‘ನಂದಿನಿ’ ರಾಯಭಾರಿಯಾಗಿ ಶಿವಣ್ಣ.. ತಂದೆಯಂತೆ ಸಂಭಾವನೆ ಪಡೆಯದೆ ಮಾದರಿಯಾದ ಹ್ಯಾಟ್ರಿಕ್‌ ಹೀರೋ

ಹ್ಯಾಟ್ರಿಕ್‌ ಹೀರೋ ಶಿವ ರಾಜ್​​ಕುಮಾರ್‌ ನಂದಿನಿ ಹಾಲು ಉತ್ಪನ್ನಗಳ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ.

ನಂದಿನಿ ಉತ್ಪನ್ನಗಳ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್​​ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ, ಕೆಎಂಎಫ್‌ ಅಧ್ಯಕ್ಷ ಎಸ್ ಭೀಮಾನಾಯ್ಕ ಅವರು ಡಾ.

ಶಿವರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿ, ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.

ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಬ್ರ್ಯಾಂಡ್​​ಗೆ ಇನ್ಮುಂದೆ ಡಾ. ಶಿವರಾಜ್​ಕುಮಾರ್ ರಾಯಭಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಲು ಹ್ಯಾಟ್ರಿಕ್‌ ಹೀರೋ ಶಿವರಾಜ್​ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ‘ನಂದಿನಿ’ ರಾಯಭಾರಿಯಾಗಿ ಶಿವಣ್ಣ

ನಂದಿನಿ ಬ್ರ್ಯಾಂಡ್​ಗೆ ರಾಯಭಾರಿಯಾಗುವಂತೆ ಕೆಎಂಎಫ್ ಕೇಳಿಕೊಂಡಿತ್ತು. ಅದರಂತೆ ನಟ ಶಿವರಾಜ್​ಕುಮಾರ್ ಕೂಡ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಕೆಎಂಎಫ್ ಮನವಿಗೆ ಸ್ಪಂದಿಸಿ, ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್​ ಅವರು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಮನೆಗೆ ತೆರಳಿ ಪುಷ್ಪುಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ತಂದೆ, ಸಹೋದರನ ಬಳಿಕ ಶಿವಣ್ಣ: 1996ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರು ಮೊದಲ ಬಾರಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಂದಿನಿ ರಾಯಭಾರಿ ಆಗಿದ್ದ ದಿ. ನಟ ರಾಜ್​ಕುಮಾರ್ ಒಂದು ರೂಪಾಯಿ ಸಂಭಾವನೆ ಪಡೆದಿರಲಿಲ್ಲ. ಅದೇ ರೀತಿ ಡಾ. ಪುನೀತ್ ರಾಜ್‌ಕುಮಾರ್ ಅವರೂ ಕೂಡ ಯಾವುದೇ ರೀತಿಯ ಸಂಭಾವನೆ ಪಡೆಯದೇ ಉಚಿತವಾಗಿ ನಂದಿನಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಶಿವರಾಜ್‌ಕುಮಾರ್ ಕೂಡ ಸಂಭಾವನೆ ಪಡೆದಿಲ್ಲ ಅನ್ನೋದು ಅವರ ಆಪ್ತರು ಮಾತು.

ನಂದಿನಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ದಿ. ನಟ ಪುನೀತ್​ ರಾಜ್​ಕುಮಾರ್

ನಂದಿನಿ ಹಾಲಿನ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆಯನ್ನು ಪಡೆದುಕೊಂಡಿದೆ. ನಂದಿನಿ ಬ್ರ್ಯಾಂಡ್‌ ರಾಯಭಾರಿಯಾಗಿ ಪುನೀತ್‌ ರಾಜ್​ಕುಮಾರ್​ ಆಯ್ಕೆಯಾದ ನಂತರ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಆಗಿತ್ತು ಎಂದು ತಿಳಿದುಬಂದಿತ್ತು. ಇದೀಗ ಪುನೀತ್ ರಾಜ್​ಕುಮಾರ್ ಜಾಗದಲ್ಲಿ ದೊಡ್ಮನೆ ಮಗ ಶಿವ ರಾಜ್​ಕುಮಾರ್ ಕಾಣಿಸಿಕೊಂಡಿದ್ದಾರೆ.

125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಶಿವಣ್ಣ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಜನ್ಮ ದಿನ ಆಚರಿಸಿಕೊಂಡಿರುವ ಹ್ಯಾಟ್ರಿಕ್​ ಹೀರೋ ತಮ್ಮ ಮುಂದಿನ ಬಹುನಿರೀಕ್ಷಿತ ”ಘೋಸ್ಟ್” ಚಿತ್ರದ ‘BIG DADDY’ ವಿಡಿಯೋ ಅನಾವರಣಗೊಳಿಸಿ ಅಭಿಮಾನಿಗಳಿಗೆ ಸಿಹಿ ಹಂಚಿದ್ದರು. ಅನುಪಮ್ ಖೇರ್, ಜಯರಾಂ, ದತ್ತಣ್ಣ, ಅಭಿಜಿತ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಸೇರಿದಂತೆ ಬಹು ತಾರಾಗಣ ಇರುವ ಈ ಸಿನಿಮಾ ಇದೇ ದಸರಾ ವೇಳೆಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಜೈಲರ್​ ಮತ್ತು ಕ್ಯಾಪ್ಟನ್​ ಮಿಲ್ಲರ್ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/+nandini+raayabhaariyaagi+shivanna+tandeyante+sambhaavane+padeyade+maadariyaadha+hyaatrik+hiro-newsid-n524069714?listname=newspaperLanding&topic=homenews&index=11&topicIndex=0&mode=pwa&action=click

Leave a Reply

Your email address will not be published. Required fields are marked *