Mohammed Siraj: ಕೊಹ್ಲಿ, ಗಂಭೀರ್, ನವೀನ್ ಜಗಳದ ಮೂಲ ಬಹಿರಂಗ: ಇಷ್ಟೆಕ್ಕೆಲ್ಲ ಕಾರಣ ಮೊಹಮ್ಮದ್ ಸಿರಾಜ್

Mohammed Siraj: ಕೊಹ್ಲಿ, ಗಂಭೀರ್, ನವೀನ್ ಜಗಳದ ಮೂಲ ಬಹಿರಂಗ: ಇಷ್ಟೆಕ್ಕೆಲ್ಲ ಕಾರಣ ಮೊಹಮ್ಮದ್ ಸಿರಾಜ್
Siraj Naveen and Virat Kohli

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೋಮವಾರ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವಣ ಪಂದ್ಯ ಸಾಕಷ್ಟು ಸುದ್ದಿಯಲ್ಲಿದೆ. ಪಂದ್ಯ ಮುಗಿದ ಬಳಿಕ ನಡೆದ ಘಟನೆಗಳು ಭಾರೀ ವೈರಲ್ ಆಗುತ್ತಿದೆ. ಮುಖ್ಯವಾಗಿ ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ಎಲ್​ಎಸ್​ಜಿ ಮೆಂಟರ್ ಗೌತಮ್ ಗಂಭೀರ್ (Gautam Gambhir) ನಡುವಣ ಜಗಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ಲಖನೌ ಬೌಲರ್ ನವೀನ್ ಉಲ್ ಹಖ್ ಜೊತೆಗೂ ಕೊಹ್ಲಿ ಮಾತಿನ ಚಕಮಕಿ ನಡೆಸಿರುವ ವಿಡಿಯೋ ಹರಿದಾಡುತ್ತಿದೆ. ಇದೀಗ ಈ ಜಗಳಕ್ಕೆ ಮುಖ್ಯ ಕಾರಣ ಏನು?, ಎಲ್ಲಿಂದ ಈ ಫೈಟ್ ಆರಂಭವಾಯಿತು? ಎಂಬ ವಿಚಾರ ಬಹಿರಂಗವಾಗಿದೆ.

17ನೇ ಓವರ್​ನಿಂದಲೇ ಜಗಳ ಆರಂಭ:

ಎಲ್​ಎಸ್​ಜಿ ಬ್ಯಾಟಿಂಗ್​ನ 17ನೇ ಓವರ್​ನಲ್ಲಿ ಈ ಜಗಳ ಆರಂಭವಾಗಿದೆ. ಈ ಸಂದರ್ಭ ಕ್ರೀಸ್​ನಲ್ಲಿ ಅಮಿತ್ ಮಿಶ್ರಾ ಮತ್ತು ನವೀಲ್ ಉಲ್ ಹಖ್ ಇದ್ದರು. ಲಖನೌ 16 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿತ್ತು. 17ನೇ ಓವರ್ ಬೌಲಿಂಗ್ ಮಾಡಲು ಮೊಹಮ್ಮದ್ ಸಿರಾಜ್ ಬಂದರು. ಈ ಓವರ್​ನ ಮೊದಲ 5 ಎಸೆತಗಳಲ್ಲಿ ಸಿರಾಜ್ 8 ರನ್ ನೀಡಿದರು. ಕೊನೆಯ ಎಸೆತ ಫ್ರೀ ಹಿಟ್ ಆಗಿತ್ತು. ಆದರೆ, ನವೀನ್ ಫ್ರೀ ಹಿಟ್ ಎದುರಿಸಲು ವಿಫಲವಾದ ಕಾರಣ ಡಾಟ್ ಬಾಲ್ ಆಯಿತು. ಆಗ ಚೆಂಡನ್ನು ಪಡೆದುಕೊಂಡು ಸಿರಾಜ್ ಅವರು ನವೀನ್​ರನ್ನು ದಿಟ್ಟಿಸಿನೋಡಿದ್ದಾರೆ. ಅಷ್ಟೇ ಅಲ್ಲದೆ ನವೀನ್ ಕ್ರೀಸ್​ನೊಳಗೆ ಇದ್ದರೂ ಬೇಕೆಂದು ಚೆಂಡನ್ನು ವಿಕೆಟ್​ಗೆ ಎಸೆದಿದ್ದಾರೆ.

IPL 2023 Points Table: ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದ RCB

ಈ ಸಂದರ್ಭ ಸಿರಾಜ್-ನವೀನ್ ನಡುವೆ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆದಿದೆ. ಆಗ ವಿರಾಟ್ ಕೊಹ್ಲಿ ಕೂಡ ಮಧ್ಯ ಪ್ರವೇಶಿಸಿದ್ದು ಇಲ್ಲಿಂದ ಜಗಳ ಆರಂಭವಾಗಿದೆ. ಅಮಿತ್ ಮಿಶ್ರಾ ಬಂದು ಕೊಹ್ಲಿಯನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ, ಮಿಶ್ರಾ ಮೇಲೂ ಕೊಹ್ಲಿ ಹರಿಹಾಯ್ದಿದ್ದಾರೆ. ಅತ್ತ ಅಂಪೈರ್ ಜೊತೆಗೆ ಘಟನೆಯ ಬಗ್ಗೆ ವಿವರಿಸುತ್ತಿರುವಾಗ ಕೊಹ್ಲಿ ತಾಳ್ಮೆ ಕಳೆದುಕೊಂಡಿದ್ದರು. ಕೊನೆಯಲ್ಲಿ ಕೊಹ್ಲಿ ಅವರು ತಮ್ಮ ಶೂ ಧೂಳನ್ನು ನವೀನ್ ಕಡೆಗೆ ತೋರಿಸಿದ್ದಾರೆ. 18ನೇ ಓವರ್​ನಲ್ಲೂ ಕೊಹ್ಲಿ-ನವೀನ್ ನಡುವಣ ಕಾಳಗ ಮುಂದುವರಿದಿದೆ. ಈ ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಪಂದ್ಯ ಮುಗಿದ ಬಳಿಕವೂ ಜಗಳ:

ಪಂದ್ಯದ ಮಧ್ಯೆ ನಡೆದ ಜಗಳ, ಪಂದ್ಯ ಮುಗಿದ ಬಳಿಕವೂ ಮುಂದುವರೆಯಿತು. ಹಸ್ತಲಾಘವದ ವೇಳೆ ಕೊಹ್ಲಿ-ನವೀನ್ ಮತ್ತೊಮ್ಮೆ ಮುಖಾಮುಖಿ ಆದರು. ಆಗಲೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಇವರಿಬ್ಬರನ್ನು ಗ್ಲೆನ್ ಮ್ಯಾಕ್ಸ್​ವೆಲ್ ತಡೆದು ಪರಿಸ್ಥಿತಿ ಹತೋಟಿಗೆ ತಂದರು. ನಂತರ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಜೊತೆ ಮಾತನಾಡುತ್ತಿರುವಾಗ ನವೀನ್ ಉಲ್ ಹಖ್, ಕೊಹ್ಲಿ ಹತ್ತಿರದಿಂದ ನಡೆದುಕೊಂಡು ಹೋದರು. ಆಗ ರಾಹುಲ್ ನವೀನ್​ರನ್ನು ಕರೆದು ಬನ್ನಿ ಎಂದು ಸೂಚಿಸಿದರು. ಆದರೆ, ಇದಕ್ಕೆ ಒಪ್ಪದ ನವೀನ್ ಮುಖವನ್ನೂ ನೋಡದೆ ಕೊಹ್ಲಿ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.

ಕೊಹ್ಲಿ vs ಗಂಭೀರ್:

ಫೀಲ್ಡ್​ನಲ್ಲಿ ನಡೆದ ಇಷ್ಟೆಲ್ಲ ವಿಚಾರದಿಂದ ಕೋಪಗೊಂಡಿದ್ದ ಗೌತಮ್ ಗಂಭೀರ್ ಕೂಡ ವಿರಾಟ್ ಕೊಹ್ಲಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ತಿಳಿಸಿಗೊಳಿಸಿದರು. ಕೊಹ್ಲಿ ಅವರು ಎಲ್​ಎಸ್​ಜಿ ಪ್ಲೇಯರ್ ಖೈಲ್ ಮೇಯರ್ಸ್ ಜೊತೆ ಮಾತನಾಡುತ್ತಿರುವಾಗ ಗಂಭೀರ್ ಮಧ್ಯ ಪ್ರವೇಶಿಸಿ ಮೇಯರ್ಸ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಇಲ್ಲಿಂದ ಕೊಹ್ಲಿ-ಗಂಭೀರ್ ಜಗಳ ಶುರುವಾಗಿದೆ. ಇದೀಗ ಕೊಹ್ಲಿ, ಗಂಭೀರ್ ಹಾಗೂ ನವೀನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕವನ್ನು ಕಡಿತ ಮಾಡಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/lsg-vs-rcb-fight-reason-for-virat-kohli-gambhir-naveen-fight-revealed-mohammad-siraj-is-the-reason-for-all-this-vb-568209.html

Leave a Reply

Your email address will not be published. Required fields are marked *