‘ನಮ್ಮ ಯಶಸ್ಸನ್ನು ಭಾರತಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ’; ಮತ್ತೊಮ್ಮೆ ಗುಡುಗಿದ ರಮೀಜ್ ರಾಜಾ

Ramiz Raja made an explosive claim on Team India and pakistan cricket board

ಇಂಗ್ಲೆಂಡ್ ವಿರುದ್ಧ ತವರಿನಲ್ಲೇ ವೈಟ್ ವಾಶ್ ಮುಖಭಂಗ ಅನುಭವಿಸಿದ ಪಾಕ್ ಕ್ರಿಕೆಟ್​ ತಂಡ (Pakistan vs England) ಹಾಗೂ ಮಂಡಳಿಯಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಇದರ ಅಂಗವಾಗಿ ಮೊದಲು ಪಿಸಿಬಿ ಅಧ್ಯಕ್ಷರ ತಲೆದಂಡವಾಗಿತ್ತು. ಈ ಹಿಂದೆ ಮಂಡಳಿಯ ಅಧ್ಯಕ್ಷರಾಗಿದ್ದ ರಮೀಜ್ ರಾಜಾ (Ramiz Raja) ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿ, ನಜಮ್ ಸೇಥಿ ಅವರಿಗೆ ಈ ಪಟ್ಟಕಟ್ಟಿತ್ತು. ಇದರ ಜೊತೆಗೆ, ಶಾಹಿದ್ ಅಫ್ರಿದಿ (Shahid Afridi) ಅವರನ್ನು ಹಂಗಾಮಿ ಮುಖ್ಯ ಆಯ್ಕೆಗಾರರನ್ನಾಗಿ ಆಯ್ಕೆ ಮಾಡಿದಲ್ಲದೆ, ಇವರ ಜೊತೆಗೆ ಮಾಜಿ ಕ್ರಿಕೆಟಿಗರಾದ ಅಬ್ದುಲ್ ರಜಾಕ್ ಮತ್ತು ರಾವ್ ಇಫ್ತಿಕರ್ ಅಂಜುಮ್ ಅವರನ್ನು ಆಯ್ಕೆ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನದಲ್ಲಿದ್ದಾಗಲೂ ಭಾರತದ ಮೇಲೆ ಉರಿದು ಬೀಳುತ್ತಿದ್ದ ರಮೀಜ್ ರಾಜಾ, ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡ ಮೇಲೂ ತಮ್ಮ ಹಳೆ ನಡೆಯನ್ನು ಮುಂದುವರೆಸಿದ್ದಾರೆ. ಬಿಸಿಸಿಐ ಹಾಗೂ ಟೀಂ ಇಂಡಿಯಾ ವಿರುದ್ಧ ಸ್ಫೋಟಕ ಹೇಳಿಕೆ ನೀಡಿರುವ ರಮೀಜ್ ರಾಜಾ, ಪಾಕಿಸ್ತಾನ ವಿರುದ್ಧದ ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಏರ್ಪಟ್ಟಿದೆ ಎಂದಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೋಲನ್ನು ಅರಗಿಸಿಕೊಳ್ಳದ ಬಿಸಿಸಿಐ

ಸುನೋ ಟಿವಿ ಜೊತೆಗಿನ ಸಂವಾದದಲ್ಲಿ ಟೀಂ ಇಂಡಿಯಾ ಬಗ್ಗೆ ಮಾತನಾಡಿರುವ ರಮೀಜ್ ರಾಜಾ, ‘ಪಾಕಿಸ್ತಾನ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ನಮ್ಮ ತಂಡ ಏಷ್ಯಾಕಪ್‌ನ ಫೈನಲ್‌ನಲ್ಲಿ ಆಡಿದೆ. ಆದರೆ ಶತಕೋಟಿ ಡಾಲರ್ ಉದ್ಯಮವಾಗಿರುವ ಟೀಂ ಇಂಡಿಯಾಕ್ಕೆ ಫೈನಲ್ ಆಡಲು ಸಾಧ್ಯವಾಗಲಿಲ್ಲ. ಅಲ್ಲದೆ ಪಾಕಿಸ್ತಾನ ವಿರುದ್ಧದ ಸೋಲನ್ನು ಅರಗಿಸಿಕೊಳ್ಳದ ಬಿಸಿಸಿಐ, ಆಯ್ಕೆ ಮಂಡಳಿಯ ಮುಖ್ಯ ಆಯ್ಕೆಗಾರ ಹಾಗೂ ಆಯ್ಕೆ ಸಮಿತಿಯನ್ನೇ ವಜಾಗೊಳಿಸಿತು. ಹಾಗೆಯೇ ಪಾಕಿಸ್ತಾನದ ಅದ್ಭುತ ಪ್ರದರ್ಶನವನ್ನು ಅರಗಿಸಿಕೊಳ್ಳಲಾಗದೇ ನಾಯಕನನ್ನು ಕೂಡ ಬದಲಾಯಿಸಿದೆ ಎಂದಿದ್ದಾರೆ.

ಬಿಸಿಸಿಐ ವಿರುದ್ಧ ಗುಡುಗಿದ್ದ ರಮೀಜ್ ರಾಜಾಗೆ ಪಿಸಿಬಿ ಮುಖ್ಯಸ್ಥ ಸ್ಥಾನದಿಂದ ಗೇಟ್​ಪಾಸ್..!

ನನಗೆ ಅನ್ಯಾಯವಾಗಿದೆ- ರಮೀಜ್ ರಾಜಾ

ಟೀಂ ಇಂಡಿಯಾವನ್ನು ತೆಗಳಿದ್ದಲ್ಲದೆ, ಪಾಕ್ ಮಂಡಳಿಯಲ್ಲಿ ತನಗಾಗಿರುವ ಅನ್ಯಾಯದ ಬಗ್ಗೆಯೂ ಮೌನ ಮುರಿದಿರುವ ರಾಜಾ, ‘ಪಾಕಿಸ್ತಾನದಲ್ಲಿ ತನಗೆ ಅನ್ಯಾಯವಾಗಿದೆ. ನನ್ನನ್ನು ಹೊರಹಾಕುವುದು ಫ್ರಾನ್ಸ್ ಫೈನಲ್‌ನಲ್ಲಿ ಆಡಿದರೂ ತನ್ನ ಸಂಪೂರ್ಣ ಮಂಡಳಿಯನ್ನು ಹೊರಹಾಕಿದಂತ್ತಾಗಿದೆ. ನನ್ನ ಆಡಳಿತಾವಧಿಯಲ್ಲಿ ಕ್ಯಾಪ್ಟನ್ ಬಾಬರ್ ಅಜಂ ಅವರನ್ನು ಬಲಿಷ್ಠನನ್ನಾಗಿ ಮಾಡಿದ್ದೇನೆ. ಅಲ್ಲದೆ ತಂಡವನ್ನು ಒಟ್ಟಿಗೆ ಇರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ನಾನು ಬಾಬರ್ ಆಜಮ್‌ಗೆ ಅಧಿಕಾರ ನೀಡಿದ್ದೇನೆ. ನಾಯಕತ್ವ ಅತ್ಯಗತ್ಯವಾಗಿರುವ ಕೆಲವೇ ಕೆಲವು ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿದೆ. ಹೀಗಾಗಿ ನಿಮ್ಮ ನಾಯಕ ಬಲಶಾಲಿಯಾಗಿದ್ದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಾನು ನಾಯಕನನ್ನು ಬಲಶಾಲಿಯನ್ನಾಗಿ ಮಾಡಿದ್ದರಿಂದಲೇ ಪಾಕ್ ತಂಡ ಉತ್ತಮ ಫಲಿತಾಂಶ ಪಡೆದಿದೆ ಎಂದಿದ್ದಾರೆ.

ಈ ಹಿಂದೆಯೂ ಬಿಸಿಸಿಐ ವಿರುದ್ಧ ಬಿರುಸಿನ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿದ್ದ ರಾಜಾ, ಏಷ್ಯಾಕಪ್ ಆಡಲು ಭಾರತ ಪಾಕಿಸ್ತಾನಕ್ಕೆ ಬರದಿದ್ದರೆ, ನಮ್ಮ ತಂಡ ಕೂಡ ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಹೊಗುವುದಿಲ್ಲ ಎಂದು ಬಿಸಿಸಿಐಗೆ ಬೆದರಿಕೆಯೊಡ್ಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ramiz-raja-made-an-explosive-claim-on-team-india-and-pakistan-cricket-board-psr-au14-492552.html

Leave a Reply

Your email address will not be published. Required fields are marked *