ವೃಂದ ಮತ್ತು ನೇಮಕ ನಿಯಮದ ಪೂರ್ವಾನ್ವಯ ಜಾರಿ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಪ್ರೖೆಮರಿ ಶಿಕ್ಷಕರು ಹೋರಾಟಕ್ಕೆ ಸಜ್ಜು.

ಈ ಪರಿಸ್ಥಿತಿ ವಿರುದ್ಧ ಸಿಡಿದೆದ್ದಿರುವ ಶಿಕ್ಷಕರು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಹಳೆ ಮೊಳಗಿಸಿದ್ದಾರೆ. ರಾಜ್ಯದಲ್ಲಿ ಸುಮಾರು 80, 000 ಪಿಎಸ್​ಟಿ ಶಿಕ್ಷಕರು ಬಿ.ಎ, ಬಿ.ಎಸ್ಸಿ, ಬಿ.ಎಡ್, ಎಂ.ಎ, ಎಂ.ಎಸ್ಸಿ, ಎಂ.ಎಡ್, ಎಂ.ಫಿಲ್, ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಆದರೂ ಇವರಿಗೆ ಬಡ್ತಿ ನೀಡುವ ಬದಲು ಹಿಂಬಡ್ತಿ ನೀಡಲಾಗಿದೆ!

ಬಡ್ತಿಗೆ ದೊಡ್ಡ ಪೆಟ್ಟು: 2016ಕ್ಕೂ ಮುಂಚೆ 1-7/8ಕ್ಕೆ ನೇಮಕ ಹೊಂದಿದ್ದ ಶಿಕ್ಷಕರನ್ನು ಪಿಎಸ್​ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿ ಹಿಂಬಡ್ತಿ ನೀಡಲಾಗಿದೆ. 6-8ನೇ ತರಗತಿ ಬೋಧನೆಗೆಂದು ಜಿಪಿಟಿ ಎಂಬ ಹೊಸ ವೃಂದ ಸೃಜಿಸಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಇದು ಸೇವಾನಿತರ ಪಿಎಸ್​ಟಿ ಶಿಕ್ಷಕರ ಸೇವೆ ಮತ್ತು ವಿದ್ಯಾರ್ಹತೆ ನಿರ್ಲಕ್ಷಿಸಿ ಹಿಂಬಡ್ತಿ ನೀಡಿದ್ದು ಸಾಂವಿಧಾನಿಕ ಆಶಯ ಉಲ್ಲಂಘಿಸಲಾಗಿದೆ. ಶಿಕ್ಷಣ ಇಲಾಖೆ ಈ ಕ್ರಮದಿಂದ ಶಿಕ್ಷಕರಿಗೆ ಸೇವಾ ಜೇಷ್ಠತೆ, ಕಾಲಮಿತಿ ಬಡ್ತಿ, ಸ್ವಯಂ ಚಾಲಿತ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲೆ ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆಯಲ್ಲಿ ಅನ್ಯಾಯವಾಗಿದೆ.

ಈವರೆಗೆ ಬಿ.ಎಡ್ ಅರ್ಹತೆ ಪಡೆದ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ಕೊಡುವ ನಿಯಮವಿತ್ತು. ಆದರೆ ಈಗ 1-7/8 ಶಿಕ್ಷಕರನ್ನು 1-5 ತರಗತಿ ಬೋಧನೆಗೆ ಇಳಿಸಿ ಕಡಿಮೆ ವೇತನ ಶ್ರೇಣಿಯ ಹುದ್ದೆಯಾದ 6-8ನೇ ತರಗತಿ ಬೋಧನೆಗೆ ಬಡ್ತಿ ನೀಡುತ್ತೇವೆ ಎನ್ನುತ್ತಿರುವುದರಿಂದ ಈಗಾಗಲೇ 1-7/8ನೇ ತರಗತಿ ಬೋಧನೆ ಮಾಡುತ್ತಿದ್ದ ಶಿಕ್ಷಕರಿಗೆ ಹಿಂಬಡ್ತಿಯಾಗಿದೆ.

ತೀವ್ರಗೊಂಡ ಆಕ್ರೋಶ: ಮೊದಲಿದ್ದ ಅಖಂಡ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು 1-5 ಮತ್ತು 6-8 ಎಂದು 2 ವೃಂದದಲ್ಲಿ ವಿಭಾಗಿಸಿ ಪಿಎಸ್​ಟಿ ಶಿಕ್ಷಕರನ್ನು ಕೆಳವೃಂದಕ್ಕೆ ಸೀಮಿತಗೊಳಿಸಿರುವುದು ಶಿಕ್ಷಕರ ತೀವ್ರ ಅಸಮಾಧಾನಕ್ಕೆ ಇಂಬು ಮಾಡಿಕೊಟ್ಟಿದೆ. ವೃಂದ ವಿಭಜನೆ ಮಾಡಿರುವುದರಿಂದ ಬಡ್ತಿ, ವರ್ಗಾವಣೆ ಮಾತ್ರವಲ್ಲ, ವೇತನದಲ್ಲೂ ದೊಡ್ಡ ತಾರತಮ್ಯವಾಗಿದೆ.

ಬಡ್ತಿ ಇಲ್ಲದೇ ನಿವೃತ್ತಿ!: ಜಿಪಿಟಿ ಶಿಕ್ಷಕರನ್ನೂ ಮುಖ್ಯ ಶಿಕ್ಷಕರ ಹುದ್ದೆ ಬಡ್ತಿಗೆ ಪರಿಗಣಿಸಿರುವುದರಿಂದ ಸಾವಿರಾರು ಪಿಎಸ್​ಟಿ ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಒಂದೂ ಬಡ್ತಿ ಇಲ್ಲದೇ ನಿವೃತ್ತರಾಗುತ್ತಿದ್ದಾರೆ!

ಪಾಠಕ್ಕೆ ಪಿಎಸ್​ಟಿ, ಸೌಲಭ್ಯಕ್ಕೆ ಜಿಪಿಟಿ?: ರಾಜ್ಯದಲ್ಲಿ 51 ಸಾವಿರ ಜಿಪಿಟಿ ಶಿಕ್ಷಕರ ನೇಮಕ ಮಾಡಬೇಕಿತ್ತು. ಆದರೆ ಈವರೆಗೆ 21 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. ಇನ್ನೂ ಸುಮಾರು 30 ಸಾವಿರ ಜಿಪಿಟಿ ಹುದ್ದೆ ಖಾಲಿ ಇವೆ. ಜಿಪಿಟಿ ಶಿಕ್ಷಕರ ಕೆಲಸವನ್ನೂ ಈಗ ಪಿಎಸ್​ಟಿ ಶಿಕ್ಷಕರೇ ನಿಭಾಯಿಸುತ್ತಿದ್ದಾರೆ. ಆದರೆ, ಈ ಶಿಕ್ಷಕರಿಗೆ ವರ್ಗಾವಣೆ, ಬಡ್ತಿ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ.

ಹಿಂದಿ ಶಿಕ್ಷಕರಿಗೆ ಪಿಎಸ್​ಟಿ ಪಟ್ಟ: ಹಿಂದಿ ಬೋಧನೆ ಆರಂಭವಾಗುವುದು 6ನೇ ತರಗತಿಯಿಂದ. ಆದರೆ, 2016ಕ್ಕೂ ಮುಂಚೆ ನೇಮಕಗೊಂಡ ಹಿಂದಿ ಭಾಷಾ ಶಿಕ್ಷಕರಿಗೆ ಪಿಎಸ್​ಟಿ ಪಟ್ಟ ಕಟ್ಟಿ 1-5ನೇ ತರಗತಿಗೆ ಸೀಮಿತಗೊಳಿಸಲಾಗಿದೆ. ಹಿಂದಿ ಭಾಷಾ ಶಿಕ್ಷಕರು ಯಾರಿಗೆ ಪಾಠ ಮಾಡಬೇಕು ಎಂಬುದು ಯಕ್ಷಪ್ರಶ್ನೆಯಾಗಿದೆ.

ರಾಜ್ಯ ಸರ್ಕಾರಕ್ಕೆ ಆಗ್ರಹ: ಹಿಂಬಡ್ತಿಗೊಳಗಾದ ಶಿಕ್ಷಕರನ್ನು (ಪಿಎಸ್​ಟಿ) ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆ ಯೊಂದಿಗೆ ಪದನಾಮೀಕರಣ ಮಾಡುವುದರಿಂದ ನಿಯಮ ಪಾಲನೆ ಜತೆಗೆ, ಶಿಕ್ಷಕರ ವರ್ಗಾವಣೆ ಸಮಸ್ಯೆ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲಾ ಶಿಕ್ಷಕರ ಬಡ್ತಿ, ಪಿಎಸ್​ಟಿ ಮತ್ತು ಜಿಪಿಟಿ ಹುದ್ದೆಗಳ ಸಮನ್ವಯದ ಸಮಸ್ಯೆ, ಕಾಲಮಿತಿ ಬಡ್ತಿಗಳು ಮತ್ತು ಸೇವಾ ಜೇಷ್ಠತೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಪಿಎಸ್​ಟಿ ಶಿಕ್ಷಕರ ಒಕ್ಕೊರಲ ಆಗ್ರಹವಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕಾರ್ಯಕಾರಿ ಆದೇಶ ಹೊರಡಿಸಬೇಕು. ಆ ಮೂಲಕ ಉಲ್ಲಂಘಿತ ನಿಯಮ ಸರಿಪಡಿಸಬೇಕು. ಜತೆಗೆ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ, ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು.

| ಕೆ.ನಾಗೇಶ್ ಹಾಗೂ ಚಂದ್ರಶೇಖರ ನುಗ್ಗಲಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

. 2016ಕ್ಕಿಂತ ನೇಮಕವಾಗಿರುವ ಶಿಕ್ಷಕರಿಗೆ 2017ರ ಸಿ ಆಂಡ್ ಆರ್ ಅನ್ವಯಿಸಬಾರದು

. 1-7/8ಕ್ಕೆ ನೇಮಕ ಆಗಿರುವವರಿಗೆ 1-5ಕ್ಕೆ ಹಿಂಬಡ್ತಿ ನೀಡಿದ್ದನ್ನು ವಾಪಸ್ ಪಡೆಯಬೇಕು

. 2016 ಮುನ್ನ ನೇಮಕವಾದ ಎನ್​ಸಿಟಿಇ ವಿದ್ಯಾರ್ಹತೆ ಇರುವರನ್ನು ಜಿಪಿಟಿಯಾಗಿ ಪರಿಗಣಿಸಿ

. ಬಿ.ಎಡ್ ಪದವಿ ಪಡೆದ ಎಲ್ಲ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು

. ಪಿಎಸ್​ಟಿ ಶಿಕ್ಷಕರಿಗೆ ಬಡ್ತಿಯಲ್ಲಿ ಮೊದಲ ಆದ್ಯತೆ ನೀಡಬೇಕು

. ಮುಖ್ಯ ಶಿಕ್ಷಕರ ಹುದ್ದೆಗೆ ಹಿಂದಿನಂತೆ ವಿದ್ಯಾರ್ಹತೆ ಪರಿಗಣಿಸಬಾರದು

. ಅಖಂಡ ಸೇವಾ ಹಿರಿತನದ ಮೇಲೆ ಬಡ್ತಿ ನೀಡಬೇಕು

Source : https://www.vijayavani.net/lakhs-of-primary-school-teachers-are-ready-to-fight

 

Leave a Reply

Your email address will not be published. Required fields are marked *