ಈ ಗಣಪನಿಗೆ ಬಯಲೇ ಆಲಯ, ಅರ್ಚಕರು ಹೆಲಿಕಾಪ್ಟರಿನಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ!

ವಿನಾಯಕ ಅದಾಗಲೇ ಎಲ್ಲರ ಮನೆ-ಮನಗಳಲ್ಲಿ ಬಂದು ವಿರಾಜಮಾನನಾಗಿದ್ದಾನೆ. ಆದರೆ ಅಲ್ಲೊಬ್ಬ ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ. ನಾಳೆ ವಿನಾಯಕನ ಜನ್ಮದಿನದಂದು ಮಂಡಪಾಲದಲ್ಲಿ ಪೂಜಿಸಲ್ಪಡುವ ದನಗಾಹಿ ಗಣಪತಿಯ ಬಗ್ಗೆ ಎಷ್ಟು ಹೇಳಿದೂ ಸಾಲದು. ಹೌದು, ಬೆಟ್ಟಗಳ ಸಾಲಿನಲ್ಲಿ 3 ಸಾವಿರ ಅಡಿ ಎತ್ತರದಲ್ಲಿ ಏಕಶಿಲೆಯ ಮೇಲೆ ಪುಟ್ಟ ಜಾಗದಲ್ಲಿ ನೆಲೆಸಿರುವ ಆ ಗಣೇಶ ಮೂರ್ತಿಯ ಬಗ್ಗೆ ನಿಮಗೆ ಗೊತ್ತೇ!

ಈ ಗಣೇಶನ ವಿಗ್ರಹವು ಛತ್ತೀಸ್‌ಗಢದ ದಾಂತೇವಾಡದ ಬೈಲಾಡಿಲಾದ ಢೋಲ್ಕಲ್ ಬೆಟ್ಟದ ಮೇಲೆ ನೆಲೆಗೊಂಡಿದೆ. ಪುರಾಣಗಳ ಪ್ರಕಾರ, ಈ ಬೆಟ್ಟದಲ್ಲಿ ಗಣೇಶ ಮತ್ತು ಪರಶುರಾಮ ನಡುವೆ ಯುದ್ಧ ನಡೆಯಿತು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಯುದ್ಧದಲ್ಲಿ ಪರಶುರಾಮನ ಕೊಡಲಿಯು ವಿನಾಯಕನ ಮುಖಕ್ಕೆ ಡಿಚ್ಚಿ ಹೊಡೆದಾಗ, ಆತನ ಒಂದು ಹಲ್ಲು ಮುರಿಯಿತು. ಅದಕ್ಕಾಗಿಯೇ ಬೆಟ್ಟದ ಕೆಳಗಿನ ಗ್ರಾಮಕ್ಕೆ ಫರಸ್ಪಾಲ್ ಎಂದು ಹೆಸರಿಸಲಾಯಿತು.

ತದನಂತರ, ನಾಗವಂಶದ ರಾಜರು ಗಣೇಶನ ವಿಗ್ರಹವನ್ನು ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ, ಈ ಘಟನೆಯು ಈ ಪ್ರಪಂಚ ಇರುವವರೆಗೂ ಶಾಸ್ವತವಾಗಿ ನೆನಪಿನಲ್ಲುಳಿಯುತ್ತದೆ. ಈ ವಿಗ್ರಹವು 11 ನೇ ಶತಮಾನಕ್ಕೆ ಸೇರಿದೆ. ಈ ಗಣಪನಿಗೆ ಬಯಲೇ ಆಹ್ಲಾದಕರ ಪ್ರಶಾಂತ ಆಲಯವಾಗಿದ್ದು, ಅರ್ಚಕರು ಹೆಲಿಕಾಪ್ಟರಿನಲ್ಲಿ ಬಂದು ಇಲ್ಲಿನ ಗಣಪನಿಗೆ ಪೂಜೆ ಸಲ್ಲಿಸುತ್ತಾರೆ!

ಗ್ರಾನೈಟ್ ಕಲ್ಲಿನಿಂದ 6 ಅಡಿ ಉದ್ದ ಮತ್ತು 2.5 ಅಡಿ ಅಗಲದ ಈ ಮೂರ್ತಿಯು ತುಂಬಾ ಕಲಾತ್ಮಕವಾಗಿದೆ. ಈ ಗಣೇಶನ ವಿಗ್ರಹದ ಬಲ ಹಣೆಯ ಮೇಲೆ ಕೊಡಲಿ, ಮೇಲಿನ ಎಡ ಹಣೆಯ ಮೇಲೆ ಮುರಿದ ಹಲ್ಲು, ಕೆಳಗಿನ ಬಲ ಹಣೆಯ ಮೇಲೆ ಅಭಯ ಮುದ್ರೆಯಿರುವ ಹಾರ ಮತ್ತು ಕೆಳಗಿನ ಎಡಗೈಯಲ್ಲಿ ಮೋದಕವಿಟ್ಟು ಪ್ರತಿಷ್ಠಾಪಿಸಲಾಗಿದೆ.

ಸ್ಥಳೀಯ ಗ್ರಾಮಸ್ಥರು ಈ ಏಕದಂತನನ್ನು ತಮ್ಮ ರಕ್ಷಕ ಎಂದು ಪೂಜಿಸುತ್ತಾರೆ. ಧೋಲ್ಕಲ್ ಶಿಖರದ ಬಳಿಯ ಎರಡನೇ ಶಿಖರದಲ್ಲಿ ಪಾರ್ವತಿ ದೇವಿ ಮತ್ತು ಸೂರ್ಯ ದೇವರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸುಮಾರು 15 ವರ್ಷಗಳ ಹಿಂದೆ ಇದು ಕಳ್ಳತನವಾಗಿದೆ. ಇದುವರೆಗೂ ಕಳ್ಳತನವಾಗಿರುವ ವಿಗ್ರಹಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬೆಟ್ಟದ ತುದಿಗೆ ಹೋಗುವ ದಾರಿಯಲ್ಲಿ ಕಾಡುಪ್ರಾಣಿಗಳ ಭಯವಿದೆ. ಆದರೆ ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಆದಿವಾಸಿಗಳ ನಂಬಿಕೆ.

Source : https://tv9kannada.com/spiritual/ganesha-chaturthi-2024-dholkal-ganesh-idol-in-dantewada-chhattisgarh-is-3000-feet-above-sea-level-sas-897352.html

Leave a Reply

Your email address will not be published. Required fields are marked *