ಥಟ್ ಅಂತ ಹೇಳಿ ಅ.11ಕ್ಕೆ ಮೈಲಿಗಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಬೆಂಗಳೂರು ಅ. 08ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಐದು ಸಾವಿರ ಸಂಚಿಕೆಯ ಮಹಾಸಂಭ್ರಮದ ಹೊಸ್ತಿಲಲ್ಲಿದೆ. ದೇಶದ ವಾಹಿನಿಗಳ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮ ಇಷ್ಟೊಂದು ಕಂತುಗಳನ್ನು ಪೂರೈಸಿ, ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಇದೇ ಮೊದಲು.  ಲಿಮ್ಕಾ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿರುವ ಈ ಕಾರ್ಯಕ್ರಮ ಇದೀಗ ಗಿನ್ನೆಸ್ ವಿಶ್ವದಾಖಲೆಯತ್ತ ದಾಪುಗಾಲಿಟ್ಟಿದೆ.2002ರ ಜನವರಿ 4 ರಂದು ಪ್ರಾರಂಭವಾದ ಈ ಕಾರ್ಯಕ್ರಮ ಅಕ್ಟೋಬರ್ 13ರಂದು ಐದು ಸಾವಿರದ ಸಂಚಿಕೆಯ ಪ್ರಸಾರಕ್ಕೆ ಸಜ್ಜಾಗಿದೆ.

ಹೊಸ ಮೈಲಿಗಲ್ಲು ಸಂಚಿಕೆ ಈ ತಿಂಗಳ 11 ರಂದು ಬೆಳಗ್ಗೆ 10.30 ಗಂಟೆಗೆ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‍ನಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತಿತರೆ ಗಣ್ಯರು  ಪಾಲ್ಗೊಳ್ಳುತ್ತಿದ್ದಾರೆ ಎಂದು ದೂರದರ್ಶನ ಕೇಂದ್ರ ದಕ್ಷಿಣ ವಲಯದ ಉಪಮಹಾನಿರ್ದೇಶಕರಾದ ಭಾಗ್ಯವಾನ್ ತಿಳಿಸಿದ್ದಾರೆ.

ಕಾರ್ಯಕ್ರಮಗಳ ಉಸ್ತುವಾರಿ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಎಚ್.ಎನ್. ಆರತಿ,  ಥಟ್ ಅಂತ ಹೇಳಿ?! ಕಾರ್ಯಕ್ರಮ ನಿರ್ಮಾಪಕರಾದ ಎಂ.ಎನ್. ಚಂದ್ರಕಲಾ ಅವರು ಈ ಮಹತ್ವದ ಸಂಚಿಕೆಗಳ ನಿರ್ಮಾಣದಲ್ಲಿ ತೊಡಗಿರುವುದಾಗಿ ಅವರು ತಿಳಿಸಿದ್ದಾರೆ.23 ವರ್ಷಗಳ ಹಿಂದೆ ಉಷಾಕಿರಣ ಅವರು ಈ ಕಾರ್ಯಕ್ರಮ ಆರಂಭಿಸಿದ್ದರು.

100ನೇ ಸಂಚಿಕೆಯಲ್ಲಿ ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ ಅವರು ಪಾಲ್ಗೊಂಡಿದ್ದರು. ಕನ್ನಡ ನಾಡು-ನುಡಿ, ನೆಲ-ಜಲ, ಸಾಂಸ್ಕೃತಿಕ ಸೊಗಡನ್ನು ನಾಡಿನ ಜನರಿಗೆ ಉಣಬಡಿಸುತ್ತಿರುವ ಥಟ್ ಅಂತ ಹೇಳಿ?! ಕಾರ್ಯಕ್ರಮ 2012ರಲ್ಲಿ ಲಿಮ್ಕಾ ಬುಕ್‍ಆಫ್‍ರೆಕಾಡ್ರ್ಸ್ ಗೌರವಕ್ಕೆ ಪಾತ್ರವಾಗಿತ್ತು. ಕೋವಿಡ್ ಸಮಯದಲ್ಲಿ ಕೆಲಕಾಲ ಹೊರತುಪಡಿಸಿದಂತೆ, ನಿರಂತರವಾಗಿ  ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

2500 ಗಂಟೆಗಳ ಪ್ರಸಾರದ ಅವಧಿಯಲ್ಲಿ 75 ಸಾವಿರ ಪ್ರಶ್ನೆಗಳನ್ನು ಕೇಳಲಾಗಿದ್ದು, 15 ಸಾವಿರ ಸ್ಪರ್ಧಿಗಳು  ಭಾಗವಹಿಸಿ,  70 ಸಾವಿರ ಕನ್ನಡದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ.ಕಾರಾಗೃಹ ವಾಸಿಗಳಿಗೆ ವಿಶೇಷ ಸ್ಪರ್ಧೆ, ಅಂಧರು,ಎಚ್.ಐ.ವಿ.ಸೋಂಕಿತರು, ಐಟಿ ತಜ್ಞರು, ಅನಿವಾಸಿ ಭಾರತೀಯರು ಹೀಗೆ ಹತ್ತು ಹಲವು ವಿಭಾಗಗಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗಿದೆ.ಮೆಟ್ರೋ ರೈಲಿನ ಪ್ರಯಾಣಿಕರೊಂದಿಗೆ, ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ವಿಶೇಷ ಸಂಚಿಕೆಗಳನ್ನು ಬಿತ್ತರಿಸಲಾಗಿದ್ದು, ಹಲವಾರು ಪ್ರವಾಸಿ ತಾಣಗಳಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಚಿತ್ರೀಕರಿಸಲಾಗಿದೆ.

ಇದೀಗ ಈ ಕಾರ್ಯಕ್ರಮ ಮತ್ತೊಂದು ಹೆಗ್ಗುರುತು ಮೂಡಿಸಲು ಸರ್ವಸನ್ನದ್ಧವಾಗಿದೆ ಎಂದು ಭಾಗ್ಯವಾನ್ ತಿಳಿಸಿದ್ದಾರೆ.

Views: 18

Leave a Reply

Your email address will not be published. Required fields are marked *