
ಚಿತ್ರದುರ್ಗ, (ಮಾ.27) : ಪಾಶ್ಚಾತ್ಯ ನಾಟಕಗಳಿಗಿಂತ ಪೌರಾತ್ಯ ನಾಟಕಗಳು ಹೆಚ್ಚು ಪ್ರಶಂಸನೀಯವಾದವು. ಕಾಳಿದಾಸಾದಿ ಸಂಸ್ಕೃತ ನಾಟಕಕಾರರ ನಾಟಕಗಳು ಉತೃಷ್ಠ ಕೃತಿಗಳು. ಅದರಲ್ಲಿಯೂ ಶೂದ್ರಕನ ಮೃಚ್ಛಕಟಿಕ ನಾಟಕವೊಂದೇ ಎಲ್ಲಾ ನಾಟಕಗಳಿಗೂ ಸರಿಸಾಟಿಯಾಗಿ ನಿಲ್ಲಬಲ್ಲಂತಹ ಮೇರು ವಿಶೇಷಕೃತಿ. ನವರಸಗಳನ್ನೂ ಒಳಗೊಂಡು ಉತ್ತಮ ಅಭಿನಯದ ಸಾರವನ್ನು ಆಭ್ಯಾಸಗಳ ಮೂಲಕ ಕಥಾವಸ್ತುಗಳುಳ್ಳ ಕನ್ನಡ ನಾಟಕ ಕೃತಿಗಳು ಭಾರತೀಯ ರಂಗಭೂಮಿಯಲ್ಲಿ ತನ್ನದೇ ಆದ ಮಹತ್ತರ ಸ್ಥಾನವನ್ನು ಪಡೆದುಕೊಂಡಿವೆ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ.ಎಸ್.ಉಜ್ಜಿನಪ್ಪ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೌಲ್ಯಯುತ ಕಾರ್ಯಕ್ರಮಗಳಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಫ್ಯಾಷನ್ ಯುಗದ ಬದುಕಿನ ಆಕರ್ಷಣೆಗೆ ಒಳಗಾದ ಜನಸಾಮಾನ್ಯರಿಗೆ ರಂಗಜಾಗೃತಿ ಮೂಡಿಸಬೇಕಾಗಿದೆ. ಸತ್ವಯುತ ಬದುಕನ್ನು ನಡೆಸಬೇಕಾದರೆ ರಂಗಭೂಮಿಯನ್ನು ಪ್ರಾಯೋಗಿಕವಾಗಿ ಆಳವಾದ ಅಭ್ಯಾಸದಲ್ಲಿ ತೊಡಗಬೇಕು. ಶರೀರ ಮತ್ತು ಶಾರೀರ ಸದೃಢವಾಗಿ ಆರೋಗ್ಯಕರವಾಗಿರಬೇಕಾದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ. ಅದರಿಂದ ರಂಗಭೂಮಿಯ ಅಗಾಧತೆ ಪರಿಚಯವಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯಾದ್ಯಂತ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಮಕ್ಕಳಿಗೆ ರಂಗಭೂಮಿಯ ಮುಖೇನ ಶಿಕ್ಷಣ ನೀಡುವ ಕೆಲಸ ನಡೆಯಬೇಕಿದೆ.
ಸಾಣೇಹಳ್ಳಿಯ ಶಿವಸಂಚಾರ, ಜಮುರಾ, ರಂಗಸೌರಭ ರಂಗೋತ್ಸವದ ನಾಟಕಗಳು ಜಿಲ್ಲಾದ್ಯಂತ ರಂಗ ಚಟುವಟಿಕೆಯಿಂದ ಸಾಗುತ್ತಿರುವುದು ಶ್ಲಾಘನೀಯ. ಅನೇಕ ಚಲನಚಿತ್ರಗಳಲ್ಲೂ ಕೂಡ ರಂಗಭೂಮಿಯ ಸಾಧ್ಯತೆಗಳನ್ನೂ ಕಂಡುಕೊಳ್ಳುವ ಪ್ರಯತ್ನವನ್ನು ಗಮನಿಸಬಹುದಾಗಿದೆ ಎಂದರು.
ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಶಿಕ್ಷಣದಲ್ಲಿ ರಂಗಭೂಮಿಯ ಪ್ರಸ್ತುತತೆ ವಿಷಯವಾಗಿ ಉಪನ್ಯಾಸ ನೀಡಿದ ಅವರು ಸಮಾಜದೊಂದಿಗೆ ರಂಗಭೂಮಿ ಬೆರೆಸುವುದರಿಂದ ಶಿಸ್ತಿನ ಬದುಕಿಗೆ ದಾರಿದೀಪವಾಗುತ್ತದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ರಂಗಭೂಮಿ ಮಾಧ್ಯಮ ಸಹಕಾರಿಯಾಗಿದೆ. ಶಿಕ್ಷಕರು ಮಕ್ಕಳ ಉನ್ನತಿಗಾಗಿ ರಂಗ ಚಟುವಟಿಕೆಗಳು ಶಿಬಿರಗಳ ಮೂಲಕ, ಪಠ್ಯಾಧಾರಿತ ವಿಷಯ ವಸ್ತುಗಳನ್ನು ಆಧರಿಸಿ ಪಾಠ ಬೋಧನೆಯಲ್ಲಿ ತೊಡಗಬೇಕು ಎಂದರು.
ಶಸಾಪ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ 2023ರ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಈಜಿಪ್ಟ್ ದೇಶದ ವಿಶ್ವವಿಖ್ಯಾತ ಅಭಿನೇತ್ರಿ ಸಮಿಹಾ ಅಯೌಬ್ ವಿರಚಿತ ರಂಗಸಂದೇಶವನ್ನು ಓದಿದರು.
ಹಿರಿಯ ಸಾಹಿತಿ ಎಂ.ಮೃತ್ಯುಂಜಯಪ್ಪ, ಕಲಾವಿದ ಜಿ.ಎನ್.ಚಂದ್ರಪ್ಪ, ರಾಜ್ಯ ಯುವಪ್ರಶಸ್ತಿ ವಿಜೇತ ಶ್ರೀನಿವಾಸ್ಮಳಲಿ, ಪ್ರಕಾಶ್ ಬಾದರದಿನ್ನಿ, ಶೈಲಶ್ರೀ ಹಿರೇಮಠ್, ಬಿ.ಜಿ.ಲೀಲಾವತಿ ಉಪಸ್ಥಿತರಿದ್ದರು.
The post ಮೌಲ್ಯಯುತ ಕಾರ್ಯಕ್ರಮಗಳಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಿದೆ : ಜಿ.ಎಸ್.ಉಜ್ಜಿನಪ್ಪ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/qwcgJfU
via IFTTT
Views: 0