ಪರಿಶಿಷ್ಟರಿಗೆ ಮಾತ್ರ ಕ್ರಿಶ್ಚಿಯನ್ ಪದ ಬಳಕೆ ಸರಿಯಲ್ಲ;ಎಚ್.ಆಂಜನೇಯ

ಪರಿಶಿಷ್ಟರ ವಿಷಯದಲ್ಲಿ ನಿರ್ಲಕ್ಷ್ಯ; ಅಕ್ಷಮ್ಯ ಅಪರಾಧ ಆಂಜನೇಯ ಆಕ್ರೋಶ

ಜಾತಿ ಸಮೀಕ್ಷೆ ಕಾರ್ಯ ಪಾರದರ್ಶಕ ನಡೆಯಲಿ ಎಚ್.ಆಂಜನೇಯ ಹೇಳಿಕೆ

ಚಿತ್ರದುರ್ಗ, ಸೆ.22:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ಪರಿಶಿಷ್ಟರಿಗೆ ಸೀಮಿತಗೊಳಿಸಿ ಕ್ರಿಶ್ಚಿಯನ್ ಪದ ಜೋಡಿಸಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ದೂರಿದರು.

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ, ಮೇಲ್ವರ್ಗದ ಆಕ್ಷೇಪಗಳಿಗೆ ಮನ್ನಣೆ ನೀಡಿ ಅವರ ಜಾತಿ ಜೊತೆಗೆ ಕ್ರಿಶ್ಚಿಯನ್ ಪದ ಕೈಬಿಡಲಾಗಿದೆ. ಆದರೆ, ಪರಿಶಿಷ್ಟ ಜಾತಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ ಜನರು ಎಲ್ಲ ರೀತಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವರ್ಗ. ಈ ಗುಂಪಿಗೆ ನ್ಯಾಯಯುತವಾಗಿ ಎಲ್ಲ ಹಕ್ಕುಗಳು, ಸೌಲಭ್ಯಗಳನ್ನು ನೀಡಲು ಸಮೀಕ್ಷೆ ಕಾರ್ಯ ಪಾರದರ್ಶಕವಾಗಿ ನಡೆಯಬೇಕು. ಈ ಕಾರಣಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ನಡೆಸಿದ ಗಣತಿಯಲ್ಲಿ ಧರ್ಮದ ಕಾಲಂ ಇರಲಿಲ್ಲ. ಆದರೆ, ಈಗ ಧರ್ಮದ ಕಲಂ ಸೇರಿಸಿರುವುದೇ ತಪ್ಪು. ಮೀಸಲಾತಿ ಜಾತಿ ಆಧಾರಿತವಾಗಿದ್ದು, ಧರ್ಮ ಕೇಳುವ ಅಗತ್ಯವೇ ಇರಲಿಲ್ಲ ಎಂದರು.

ಒಂದೆಡೆ ಹಿಂದೂ ಎಂದು ಬರೆಸುವಂತೆ ಬಿಜೆಪಿ ಬೊಬ್ಬೆ ಹಾಕುತ್ತಿದೆ. ಈ ಮಧ್ಯೆ ಆಯೋಗ ಮಾದಿಗ ಕ್ರಿಶ್ಚಿಯನ್, ಛಲವಾದಿ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಇದು ಎಸ್ಸಿಗಳ ಜನಸಂಖ್ಯೆ ಕುಗ್ಗಿಸುವ ಕೆಲಸ ಆಗಲಿದೆ. ಒಂದೊಮ್ಮೆ ಯಾವುದೇ ಜಾತಿಯವರು ಮತಾಂತರಗೊಂಡಿದ್ದರೇ ಅವರು ಆ ಧರ್ಮವನ್ನೇ ಬರೆಸುತ್ತಾರೆ. ಇಂತಹ ಸಂದರ್ಭ ಅನಗತ್ಯವಾಗಿ ಗೊಂದಲ ಉಂಟು ಮಾಡುವ
ಕೆಲಸ ಆಯೋಗ ಮಾಡುತ್ತಿದೆ ಎಂದು ಆರೋಪಿಸಿದರು. ಈ ಕೂಡಲೇ ಪರಿಶಿಷ್ಟ ಜಾತಿ ಜೊತೆಗೆ ಕ್ರಿಶ್ಚಿಯನ್ ಪದ ತೆಗೆದು ಸಮೀಕ್ಷೆ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೇ ಆಯೋಗದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾದಿಗ, ಛಲವಾದಿಗಳು ಅಸ್ಪೃಶ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಚರ್ಚ್‍ಗೆ ಹೋಗಿ ಪ್ರಾರ್ಥನೆ ಮಾಡುವುದು, ಕ್ರಿಶ್ಚಿಯನ್ ಧರ್ಮ ಆಚರಣೆ ಮಾಡುತ್ತಾರೆ. ಆದರೆ, ಅವರ್ಯಾರೂ ತಮ್ಮ ಮೂಲ ಜಾತಿಯಿಂದ ಹೊರಹೋಗಿರುವುದಿಲ್ಲ. ಅಂತವರನ್ನು ಮೀಸಲಾತಿಯಿಂದಲೇ ಹೊರಗಿಡುವ ಕೆಲಸ ಆಯೋಗ ಮಾಡುತ್ತಿರುವುದು ಸರಿಯಲ್ಲ. ಅಸ್ಪೃಶ್ಯ ನೋವು ಅರಿತುಕೊಳ್ಳಬೇಕು. ಒಂದೊಮ್ಮೆ ಮತಾಂತರ ಆಗಿದ್ದರೇ ಅವರು ಕ್ರಿಶ್ಚಿಯನ್ ಎಂದೇ ಬರೆಸುತ್ತಾರೆ ಎಂದರು.

ಈಗಲೂ ಮಾದಿಗರು ಬೆತ್ತಲೆ, ಬಸವಿ, ದೇವದಾಸಿ, ಉರುಳುಸೇವೆ ಅಂತಹ ಅನಿಷ್ಠ ಮೌಢ್ಯಆಚರಿಸುತ್ತಿದ್ದಾರೆ. ಇನ್ನೂ ಜಾತ್ರೆಗಳ ಹೆಸರಲ್ಲಿ ಪ್ರಾಣಿ ಬಲಿ ನೀಡಿ ಮಧ್ಯ-ಮಾಂಸ ಉಂಡು ಸಾಲದ ಸುಳಿಗೆ ಸಿಲುಕಿತ್ತಿದ್ದಾರೆ. ಇಂತಹ ಜನರಲ್ಲಿ ಜಾಗೃತಿ ಮೂಡಿಸುವ ರೀತಿ ಆಯೋಗ ಕಾರ್ಯ ನಿರ್ವಹಿಸಬೇಕು. ಅವರನ್ನು ದಾರಿತಪ್ಪಿಸುವ ರೀತಿ ಮಾಡಬಾರದು ಎಂದು ತಿಳಿಸಿದರು.

ಒಳಮೀಸಲಾತಿ ಸಂಬಂಧ ಈಚೆಗೆ ಪರಿಶಿಷ್ಟರಿಗೆ ಸೀಮಿತಗೊಳಿಸಿ ಸಮೀಕ್ಷೆ ನಡೆಸಿ, ಕೆಲವೇ ತಿಂಗಳು ಆಗಿವೆ. ಮೂರೇ ತಿಂಗಳಲ್ಲಿ ಜನಸಂಖ್ಯೆ ಏರುಪೇರು ಆಗಿರುವುದಿಲ್ಲ. ಈ ಕಾರಣಕ್ಕೆ ಎಸ್ಸಿಗಳನ್ನು ಹೊರಗಿಟ್ಟು ಸಮೀಕ್ಷೆ ನಡೆಸಿದ್ದರೇ ಸಿಬ್ಬಂದಿಗೆ ಕೆಲಸ, ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆ ಆಗುತ್ತಿತ್ತು. ಆಯೋಗದಲ್ಲಿರುವವರು ಸ್ವಲ್ಪ ಜ್ಞಾನ ಬಳಕೆ ಮಾಡಬೇಕಾಗಿತ್ತು. ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಕೊಡುವುದಕ್ಕಿಂತಲೂ ಮುಂಚೆ ಎಲ್ಲವೂ ಸರಿಯಿದೆ ಎನ್ನುತ್ತಿದ್ದವರು ಈಗ ತಕರಾರು ತೆಗೆದು ಕೋರ್ಟ್ ಮೊರೆ ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಒಳಮೀಸಲಾತಿ ಹಂಚಿಕೆ ಜನಸಂಖ್ಯೆಗಿಂತಲೂ ಹಿಂದುಳಿಯುವಿಕೆ ಆಧಾರದಡಿ ನೀಡಲಾಗಿದೆ. ಛಲವಾದಿ ಸಮಾನಂತರ ಜಾತಿವರನ್ನು ಅವರ ನಿಕೃಷ್ಠ ಬದುಕಿನ ಕಾರಣಕ್ಕೆ ಮಾದಿಗ ಗುಂಪಿಗೆ ಸೇರಿಸಿದ್ದರು. ಇದನ್ನು ತಪ್ಪು ಅರ್ಥ ಮಾಡಿಕೊಂಡು ಗೊಂದಲದ ಹೇಳಿಕೆಗಳನ್ನು ನೀಡಲಾಯಿತು. ಪರಿಶಿಷ್ಟ ಜಾತಿಯ ಸಚಿವರೆಲ್ಲರೂ ಒಮ್ಮತದ ಚರ್ಚೆ ಬಳಿಕ ಒಳಮೀಸಲಾತಿ ಜಾರಿಗೊಂಡಿದ್ದು, ಮಾದಿಗರಿಗೆ ಶೇ.7 ಮೀಸಲಾತಿ ಸಿಗಬೇಕಿತ್ತು. ಆದರೂ ಏನೂ ಇಲ್ಲದ ನಮಗೆ ಶೇ.6 ಮೀಸಲಾತಿ ನೀಡಿರುವುದನ್ನೇ ಒಪ್ಪಿಕೊಂಡಿದ್ದೇವೆ. ಆದರೆ, ನಮಗಿಂತಲೂ ಆರ್ಥಿಕ, ಶೈಕ್ಷಣಿ, ಔದ್ಯೋಗಿಕವಾಗಿ ಹೆಚ್ಚು ಲಾಭ ಪಡೆದವರೇ ಈಗ ಅನಗತ್ಯವಾಗಿ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಾಹಿತಿ ದೇವನೂರು ಮಹಾದೇವ್ ಅಂತಹ ಹಿರಿಯರೇ ನಾಗಮೋಹನ್ ದಾಸ್ ಆಯೋಗದ ವರದಿ ವೈಜ್ಞಾನಿಕವಾಗಿದೆ ಎಂದು ಹೇಳಿದ್ದರೂ, ಅಂಬೇಡ್ಕರ್ ವಾರಸುದಾರರಂತೆ ವರ್ತಿಸುವವರೇ ಸಂವಿಧಾನದ ಆಶಯದ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಾವೆಲ್ಲರೂ ಸಹೋದರರ ರೀತಿ ಬದುಕಬೇಕು. ಅಲೆಮಾರಿಗಳ ಬದುಕು ಉತ್ತಮಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ ಎಂದರು. 5 ಲಕ್ಷ ಜನರು ಆದಿಕನಾಟಕ, ಆದಿದ್ರಾವಿಡ, ಆದಿಆಂಧ್ರ ಎಂದು ಬರೆಯಿಸಿದ್ದೂ, ಅವರೆಲ್ಲರೂ ಮೀಸಲಾತಿ ಪಡೆಯಲು ತಮ್ಮ ಮೂಲ ಜಾತಿಯಲ್ಲಿ ಗುರುತಿಸಿಕೊಳ್ಳಬೇಕು. ಇಲ್ಲದಿದ್ದರೇ ಚಿಪ್ಪೇ ಗತಿ ಎಂದು ಆಂಜನೇಯ ಎಚ್ಚರಿಸಿದರು.

ಈಗ ಜಾತಿಗಣತಿ ವೇಳೆಯಾದರೂ ಮೂಲ ಜಾತಿ ಬರೆಯಿಸಿ, ಒಳಮೀಸಲಾತಿ ಸೌಲಭ್ಯ ಪಡೆಯಬೇಕು. ಹಟ್ಟಿ, ಕಾಲೋನಿ, ನಗರ ಪ್ರದೇಶದಲ್ಲಿ ಇನ್ನಷ್ಟು ಅಭಿಯಾನ, ಜಾಗೃತಿ ನಡೆಸಿ ಜಾತಿ ಮಾದಿಗ, ಧರ್ಮ ಹಿಂದೂ ಎಂದೇ ಬರೆಯಿಸುವಂತೆ ಮಾಡಬೇಕು. ಈ ಮೂಲಕ ನಮ್ಮ ಜನಸಂಖ್ಯೆ ಕುಗ್ಗಿಸುವ ಷಡ್ಯಂತರಕ್ಕೆ ತಕ್ಕ ಉತ್ತರ
ನೀಡಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲ ರವೀಂದ್ರ, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು ಇತರರಿದ್ದರು.

Views: 6

Leave a Reply

Your email address will not be published. Required fields are marked *