
ಕಳೆದ ಶುಕ್ರವಾರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ (Rishabh Pant ) ಅವರ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಪಂತ್ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ವಾಸ್ತವವಾಗಿ ಕಳೆದ ಶುಕ್ರವಾರ ದೆಹಲಿಯಿಂದ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಪಂತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ದೆಹಲಿ ಹಾಗೂ ಡೆಹ್ರಾಡೂನ್ ಹೆದ್ದಾರಿಯಲ್ಲಿ (Delhi-Dehradun highway) ಮುಂಜಾನೆ ವೇಳೆ ನಡೆದಿದ್ದ ಈ ಅಪಘಾತದಲ್ಲಿ ವೇಗವಾಗಿ ಬಂದ ಪಂತ್ ಅವರ ಕಾರು ಡಿವೈಡರ್ ಮೇಲೆ ಹತ್ತಿ ನಂತರ ರಸ್ತೆಯಲ್ಲಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಪಂತ್ ಅವರ ಕಾಲು ಮತ್ತು ತಲೆಗೆ ಗಾಯಗಳಾಗಿದ್ದವು. ಸದ್ಯ ಪಂತ್ ಅವರಿಗೆ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ (Max Hospital) ಚಿಕಿತ್ಸೆ ನೀಡಲಾಗುತ್ತಿದೆ.
ಪಂತ್ ಸ್ಥಿತಿ ಸುಧಾರಿಸುತ್ತಿದೆ
ಪಂತ್ ಅವರ ಆರೋಗ್ಯದ ಬಗ್ಗೆ ಇತ್ತೀಚಿಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಪಂತ್ ಅವರ ಸ್ಥಿತಿ ಸುಧಾರಿಸುತ್ತಿದೆ. ಹೀಗಾಗಿ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ಪಂತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ಅವರನ್ನು ಭಾನುವಾರ ಸಂಜೆಯೇ ಖಾಸಗಿ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಆದರೆ ಪಂತ್ಗೆ ಕಾಲಿನಲ್ಲಿ ನೋವು ಇನ್ನು ಹಾಗೆ ಇದೆ ಎಂದು ಮೂಲಗಳು ತಿಳಿಸಿದ್ದು, ಸದ್ಯಕ್ಕೆ ಎಂಆರ್ಐ ಮಾಡುವ ಯಾವುದೇ ಯೋಜನೆಯನ್ನು ಆಸ್ಪತ್ರೆ ವೈದ್ಯರು ಹಾಕಿಕೊಂಡಿಲ್ಲ ಎಂದು ವರದಿಯಾಗಿದೆ.
ಏನು.? ಪಂತ್ ಅಪಘಾತದ ಸುದ್ದಿ ಕೇಳಿದಾಗ ಕಿಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಅಪಘಾತಕ್ಕೀಡಾಗಿ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆ ಸೇರಿದ ಪಂತ್ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಲು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ, ಬಾಲಿವುಡ್ ನಟರಾದ ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಆಸ್ಟ್ರೇಲಿಯಾ ಸರಣಿ, ಐಪಿಎಲ್ನಿಂದ ಔಟ್
ಪಂತ್ ಅವರ ಅತ್ಯಂತ ಗಂಭೀರವಾದ ಗಾಯವೆಂದರೆ ಅವರ ‘ಲಿಗಮೆಂಟ್ ಟಿಯರ್’. ಆದ್ದರಿಂದ ಬಿಸಿಸಿಐ ತನ್ನ ವೈದ್ಯರಿಂದಲೇ ಪಂತ್ಗೆ ಚಿಕಿತ್ಸೆ ನೀಡುವುದಾಗಿ ಮ್ಯಾಕ್ಸ್ ಆಸ್ಪತ್ರೆ ವೈದ್ಯರ ಬಳಿ ಹೇಳಿಕೊಂಡಿದೆ. ಹೀಗಾಗಿ ಪಂತ್ ಮೈದಾನಕ್ಕೆ ಮರಳುವ ಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ಆದರೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮೂಲಗಳ ಪ್ರಕಾರ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ಗಳ ಸರಣಿಯಲ್ಲಿ ಪಂತ್ ಕಣಕ್ಕಿಳಿಯುವುದು ಅಸಾಧ್ಯವಾಗಿದೆ.
ಪಂತ್ಗೆ ಐಪಿಎಲ್ನಲ್ಲಿ ಆಡುವುದು ಕೂಡ ಕಷ್ಟವಾಗುತ್ತಿದೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ನಾಯಕರಾಗಿರುವ ಪಂತ್ ಒಂದು ವೇಳೆ ಈ ಆವೃತ್ತಿಯನ್ನು ಆಡದೇ ಇದ್ದರೆ ಫ್ರಾಂಚೈಸಿಗೆ ಆತಂಕ ಎದುರಾಗಲಿದೆ. ಫ್ರಾಂಚೈಸ್ ಅವರ ಬದಲಿ ಆಟಗಾರನ ಜೊತೆಗೆ ನಾಯಕ ಮತ್ತು ವಿಕೆಟ್ ಕೀಪರ್ ಅನ್ನು ಕೂಡ ಹುಡುಕಬೇಕಾಗಿದೆ. ಪಂತ್ ಈ ಐಪಿಎಲ್ನಿಂದ ಔಟಾದರೆ ಡೇವಿಡ್ ವಾರ್ನರ್ ತಂಡದ ನಾಯಕರಾಗುವ ಸಾಧ್ಯತೆಗಳಿವೆ. ಏಕೆಂದರೆ ವಾರ್ನರ್ಗೆ ಈ ಹಿಂದೆ ಐಪಿಎಲ್ನಲ್ಲಿ ನಾಯಕತ್ವ ವಹಿಸಿದ ಅನುಭವವೂ ಇದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ