ತಪ್ಪಿದ ತಿಪ್ಪಾರೆಡ್ಡಿ ಲೆಕ್ಕಾಚಾರ ಪಪ್ಪಿಯನ್ನು ಅಪ್ಪಿದ ಮತದಾರ

ಚಿತ್ರದುರ್ಗ, (ಮೇ.13) : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಕೋಟೆ ನಾಡು ಚಿತ್ರದುರ್ಗದಲ್ಲಿಯೂ ಸಹಾ ಕಾಂಗ್ರೆಸ್ ಮತ್ತೆ ಕೋಟೆಯನ್ನು ಕಟ್ಟಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಹೊಳಲ್ಕೆರೆ ಹೊರತುಪಡಿಸಿ ಉಳಿದ ಐದು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐದರಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿ ಅಷ್ಟೇ ಸ್ಥಾನಗಳನ್ನು ಕಾಂಗ್ರೆಸ್ ಪಡೆಯುವ ಮೂಲಕ ಮತ್ತೆ ಅಧಿಪತ್ಯ ಮೆರೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯ ರಾಜಕಾರಣಿ,  ಸತತವಾಗಿ ಗೆಲ್ಲುತ್ತಿದ್ದ ಜಿ.ಹೆಚ್. ತಿಪ್ಪಾರೆಡ್ಡಿ ಈ ಬಾರಿ ಸೋತಿದ್ದಾರೆ.‌ ಪ್ರತಿ ಚುನಾವಣೆಯಲ್ಲಿ ‌ಗೆಲ್ಲುತ್ತಿದ್ದ ಅವರು ಈ ಬಾರಿ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರೋಧಿ ಅಲೆಗೆ ಜಿ.ಹೆಚ್. ತಿಪ್ಪಾರೆಡ್ಡಿ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರುಗಳೇ ಸೋತಿದ್ದಾರೆ. ಈ ಬಾರಿಯೂ ಬಿಜೆಪಿ ಅಲೆ, ಪ್ರಧಾನಿ ನರೇಂದ್ರ ಮೋದಿಯವರ ಅಲೆ ರಾಜ್ಯದೆಲ್ಲೆಡೆಯಂತೆ ಚಿತ್ರದುರ್ಗ ವಿಧಾನಸಭಾ ಚುನಾವಣೆಯಲ್ಲಿಯೂ ಇದೆ ಎಂಬ ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಗಿದೆ.

ಪಪ್ಪಿಯನ್ನು ಅಪ್ಪಿದ ಮತದಾರ ;
ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಜೊತೆಗೆ ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ನಿರ್ಧರಿಸಿ, ಕ್ಷೇತ್ರದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕ್ಷೇತ್ರದ ತುಂಬಾ ಈ ಬಾರಿ ಮತದಾರರು  ಬದಲಾವಣೆ ಬಯಸಿದ್ದಾರೆ. ಹಾಗಾಗಿ ನನ್ನನ್ನು ಆಯ್ಕೆ ಮಾಡುವಂತೆ ಪ್ರಚಾರದಲ್ಲಿ ಮನವಿ ಮಾಡಿದ್ದರು. ಮತದಾರರು ಸಹಾ ಬದಲಾವಣೆ ಬಯಸಿ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಪಪ್ಪಿಯನ್ನು ಅಪ್ಪಿಕೊಂಡಿದ್ದಾರೆ.

ಅಂತಿಮವಾಗಿ ಆಮ್ ಆದ್ಮಿ ಪಕ್ಷದ ಬಿ.ಈ.ಜಗದೀಶ್,  ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ,  ಬಹುಜನ ಸಮಾಜ ಪಕ್ಷದ ಪ್ರಕಾಶ್.ಎನ್, ಜಾತ್ಯಾತೀತ ಜನತಾ ದಳದ ಜಿ.ರಘು ಆಚಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕೆ.ಸಿ.ವೀರೇಂದ್ರ ಪಪ್ಪಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಟಿ.ಚಂದ್ರಣ್ಣ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದ ಜಿ.ಎಸ್.ನಾಗರಾಜು, ಸಮಾಜವಾದಿ ಪಕ್ಷದ ಎನ್.ಮಂಜಪ್ಪ, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ವಿಜಯ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಾಳೇಕಾಯಿ ಶ್ರೀನಿವಾಸ.ಹೆಚ್, ಪಕ್ಷೇತರ ಅಭ್ಯರ್ಥಿಗಳಾದ ಗಣೇಶ್, ಆರ್.ಗೋಪಿನಾಥ್, ಜಿ.ಚಿತ್ರಶೇಖರಪ್ಪ, ಪಿ.ಎಸ್.ಪುಟ್ಟಸ್ವಾಮಿ(ಸ್ವಾಮಿ), ಎಂ.ಎ.ಬಸವರಾಜು, ಭೂತರಾಜ.ವಿ.ಎಸ್, ಮೋಹನ್ ಕಮಾರ್.ಆರ್, ಎಂ.ಹೆಚ್.ಶಶಿಧರ್, ಸುರೇಶ್.ಎನ್, ಸೌಭಾಗ್ಯ ಬಸವರಾಜನ್, ಡಾ.ಹೆಚ್.ಕೆ.ಎಸ್.ಸ್ವಾಮಿ ಸೇರಿದಂತೆ ಒಟ್ಟು 21 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ
ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಅವರು ಕಣದಿಂದ ನಿವೃತ್ತಿ ಹೊಂದಿದ್ದರು.

ಈ ಬಾರಿ ಶೇ.76.85 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ 1,29,626 ಪುರುಷ, 1,32,831 ಮಹಿಳೆ ಹಾಗೂ 34 ಇತರೆ ಸೇರಿ ಒಟ್ಟು 2,62,419 ಮತದಾರರಿದ್ದು, ಇದರಲ್ಲಿ 1,00,545 ಪುರುಷ, 1,01,184 ಮಹಿಳೆ ಹಾಗೂ 4 ಇತರೆ ಸೇರಿ ಒಟ್ಟು 2,01,733 ಮತದಾರರು ಮತಚಲಾಯಿಸಿದ್ದರು.

The post ತಪ್ಪಿದ ತಿಪ್ಪಾರೆಡ್ಡಿ ಲೆಕ್ಕಾಚಾರ ಪಪ್ಪಿಯನ್ನು ಅಪ್ಪಿದ ಮತದಾರ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/AgVQlby
via IFTTT

Leave a Reply

Your email address will not be published. Required fields are marked *