ಚಿತ್ರದುರ್ಗ ಆ. 08
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಆಕರ್ಷಣೆಗಳಿಗೆ ಒಳಗಾಗದೆ,ಆಡಿಕೊಳ್ಳುವವರ ಮಾತುಗಳಿಗೆ ಮಹತ್ವ ನೀಡದೆ ಏಕಾಗ್ರತೆಯಿಂದ ಗುರಿ ತಲುಪಲು ಕೆಲವೊಮ್ಮೆ ಕಿವುಡರಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ತಿಮ್ಮಯ್ಯ ತಿಳಿಸಿದರು.

ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರದಂದು ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ,ವಿವಿಧ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಏಳ್ಗೆಗೆ ತಂದೆ,ತಾಯಿ,ಉಪನ್ಯಾಸಕರು ,ಸಮಾಜ ,ಬಂಧುಗಳು,ಸ್ನೇಹಿತರು,ಸರಕಾರ ಎಲ್ಲರೂ ಕೇವಲ ಪೂರಕ ಮತ್ತು ಮಾರ್ಗದರ್ಶಕರಾಗಿರುತ್ತಾರೆ ಹೊರತು ಎಂದಿಗೂ ಕಾರಣರಾಗುವುದಿಲ್ಲ. ಹೀಗಾಗಿ ನಿನ್ನ ಬಾಳಿಗೆ ನೀನೇ ಶಿಲ್ಪಿ. ನೀನು ಮನಸ್ಸು ಮಾಡದೇ,ಕ್ರಿಯೆಯಲ್ಲಿ ಪಾಲ್ಗೊಳ್ಳದೇ ನಿನಗೆ ಗೆಲುವು ಸಿಗುವುದಿಲ್ಲ. ನಿರಂತರ ಪ್ರಯತ್ನದಿಂದ ಮಾತ್ರ ಪ್ರತಿಫಲ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ನಡೆಯಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತುಮಕೂರಿನ ನಿವೃತ್ತ ಉಪನ್ಯಾಸಕರು ಹಾಗೂ ಯಕ್ಷಗಾನ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಸಣ್ಣಹೊನ್ನಯ್ಯ ಕಂಠಲಗೆರೆ ತಮ್ಮ ಪ್ರಧಾನ ಭಾಷಣದಲ್ಲಿ ಮಾತನಾಡಿ “ಯಶಸ್ಸು ಕಂಡ ಕಂಡಲ್ಲಿ ಬೆಳೆಯುವ ಸಾಧರಣ ಹೂವಲ್ಲ.ಅದು ಆತ್ಮವಿಶ್ವಾಸವಿರುವ,ಸೃಜನಶೀಲ ಮನಸ್ಸುಳ್ಳ,ಶಿಸ್ತು ಬದ್ದತೆಯುಳ್ಳ,ಸಮಯ ಪ್ರಜ್ಞೆಯುಳ್ಳ ಪವಿತ್ರವಾದ ಹೃದಯಗಳಲ್ಲಿ ಬೆಳೆಯುವ ಮಂದಾರ ಪುಷ್ಪ” ಆ ಪುಷ್ಪವಾಗುವ ಕನಸು ಮನಸ್ಸು ನಮ್ಮದಾಗಬೇಕು.ನಮ್ಮ ವ್ಯಕ್ತಿತ್ವ ಎಣ್ಣೆ ಬತ್ತಿಯಂತೆ ಇನ್ನೊಂದು ಎಣ್ಣೆಯ ದೀಪವನ್ನು ಹಚ್ಚುವಂತಿರಬೇಕು .ಇತರರಿಗೆ ನಮ್ಮ ನಡೆ-ನುಡಿ ಆದರ್ಶ ಪ್ರಾಯವಾಗಬೇಕು ಮತ್ತು ದಾರಿ ದೀಪವಾಗಬೇಕು ಎಂದರು.
ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಮಾತನಾಡಿ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪಠ್ಯಕ್ರಮದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳು ಪೂರಕವಾಗುತ್ತವೆ.ಹೀಗಾಗಿ ವಿದ್ಯಾರ್ಥಿಗಳು ಈ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸದರಿ ಕಾಲೇಜಿನ ಪ್ರಾಂಶುಪಾಲರಾದ ಪಿ.ಎ. ಸಣ್ಣ ಪಾಲಯ್ಯ ಮಾತನಾಡಿ ಯಾರೂ ಹುಟ್ಟಿನಿಂದ ಜಾಣರಾಗಿರುವುದಿಲ್ಲ. ನಿರಂತರ ಪ್ರಯತ್ನದಿಂದ ಜಾಣನಾಗಬಲ್ಲೆ ಎಂಬ ನಂಬಿಕೆ ಇರಬೇಕು.ಕನಸು ಕಾಣಲು ಸಾಧ್ಯವಾಗುವುದಾದರೆ ನನಸು ಮಾಡಲು ಸಾಧ್ಯವಿದೆ ಎಂಬ ನಂಬಿಕೆಯಿಂದ ಕಲಿತ ಈ ಕಾಲೇಜಿನ ವಿದ್ಯಾರ್ಥಿನಿಯರು ಇಂದು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿ ನಿಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ.ಈ ವರ್ಷ ನೀವುಗಳು ಸಹ ಅವರಂತೆ ಶ್ರದ್ಧೆಯಿಂದ ಕಲಿತು ಈ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಹೆಚ್ಚಿಸಬೆಕೆಂದು ಕರೆ ನೀಡಿದರು.
ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ಗಾಯತ್ರಿ ಶಿವರಾಂ,ಹಿರಿಯ ಉಪನ್ಯಾಸಕರಾದ ಹೆಚ್.ಶ್ರೀನಿವಾಸ, ಉಪ ಪ್ರಾಂಶುಪಾಲರಾದ ಎಂ.ಕರಿಯಪ್ಪ.ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಎ.ನಾಗರಾಜ್,ಎಸ್.ಡಿ ಬಸವರಾಜ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Views: 174