ಭಾರತ–ದಕ್ಷಿಣ ಆಫ್ರಿಕಾ ನಾಲ್ಕನೇ ಟಿ20 ಪಂದ್ಯಕ್ಕೆ ಅಡ್ಡಿಯಾದ ಹವಾಮಾನ ವೈಪರಿತ್ಯ
ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಇಂದು ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಭಾರೀ ಮಂಜು ಮತ್ತು ಮುಸುಕು ಕಾರಣದಿಂದ ರದ್ದುಗೊಳಿಸಲಾಗಿದೆ. ಮೈದಾನದೆಲ್ಲೆಡೆ ದಟ್ಟ ಮಂಜು ಆವರಿಸಿದ್ದರಿಂದ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಅಂಪೈರ್ಗಳು ಪಂದ್ಯವನ್ನು ನಡೆಸದ ನಿರ್ಧಾರ ಕೈಗೊಂಡರು.
ಪೂರ್ವನಿಗದಿಯಂತೆ ಪಂದ್ಯಕ್ಕೆ ಟಾಸ್ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ನಡೆಯಬೇಕಿತ್ತು ಮತ್ತು ಆಟ ಸಂಜೆ 7:00ಕ್ಕೆ ಆರಂಭವಾಗಬೇಕಿತ್ತು. ಆದರೆ ಮಂಜಿನ ತೀವ್ರತೆ ಹೆಚ್ಚಿದ್ದರಿಂದ ಟಾಸ್ ಕೂಡ ಸಾಧ್ಯವಾಗಲಿಲ್ಲ. ಪಂದ್ಯಾಧಿಕಾರಿಗಳು ಟಾಸ್ನ್ನು ಬರೋಬ್ಬರಿ ಆರು ಬಾರಿ ಮುಂದೂಡಿದರು. ಮೊದಲ ಮೈದಾನ ತಪಾಸಣೆ ಸಂಜೆ 6:50ಕ್ಕೆ ನಿಗದಿಯಾಗಿದ್ದು, ನಂತರ 7:30, 8:00, 8:30, 9:00 ಮತ್ತು ಅಂತಿಮವಾಗಿ 9:25ಕ್ಕೆ ತಪಾಸಣೆ ನಡೆಸಲಾಯಿತು.
ಐಸಿಸಿ ನಿಯಮಗಳ ಪ್ರಕಾರ ಕನಿಷ್ಠ ತಲಾ ಐದು ಓವರ್ಗಳ ಆಟ ನಡೆಯಬೇಕಿದ್ದರೆ ಪಂದ್ಯ ರಾತ್ರಿ 9:46ರೊಳಗೆ ಆರಂಭವಾಗಬೇಕಿತ್ತು. ಆದರೆ 9:25ರ ವೇಳೆಯ ಅಂತಿಮ ತಪಾಸಣೆಯಲ್ಲೂ ಮೈದಾನ ಆಟಕ್ಕೆ ಸೂಕ್ತವಾಗಿರಲಿಲ್ಲ. ಹೀಗಾಗಿ ರಾತ್ರಿ 9:30ರ ಸುಮಾರಿಗೆ ಅಂಪೈರ್ಗಳು ಅಧಿಕೃತವಾಗಿ ಪಂದ್ಯವನ್ನು ರದ್ದುಗೊಳಿಸಿದರು.
ಈ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆಯಾದರೂ, ಆಟಗಾರರ ಸುರಕ್ಷತೆ ಮುಖ್ಯವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.