ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ 10 ಮಂದಿ ವಶಕ್ಕೆ, ತೀವ್ರ ವಿಚಾರಣೆ.

ಮೈಸೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟ ದರ್ಶನ್ ಸೇರಿ 10 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಇಂದು ಬೆಳಗ್ಗೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದನು. ಈ ಕಾರಣಕ್ಕೆ ನಟ ದರ್ಶನ್ ಸೂಚನೆ ಮೇರೆಗೆ ಅವರ ಗೆಳೆಯಲು ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ರೇಣುಕಾಸ್ವಾಮಿ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹಿನ್ನೆಲೆ: ನಟ ದರ್ಶನ್ ಪವಿತ್ರಾ ಗೌಡ ಎಂಬಾಕೆ ಜೊತೆ ಆಪ್ತವಾಗಿದ್ದು, ಈ ಬಗ್ಗೆ ಪವಿತ್ರಾ ಗೌಡ ಕೆಲ ಸಮಯ ಹಿಂದೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖಾರವಾಗಿ ಆಕ್ಷೇಪ ವ್ಯಕ್ತಪಡಿಸಿ ನಂತರ ಸೋಷಿಯಲ್ ಮೀಡಿಯಾ ಮೂಲಕ ಇಬ್ಬರೂ ಕಿತ್ತಾಡಿಕೊಂಡಿದ್ದು ಸುದ್ದಿಯಾಗಿತ್ತು.

ಈ ಘಟನೆ ನಂತರ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲ ಮೇಸೆಜ್ ಮಾಡಿದ್ದನು ಎಂದು ಹೇಳಲಾಗಿದೆ. ಇದರಿಂದ ಕೆರಳಿದ ದರ್ಶನ್ ಮತ್ತು ಅವರ ಸ್ನೇಹಿತರು ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದರು. ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕ ಸ್ವಾಮಿಯನ್ನು ಕೊಲೆ ಮಾಡಿ ಮೋರಿಗೆ ಎಸೆದು ಹೋಗಿದ್ದರು. ಈ ಘಟನೆ ನಡೆದಿದ್ದು ಮೊನ್ನೆ ಜೂನ್ 9ರಂದು. ಇದಾಗಿ ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದುತಂದಾಗಲೇ ಶವ ಪತ್ತೆಯಾಗಿದ್ದು. ಮೊನ್ನೆ ಭಾನುವಾರ ಶವ ಪತ್ತೆಯಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಾ ಹೋದಾಗ ಇದರ ಹಿಂದಿನ ರೂವಾರಿ ದರ್ಶನ್ ಎಂದು ತಿಳಿಯಿತು.

ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ಬೆಂಗಳೂರಿಕೆ ಕರೆದುಕೊಂಡು ಬರಲಾಗಿತ್ತು. ವಿನಯ್​ ಎನ್ನುವವರಿಗೆ ಸೇರಿದ ಶೆಡ್​ನಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. 4 ಜನ ಹಲ್ಲೆ ಮಾಡಿದ ತಂಡದಲ್ಲಿ ದರ್ಶನ್​ ಇದ್ದ ಬಗ್ಗೆ ಮಾಹಿತಿ ಇದೆ. ಹತ್ಯೆ ಮಾಡಿ ಮೃತದೇಹವನ್ನು ಮೋರಿಯಲ್ಲಿ ಎಸೆದು ಹೋಗಲಾಗಿತ್ತು. ವಿಜಯನಗರ ACP ಚಂದನ್​ ತಂಡದಿಂದ ದರ್ಶನ್​ ವಶಕ್ಕೆ ಪಡೆಯಲಾಗಿದೆ.

ನಟ ದರ್ಶನ್ ಮನೆಗೆ ಬಿಗಿ ಭದ್ರತೆ: ದರ್ಶನ್ ಅವರಿಗೆ ಕರ್ನಾಟಕದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಮೈಸೂರು, ಮಂಡ್ಯ ಭಾಗಗಳಿಂದ ಅವರನ್ನು ನೋಡಲೆಂದು ಅಭಿಮಾನಿಗಳು ಅವರ ಬೆಂಗಳೂರಿನ ರಾಜರಾಜೇಶ್ವರಿ ನಿವಾಸ ಬಳಿ ಬರುತ್ತಿರುತ್ತಾರೆ. ಇಂದು ಅವರನ್ನು ವಶಕ್ಕೆ ಪಡೆದಿರುವ ವಿಚಾರ ತಿಳಿದು ಅಭಿಮಾನಿಗಳು ರೊಚ್ಚಿಗೆದ್ದು ದಾಂಧಲೆ ನಡೆಸುವ ಸಾಧ್ಯತೆಯಿರುವುದರಿಂದ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸ ಬಳಿ ವಿಶೇಷ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅಲ್ಲಿ ಈಗ ಕೆಎಸ್ ಆರ್ ಪಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ.

ಪೊಲೀಸರಿಂದ ಸ್ಥಳ ಮಹಜರು: ಕೊಲೆ ನಡೆದು ಮೋರಿಗೆ ಎಸೆದ ಕಾಮಾಕ್ಷಿಪಾಳ್ಯದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ. ಸುಮನಹಳ್ಳಿಯ ಸತ್ವ ಅಪಾರ್ಟ್ ಮೆಂಟ್ ಬಳಿಯಿರುವ ಮೋರಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಹೇಗೆ ನಡೆಯಿತು, ಯಾವಾಗ ನಡೆಯಿತು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ದರ್ಶನ್ ಮತ್ತು ಅವರ ಆಪ್ತರನ್ನು ಪೊಲೀಸರು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Source : https://www.kannadaprabha.com/cinema/news/2024/Jun/11/challenging-star-darshan-arrested-in-mysuru-today

Leave a Reply

Your email address will not be published. Required fields are marked *