ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಯುವ ರೆಡ್ ಕ್ರಾಸ್ ಬೆಂಗಳೂರು ವಿಭಾಗ ಮಟ್ಟದ ಶಿಬಿರದಲ್ಲಿ ಪ್ರಮುಖ ಸೇವೆಯನ್ನು ಸಲ್ಲಿಸಿದ ಶ್ರೀ ಗಣನಾಥ್ ಶೆಟ್ಟಿ ಅವರಿಗೆ ಗೌರವ ಸನ್ಮಾನ ನಡೆಯಿತು.
ಶಿಬಿರದಲ್ಲಿ ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಅವರು ಗೌರವಸನ್ಮಾನ ಮಾಡಿ ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆ ಅಂತರಾಷ್ಟ್ರೀಯ ಮಾನವೀಯ ಸಂಘಟನೆಯಾಗಿದ್ದು, ನೈಸರ್ಗಿಕ ವಿಕೋಪಗಳು, ಯುದ್ಧ-ವಿಷಮ ಪರಿಸ್ಥಿತಿಗಳು, ಆರೋಗ್ಯ ಸೇವೆಗಳು, ರಕ್ತದಾನ ಜಾಗೃತಿ ಮತ್ತು ಮಾನವೀಯ ಮೌಲ್ಯಗಳ ಅಭಿವೃದ್ಧಿಗೆ ದೊಡ್ಡ ವೇದಿಕೆಯಾಗಿದೆ ಎಂದು ಅವರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೆಡ್ ಕ್ರಾಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಗಣನಾಥ್ ಶೆಟ್ಟಿ ಅವರ ಸೇವೆಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗೌರವ
ಶ್ರೀ ಗಣನಾಥ್ ಶೆಟ್ಟಿ ರವರು ರಾಜ್ಯ ಎನ್ಎಸ್ಎಸ್ ಕೋಶ, ಬೆಂಗಳೂರುಯಲ್ಲಿ ರಾಜ್ಯ ಸಂಯೋಜಕರಾಗಿ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ರಾಜ್ಯ, ಜಿಲ್ಲಾ, ವಿಶ್ವವಿದ್ಯಾಲಯ ಮತ್ತು ಶಾಲಾ-ಕಾಲೇಜು ಮಟ್ಟದಲ್ಲಿ ಅತ್ಯುತ್ತಮ ಎನ್ಎಸ್ಎಸ್ ಶಿಬಿರ ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಅವರ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಹಾಗೂ ಜಿಲ್ಲಾ ಪ್ರಶಸ್ತಿಗಳಿಂದ ಸರ್ಕಾರ ಗೌರವಿಸಿದೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು —
“ಎನ್ಎಸ್ಎಸ್ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ತಯಾರಿಸಿದ್ದೇನೆ. ಈಗ ಉಡುಪಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾಗಿ ರೆಡ್ ಕ್ರಾಸ್ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಈ ಸಂದರ್ಭ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಬತರೂರು ರಾಜೀವ್ ಶೆಟ್ಟಿ (ರಾಜ್ಯ ಸಭಾಪತಿಗಳು), ಗಾಯತ್ರಿ ಶಿವರಾಂ (ಚಿತ್ರದುರ್ಗ ಜಿಲ್ಲಾ ಸಭಾಪತಿಗಳು), ಡಾ. ಪ್ರಿಯಾ ಪುರಾಣಿಕ್, ಮೀರಾ ಶಿವಲಿಂಗಯ್ಯ, ಪ್ರೊ. ವೆಂಕಟೇಶ್, ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ತಿಮ್ಮಣ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Views: 50