ್ದಾರೆ. ಗಿಲ್ ಅವರಂತೆ ಕುಲ್ದೀಪ್ ಯಾದವ್ (ದೆಹಲಿ ಕ್ಯಾಪಿಟಲ್ಸ್), ಪಿಯೂಷ್ ಚಾವ್ಲಾ (ಮುಂಬೈ ಇಂಡಿಯನ್ಸ್) ಉತ್ತಮವಾಗಿ ಆಡುತ್ತಿದ್ದಾರೆ.ಇನ್ನು ಕಳೆದ ಸೀಸನ್​​ನಲ್ಲಿ ಕೆಕೆಆರ್‌ ಪರ ಆಡಿದ್ದ ಅಜಿಂಕ್ಯ ರಹಾನೆಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಈಗ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಅವರಲ್ಲಿ ತೀವ್ರ ಬದಲಾವಣೆಯಾಗಿದೆ. ಧೋನಿ ನಾಯಕತ್ವದ ಮ್ಯಾಜಿಕ್ ಅವರ ಆಟದಲ್ಲಿ ಪ್ರತಿಫಲಿಸುತ್ತಿದೆ. ಪ್ರಸಕ್ತ ಸೀಸನ್​ನಲ್ಲಿ ಅವರ ಪ್ರದರ್ಶನದಿಂದಾಗಿ, ಅವರು ಸುಮಾರು ಒಂದು ವರ್ಷದ ನಂತರ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ಅಜಿಂಕ್ಯ ರಹಾನೆ ಆಯ್ಕೆಯಾಗಿದ್ದಾರೆ.

source https://tv9kannada.com/photo-gallery/cricket-photos/ipl-2023-kkr-ceo-venky-mysore-has-no-regrets-on-not-retaining-the-likes-of-shubman-gill-psr-au14-567554.html

Leave a Reply

Your email address will not be published. Required fields are marked *