ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕಾರ್ಕಳ ಆ. 26: ಬೆಳೆ ಫಸಲು ಕೊಡುವ ಮೊದಲು ಬರುವ ಕಸವನ್ನು ಕಿತ್ತು ಬಿಸಾಕುವಂತೆ ಭಾರತೀಯ ಸಂಸ್ಕೃತಿ ಹಾಗೂ ಪೂಜ್ಯನೀಯ ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರನ್ನು ಕಿತ್ತು ಎಸೆಯುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಕಾರ್ಕಳದಲ್ಲಿ ಭೋವಿ ಸಮುದಾಯದ ಯುವತಿಯ ಮೇಲೆ ಅನ್ಯಕೋಮಿನ ದುರುಳರು ನಡೆಸಿದ ಅತ್ಯಾಚಾರ ಖಂಡಿಸಿ, ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ, ದ.ಕ ಮತ್ತು ಉಡುಪಿ, ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಡೆದ ಖಂಡನಾ ಮೆರವಣಿಗೆಯ ಬಳಿಕ ಮಂಜುನಾಥ್ ಪೈ ಸಭಾಂಗಣದಲ್ಲಿ ನಡೆದ ಬೃಹತ್ ಸಭೆ ಉದ್ದೇಶಿಸಿ ಸ್ವಾಮೀಜಿ ಮಾತನಾಡಿದರು.
ಭಾರತ ಜಗತ್ತಿನ ಸಂಸ್ಕಾರ, ಸಂಸ್ಕೃತಿಯ ರಾಯಭಾರಿ. ಇಂತಹ ಪರಂಪರೆ ಇರುವ ದೇಶದಲ್ಲಿ ಅತ್ಯಾಚಾರದ ಘಟನೆಗಳು ನಡೆಯುತ್ತಿರುವುದು ಮುಜುಗರಕ್ಕೀಡು ಮಾಡುತ್ತವೆ. ಮನೆಯಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಈ ರೀತಿಯ ದುಷ್ಕೃತ್ಯಗಳು ನಡೆಯುತ್ತಿವೆ. ಆಧುನಿಕ ಕಾಲದಲ್ಲಿ ಭಯ ಮಾಯೆಯಾಗಿ ಭಕ್ತಿ ಯಾಂತ್ರಿಕವಾಗಿದೆ. ಹೀಗಾಗಿ ಸಮಾಜ ದಾರಿ ತಪ್ಪುತ್ತಿದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಸರಕಾರ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಾತಿ, ಧರ್ಮ ನೋಡದೆ ಮಾನವೀಯ ನೆಲೆಯಲ್ಲಿ ಹೆಣ್ಣು ಮಗಳ ಮೇಲಾದ ಅತ್ಯಾಚಾರದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
Views: 0