Ram Mandir latest update: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಗರ್ಭಗುಡಿ ಸಿದ್ಧವಾಗಿದ್ದು, ಇದರೊಂದಿಗೆ ಶ್ರೀರಾಮ ಮೂರ್ತಿ ಪಟ್ಟಾಭಿಷೇಕದ ದಿನಾಂಕವೂ ಮುನ್ನೆಲೆಗೆ ಬಂದಿದೆ.

Ram Mandir latest update: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಯಾವಾಗ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆಯೋ ಎನ್ನುತ್ತಾ ಅದೆಷ್ಟೋ ಭಕ್ತರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಇದೀಗ ಹೊಸ ಅಪ್ಡೇಟ್ ಹೊರಬಿದ್ದಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಮೂಲಕ ಹಲವು ವರ್ಷಗಳ ಕಾಯುವಿಕೆಗೆ ಕೊನೆಗೂ ಅಂತ್ಯ ಬೀಳುವ ಸಮಯ ಬಂದಿದೆ ಎನ್ನಬಹುದು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಗರ್ಭಗುಡಿ ಸಿದ್ಧವಾಗಿದ್ದು, ಇದರೊಂದಿಗೆ ಶ್ರೀರಾಮ ಮೂರ್ತಿ ಪಟ್ಟಾಭಿಷೇಕದ ದಿನಾಂಕವೂ ಮುನ್ನೆಲೆಗೆ ಬಂದಿದೆ. ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಮುಂದಿನ ವರ್ಷ ಮಕರ ಸಂಕ್ರಾಂತಿಯ ನಂತರ ಜನವರಿ 16ರಿಂದ 24ರೊಳಗೆ ರಾಮಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ರಾಮಮಂದಿರ ತೀರ್ಥ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಪೂಜ್ಯರನ್ನು ಭೇಟಿಯಾದ ಬಳಿಕ ಮಂದಿರ ನಿರ್ಮಾಣದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ದೇವಸ್ಥಾನದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದು, ಗರ್ಭಗುಡಿಯಲ್ಲಿ ಯಾವಾಗ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.
ಗರ್ಭಗುಡಿಯಲ್ಲಿ ಶ್ರೀರಾಮ ಭವ್ಯ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳ ಸಂಪೂರ್ಣ ಸಿದ್ಧಗೊಂಡಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ. “ಎರಡು ಅಂತಸ್ತಿನ ದೇವಸ್ಥಾನ ಇದಾಗಿದೆ. ಇದೀಗ ಮೊದಲ ಅಂತಸ್ತಿನ ಮೇಲ್ಛಾವಣಿಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೇವಸ್ಥಾನದಲ್ಲಿ ಭಕ್ತರ ದರ್ಶನದ ಜತೆಗೆ ನಿರ್ಮಾಣ ಕಾರ್ಯವೂ ಮುಂದುವರಿಯಲಿದ್ದು, ಇದರಿಂದ ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ. ಕೋಟ್ಯಂತರ ರಾಮಭಕ್ತರ ಕನಸು ನನಸಾಗಲಿದ್ದು, ಹಲವು ವರ್ಷಗಳ ವಿವಾದದ ಬಳಿಕ ಇದೀಗ ಶ್ರೀರಾಮ ಅಯೋಧ್ಯೆಯ ತನ್ನ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರಕ್ಕೆ ಬಿಗಿ ಭದ್ರತೆ:
ರಾಮಮಂದಿರದ ಭದ್ರತಾ ವ್ಯವಸ್ಥೆಯ ಕುರಿತು ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆಗೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. “ದೇವಸ್ಥಾನದ ಭದ್ರತೆಯಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಯ ತರಬೇತಿಗಾಗಿ ಕ್ಯಾಪ್ಸೂಲ್ ಕೋರ್ಸ್ ಮಾಡಲಾಗುವುದು. ಅದರಲ್ಲಿ ಅವರಿಗೆ ಸಂಪೂರ್ಣ ತರಬೇತಿ ನೀಡಲಾಗುವುದು. ವಸತಿ, ಉಡುಗೆ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು” ಎಂದು ತಿಳಿಸಿದ್ದಾರೆ.