ಹಿರೇಗುಂಟನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗರ್ಭಿಣಿ ಸ್ತ್ರೀಯರಿಗೆ ತರಬೇತಿ ಕಾರ್ಯಕ್ರಮ.
ಚಿತ್ರದುರ್ಗ/ಹಿರೇಗುಂಟನೂರು: ನ.25
ಗರ್ಭಿಣಿ ಸ್ತ್ರೀಯರು ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆ ಪಡೆದು ಯೋಗ ಧ್ಯಾನ ಮಾಡುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಹಕಾರಿ ಇದು ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ ಎಂದು ಹಿರಿಯ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸೋಮವಾರ ಗಂಡಾತರ ಸ್ಥಿತಿಯ ಗರ್ಭಿಣಿ ಮಹಿಳೆಯರಿಗಾಗಿ ಆಯೋಜಿಸಿದ್ದ ಸುಲಭ ಪ್ರಸವಕ್ಕಾಗಿ ಪಾಲಿಸಬೇಕಾದ ನಿಯಮ ಹಾಗೂ ಗರ್ಭಿಣಿ ಸ್ತ್ರೀಯರು ಉತ್ತಮ ಆರೋಗ್ಯಕ್ಕಾಗಿ ಮಾಡಬೇಕಾದ ಯೋಗ ಪ್ರಾಣಾಯಾಮ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಅವರು ಮಾತನಾಡುತ್ತಾ. ಮುಖ್ಯವಾಗಿ ಗರ್ಭಿಣಿಯರು ಉಸಿರಾಟ ತೊಂದರೆ ನಿವಾರಣೆಗಾಗಿ ಪ್ರಾಣಾಯಾಮ ಅಭ್ಯಾಸ ಮಾಡುವುದು ಮರೆಯಬಾರದು ಅನುಲೋಮ-ವಿಲೋಮ ಪ್ರಾಣಾಯಾಮವು ಗರ್ಭಿಣಿಯರ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಅಮ್ಲಜನಕದ ಪೂರೈಕೆ ಹೆಚ್ಚಿಸುತ್ತದೆ. ಹಾಗೂ ಭ್ರಾಮರಿ ಪ್ರಾಣಾಯಾಮ ಇದು ಗರ್ಭಿಣಿ ಮಹಿಳೆಯರ ನಿದ್ರಾಹೀನತೆಯನ್ನು ಹೋಗಲಾಡಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಕಾರಿ ನೀಡುತ್ತದೆ ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಶಾಂತಮ್ಮ ಮಾತನಾಡಿ ಗರ್ಭಿಣಿಯರು ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ಪೌಷ್ಟಿಕಾಂಶ ಇರುವ ತರಕಾರಿ, ಸೊಪ್ಪುಗಳು, ಹಣ್ಣುಗಳನ್ನು ಸೇವಿಸಿ ಮಲಗುವಾಗ ಎಡ ಮಗ್ಗುಲಲ್ಲಿ ಮಲಗಿ, ತಲೆಗೆ ಮತ್ತು ಕಾಲುಗಳ ನಡುವೆ ದಿಂಬನ್ನು ಇಟ್ಟುಕೊಂಡು ವಿಶ್ರಾಂತಿ ಪಡೆಯಿರಿ. ದೇಹಕ್ಕೆ ಸಂಪೂರ್ಣ ವಿಶ್ರಾಂತಿ ನೀಡಿ ಆಗಾಗ್ಗೆ ವೈದ್ಯರ ಸಲಹೆಯನ್ನು ಪಡೆಯಿರಿ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪುಟ್ಟುಸ್ವಾಮಿ, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಗಂಗಮ್ಮ, ಜ್ಞಾನೇಶ್ವರಿ, ಫಾರ್ಮಸಿ ಅಧಿಕಾರಿ ಪುಷ್ಪವತಿಹಾದಿಮನಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.