
ಚಿತ್ರದುರ್ಗ.ಜ.22: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಉನ್ನತೀಕರಣದ ಹಿನ್ನಲೆಯಲ್ಲಿ ನುರಿತ ವಿಷಯ ತಜ್ಞರಿಂದ ವಿಷಯವಾರು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಲು ಮತ್ತು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ನೇರ ಫೋನ್ ಇನ್ ಕಾರ್ಯಕ್ರಮ ರೂಪಿಸಲಾಗಿದೆ.
2025ನೇ ಮಾರ್ಚ್ ಮಾಹೆಯಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಜಿಲ್ಲೆಯ ಎಲ್ಲಾ ಮಕ್ಕಳನ್ನು ಉತ್ತಮವಾಗಿ ತಯಾರಿ ಮಾಡಲು ಆಕಾಶವಾಣಿ ಮೂಲಕ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷಾ ಸಿದ್ಧತೆ, ಪ್ರಾಯೋಜಿತ ನೇರ ಪೋನ್ ಇನ್ ಸರಣಿ ಕಾರ್ಯಕ್ರಮ ಪ್ರತಿ ಬುಧವಾರ ಬೆಳಿಗ್ಗೆ 10 ರಿಂದ 11 ರವರೆಗೆ ಪ್ರಸಾರವಾಗುವುದು. ಈ ಸರಣಿ ಕಾರ್ಯಕ್ರಮವು ಇದೇ ಜನವರಿ 29 ರಿಂದ ಆರಂಭವಾಗಿ ಮಾರ್ಚ್ 19 ರವರೆಗೆ ಬಿತ್ತರವಾಗುವುದು.
ಇದೇ ಜ.24ರಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ಆಕಾಶವಾಣಿಯ ನೇರ ಫೋನ್ ಇನ್ ಕಾರ್ಯಕ್ರಮದ ಚರ್ಚೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್, ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ, ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಎನ್.ಆರ್. ತಿಪ್ಪೇಸ್ವಾಮಿ, ಶಿಕ್ಷಣ ಉಪಯೋಜನ ಸಮನ್ವಯಾಧಿಕಾರಿ ಸಿ. ವೆಂಕಟೇಶ್ ಹಾಗೂ ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್ ಕೆ.ಜಿ ಭಾಗವಹಿಸುವರು.
ಈ ಸರಣಿ ಕಾರ್ಯಕ್ರಮವು 102.6 ಮೆಗಾ ಹಡ್ಜ್ಸ್ ಗಳ ತರಂಗಾಂತಗಳಲ್ಲಿ ಆಕಾಶವಾಣಿ ಚಿತ್ರದುರ್ಗ ಕೇಂದ್ರದಿಂದ ಪ್ರಸಾರವಾಗುವುದು. ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ Aakashavani Chitradurga Live streaming ಮತ್ತು prasara bharathi news on air app ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು ಎಂದು ಆಕಾಶವಾಣಿ ನಿಲಯದ ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಮತ್ತು ಪ್ರಸಾರ ಕಾರ್ಯ ಮುಖ್ಯಸ್ಥ ಡಿ.ಅರ್.ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.