“ನಮ್ಮ ಇಂದಿನ ನೀರಿನ ಮಿತಬಳಕೆ ನಾಳೆಯ ಭವಿಷ್ಯದ ಬದುಕಿಗೆ ಭರವಸೆಯಾಗುತ್ತದೆ” ಎಂದು ವೀನಸ್ ಅಕಾಡೆಮಿ ಶೈಕ್ಷಣಿಕ ನಿರ್ದೇಶಕರಾದ ಡಾ. ಹೆಚ್.ಎನ್.ಪ್ರದೀಪ್ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದವಿಶ್ವ ಜಲ ದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ನೀರಿನ ಮಹತ್ವ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವೇ ವಿಶ್ವ ಜಲ ದಿನ. ಇಂದು ಕುಡಿಯುವ ನೀರಿಗೂ ಹಾಹಾಕಾರ ಹೆಚ್ಚಾಗುತ್ತಿದೆ. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ಇಲ್ಲವಾದಲ್ಲಿ ಶಾಶ್ವತವಾಗಿ ನಮ್ಮ ಅಳಿವು ಶತಸಿದ್ಧ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ವೈಜ್ಞಾನಿಕ ಚಿಂತಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪನವರು ಮಾತನಾಡಿ, “ವಿಶೇಷವಾಗಿ ಶಿಕ್ಷಕರಿಗೆ ಈ ರೀತಿಯ ಜ್ಞಾನ ಒದಗಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಿಕ್ಷಕರು ಎಲ್ಲಾ ರೀತಿಯ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲರು. ಆದರೆ ಇಂದು ಶಿಕ್ಷಣ ಕ್ಷೇತ್ರವೂ ಸಹ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಭೂಮಿಯ ಮೇಲೆ ಕುಡಿಯುವ ನೀರಿನ ಲಭ್ಯತೆ ಕೇವಲ 0.003 ರಷ್ಟು ಮಾತ್ರ. ಜಾಗತಿಕ ತಾಪಮಾನದ ಏರಿಕೆಯಿಂದ ನೀರ್ಗಲ್ಲುಗಳು ಕರಗಿಹೋಗುತ್ತಿವೆ. ಇಂತಹ ಸ್ಥಿತಿಯಲ್ಲಿ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿ ಮಾಡುವುದು ಸವಾಲಾಗಿ ಪರಿಣಮಿಸುತ್ತಿದೆ. ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆ.ಅತಿ ಬೋರ್ವೆಲ್ ಗಳ ಕೊರೆಯುವಿಕೆಯಿಂದಲೂ, ಜಲಸಂಪನ್ಮೂಲದ ಅಭಾವ ಎದ್ದು ಕಾಣುತ್ತಿದೆ. ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆಯಿಂದ ಉಂಟಾಗಿರುವ ಜೀವಜಲವನ್ನು ಸಂರಕ್ಷಿಸಿ ಉಳಿಸಬೇಕಿದೆ. ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲ ಸಮರ್ಥ ಬಳಕೆ ಆಗಬೇಕಿದೆ. ನೀರಿನ ಅಭಾವವನ್ನು ತಡೆಗಟ್ಟಲು ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಅಗತ್ಯ. ಭವಿಷ್ಯದ ದೃಷ್ಟಿಯಿಂದ ನೀರನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗಿದೆ” ಎಂದು ತಿಳಿಸಿದರು. ವೇದಿಕೆಯಲ್ಲಿ ಚಳ್ಳಕೆರೆ ಯರಿಸ್ವಾಮಿ, ಈ.ರುದ್ರಮುನಿ, ಉಪನ್ಯಾಸಕರಾದ ಡಾ.ಜಿ. ಪಿ.ರಾಜು, ಆರ್.ಎಸ್.ರಾಜು, ನಾಗಲಿಂಗರೆಡ್ಡಿ ಉಪಸ್ಥಿತರಿದ್ದರು.
ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ. ಪಿ.ನಾಗಭೂಷಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಸ್ವಾಗತಿಸಿ, ಕು.ಭಾರ್ಗವಿ ನಿರೂಪಿಸಿ, ಕು.ಸ್ನೇಹ ವಂದಿಸಿದರು.