IPL 2023: RCB ಪ್ಲೇಯಿಂಗ್​ 11 ಬದಲಿಸದಿರಲು ಇದುವೇ ಅಸಲಿ ಕಾರಣ..!

IPL 2023: ಐಪಿಎಲ್​ ಸೀಸನ್​ 16 ಅನ್ನು ಭರ್ಜರಿಯಾಗಿ ಆರಂಭಿಸಿದ್ದ ಆರ್​ಸಿಬಿ ಇದೀಗ ಕಳಪೆ ಪ್ರದರ್ಶನದ ಕಾರಣದಿಂದಾಗಿ ಭಾರೀ ಟೀಕೆಗೆ ಒಳಗಾಗಿದೆ. ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಹೊರತುಪಡಿಸಿದರೆ, ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಆಟ ಮೂಡಿ ಬರುತ್ತಿಲ್ಲ.ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಸಂಘಟಿಸಿದರೂ ಉಳಿದ ಬೌಲರ್​ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ಇತ್ತ 4 ಪಂದ್ಯಗಳ ಗೆಲುವಿನಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವುದು ಕೂಡ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಮಾತ್ರ.ಇಲ್ಲಿ ಫಾಫ್ ಡುಪ್ಲೆಸಿಸ್ 422 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 333 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 258 ರನ್ ಕಲೆಹಾಕಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್​ಮನ್​ 100 ರನ್​ ಕೂಡ ಕಲೆಹಾಕಿಲ್ಲ ಎಂಬುದೇ ಅಚ್ಚರಿ. ಹಾಗೆಯೇ ಮೊಹಮ್ಮದ್ ಸಿರಾಜ್ 8 ಪಂದ್ಯಗಳಿಂದ 14 ವಿಕೆಟ್ ಕಬಳಿಸಿ ಮಿಂಚಿದ್ದಾರೆ.ಆರ್​ಸಿಬಿ ತಂಡದ ತ್ರಿಮೂರ್ತಿಗಳನ್ನು ಹೊರತುಪಡಿಸಿದರೆ, ಅನುಭವಿ ಬ್ಯಾಟರ್​ ದಿನೇಶ್ ಕಾರ್ತಿಕ್ ಇದುವರೆಗೆ 83 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಮಹಿಪಾಲ್ ಲೊಮ್ರೋರ್ 75 ರನ್, ಶಹಬಾಝ್ ಅಹ್ಮದ್ ಕೇವಲ 42 ರನ್ ಗಳಿಸಿದ್ದಾರೆ. ಇನ್ನು  ಸುಯಶ್ ಪ್ರಭುದೇಸಾಯಿ ಇದುವರೆಗೆ ಕಲೆಹಾಕಿರುವುದು ಕೇವಲ 29 ರನ್ ಮಾತ್ರ. ಇದಲ್ಲದೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದಿರುವ ಅನೂಜ್ ರಾವತ್ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 16 ರನ್ ಅಷ್ಟೇ. ಇನ್ನು ಕರ್ಣ್ ಶರ್ಮಾ, ಆಕಾಶ್ ದೀಪ್​ಗೆ ಕೆಲ ಪಂದ್ಯಗಳಲ್ಲಿ ಅವಕಾಶ ನೀಡಿದರೂ ಸಂಪೂರ್ಣ ವಿಫಲರಾಗಿದ್ದರು.ಇದಾಗ್ಯೂ ಕಳೆದ 8 ಪಂದ್ಯಗಳಲ್ಲೂ ಇದೇ ಆಟಗಾರರು ಸತತ ಅವಕಾಶ ಪಡೆದಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿಲ್ಲವೇಕೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಆರ್​ಸಿಬಿ ಫ್ರಾಂಚೈಸಿ ಖರೀದಿಸಿರುವ ಆಟಗಾರರು.ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ 18 ಆಟಗಾರರನ್ನು ಉಳಿಸಿಕೊಂಡಿತ್ತು. ಇದಾದ ಬಳಿಕ ಹರಾಜಿನಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಿ ತಂಡದ ಬಲವನ್ನು 25 ಕ್ಕೇರಿಸಿತ್ತು. ಆದರೆ ಹೀಗೆ ಉಳಿಸಿಕೊಂಡ ಹಾಗೂ ಖರೀದಿಸಿದ ಭಾರತೀಯ ಆಟಗಾರರು ಅಂತಹ ಅದ್ಭುತ ಆಟಗಾರರಲ್ಲ ಎಂಬುದೇ ಸತ್ಯ. ಹೀಗಾಗಿಯೇ ಅವರೆಲ್ಲರೂ ಬೆಂಚ್ ಕಾಯಲು ಸೀಮಿತವಾಗಿದ್ದಾರೆ. ಇಲ್ಲಿ ಇದುವರೆಗೆ ಕಣಕ್ಕಿಳಿಯದ ಆಟಗಾರರ ಅಂಕಿ ಅಂಶಗಳನ್ನು ನೋಡುವುದಾದರೆ...ಆರ್​ಸಿಬಿ ಈ ಬಾರಿ ಸೋನು ಯಾದವ್ ಹೆಸರಿನ ಯುವ ಆಲ್​ರೌಂಡರ್ ಅನ್ನು ಖರೀದಿಸಿತ್ತು. ಆದರೆ ದೇಶೀಯ ಅಂಗಳದಲ್ಲಿ ಸೋನು ಯಾದವ್ ಅವರ ಪ್ರದರ್ಶನದ ಅಂಕಿ ಅಂಶವನ್ನು ಗಮನಿಸಿದರೆ ಅವರು ಬೆಂಚ್ ಕಾಯಲು ಸೂಕ್ತ ಎಂಬುದು ಸ್ಪಷ್ಟವಾಗುತ್ತೆ. ಏಕೆಂದರೆ 5 ಟಿ20 ಪಂದ್ಯವಾಡಿರುವ ಸೋನು ಕಲೆಹಾಕಿರುವುದು ಕೇವಲ 16 ರನ್​ ಮಾತ್ರ. ಇನ್ನು ಬೌಲಿಂಗ್​ನಲ್ಲಿ 9 ವಿಕೆಟ್ ಪಡೆದಿದ್ದಾರಷ್ಟೇ.ಇನ್ನು ರಜನ್ ಕುಮಾರ್ ಅವರು ಕೂಡ ಭರ್ಜರಿ ಪ್ರದರ್ಶನದಿಂದ ಗಮನ ಸೆಳೆದ ಆಟಗಾರನಲ್ಲ. ಏಕೆಂದರೆ ದೇಶೀಯ ಅಂಗಳದಲ್ಲಿ 7 ಟಿ20 ಪಂದ್ಯಗಳನ್ನಾಡಿರುವ ರಜನ್ ಒಟ್ಟು 10 ವಿಕೆಟ್ ಮಾತ್ರ ಪಡೆದಿದ್ದಾರೆ. ಇದಾಗ್ಯೂ ಆರ್​ಸಿಬಿಗೆ ಆಯ್ಕೆಯಾಗಿರುವುದು ಅಚ್ಚರಿಯೇ ಸರಿ.ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಆರ್​ಸಿಬಿ ಈ ಬಾರಿ ದೇಶೀಯ ಟೂರ್ನಿ ಆಡದ ಆಟಗಾರನನ್ನೂ ಕೂಡ ಖರೀದಿಸಿದೆ. ಜಮ್ಮು ಕಾಶ್ಮೀರದ ಯುವ ವೇಗಿ ಅವಿನಾಶ್ ಸಿಂಗ್ ಅವರ ವೇಗವನ್ನು ನೋಡಿ ಆರ್​ಸಿಬಿ ಮಣೆಹಾಕಿತ್ತು. ಇದರ ಹೊರತಾಗಿ ಅವಿನಾಶ್ ಯಾವುದೇ ದೇಶೀಯ ಟೂರ್ನಿಗಳನ್ನು ಆಡಿಲ್ಲ ಎಂದು ವರದಿಯಾಗಿದೆ. ಇನ್ನು ಈ ಬಾರಿ ಆರ್​ಸಿಬಿ 24 ವರ್ಷದ ಲೆಗ್ ಸ್ಪಿನ್ನರ್ ಹಿಮಾಂಶು ಶರ್ಮಾರನ್ನು ಕೂಡ ಖರೀದಿಸಿದೆ. ಆದರೆ ಹಿಮಾಂಶು ದೇಶೀಯ ಅಂಗಳದಲ್ಲಿ ಎಲ್ಲಿ ಯಾವಾಗ ಆಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಇನ್ನುಳಿದಿರುವುದು ಸಿದ್ದಾರ್ಥ್ ಕೌಲ್. ಈಗಾಗಲೇ ಐಪಿಎಲ್​ನಲ್ಲಿ 55 ಪಂದ್ಯಗಳನ್ನಾಡಿರುವ ಕೌಲ್ ಪ್ರತಿ ಓವರ್​ಗೆ 8.63 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಇನ್ನು ಪಡೆದಿರುವುದು ಕೇವಲ 58 ವಿಕೆಟ್ ಮಾತ್ರ. ಅತ್ತ ಯಾವುದೇ ಫ್ರಾಂಚೈಸಿಗೂ ಬೇಡವಾಗಿದ್ದ ಸಿದ್ಧಾರ್ಥ್ ಅವರನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ ಖರೀದಿಸಿತ್ತು. 2022 ರಲ್ಲಿ ಕೊನೆಯ ಬಾರಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಕೌಲ್ 4 ಓವರ್​ಗಳಲ್ಲಿ 43 ರನ್ ನೀಡಿದ್ದರು. ಇದಾದ ಬಳಿಕ ಅವರಿಗೆ ಅವಕಾಶ ನೀಡಿಲ್ಲ. ಅಂದರೆ ಕೌಲ್​ ಅವರ ಬೌಲಿಂಗ್ ಸಾಮರ್ಥ್ಯವನ್ನು ಇಲ್ಲೇ ಊಹಿಸಿಕೊಳ್ಳಬಹುದು.ಇನ್ನು ತಂಡದಲ್ಲಿರುವ 24 ವರ್ಷದ ಕರ್ನಾಟಕದ ಆಲ್​ರೌಂಡರ್ ಮನೋಜ್ ಭಾಂಡಗೆ ದೇಶೀಯ ಅಂಗಳದಲ್ಲಿ ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 7 ಇನಿಂಗ್ಸ್​ನಲ್ಲಿ 116 ರನ್​ ಕಲೆಹಾಕಿದ್ದಾರೆ. ಹಾಗೆಯೇ 8 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ. ಪ್ರಸ್ತುತ RCB ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿರುವ ಇತರೆ ಭಾರತೀಯ ಆಟಗಾರರ ಪ್ರದರ್ಶನ ಗಮನಿಸಿದರೆ, ಮನೋಜ್​ ಭಾಂಡಗೆ ಕೂಡ ಆಯ್ಕೆಗೆ ಅರ್ಹರು ಎನ್ನಬಹುದು.ಅಂದರೆ ಆರ್​ಸಿಬಿ ಫ್ರಾಂಚೈಸಿಯು ಹರಾಜಿನ ವೇಳೆ ಮಾಡಿದ ದೊಡ್ಡ ತಪ್ಪಿನಿಂದಾಗಿ ಇದೀಗ ಬದಲಿ ಆಟಗಾರರನ್ನು ಕಣಕ್ಕಿಳಿಸಲು ಉತ್ತಮ ಆಟಗಾರರಿಲ್ಲದೆ ಪರಿತಪಿಸುತ್ತಿದೆ. ಇದೇ ಕಾರಣದಿಂದಾಗಿ ಸತತವಾಗಿ ವಿಫಲರಾಗುತ್ತಿದ್ದರೂ ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್​ನಂತಹ ಆಟಗಾರರು ನಿರಂತರ ಅವಕಾಶ ಪಡೆಯುತ್ತಿದ್ದಾರೆ. ಇತ್ತ ತಂಡದಲ್ಲಿ ಅತ್ಯುತ್ತಮ ಅನುಭವಿ ಭಾರತೀಯ ಆಟಗಾರರು ಇಲ್ಲದಿರುವ ಕಾರಣ ಆರ್​ಸಿಬಿ ಫ್ರಾಂಚೈಸಿ ಕೂಡ ಔಟ್ ಆಫ್ ಫಾರ್ಮ್​ನಲ್ಲಿರುವ ಆಟಗಾರರನ್ನೇ ಮತ್ತೆ ಮತ್ತೆ ಕಣಕ್ಕಿಳಿಸುತ್ತಿದೆ. ಪರಿಣಾಮ ಗೆಲ್ಲಬಹುದಾಗಿದ್ದ ಮ್ಯಾಚ್​ಗಳನ್ನು ಕೂಡ ಸೋತು ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

source https://tv9kannada.com/photo-gallery/cricket-photos/ipl-2023-why-does-rcb-not-changing-players-in-playing-11-kannada-news-zp-au50-565019.html

Leave a Reply

Your email address will not be published. Required fields are marked *