ಇತ್ತೀಚಿಗೆ ಹೊನ್ನಾಳಿ ತಾಲೂಕಿನ ಹುಣದಘಟ್ಟ ಗ್ರಾಮದ ವೃದ್ಧೆ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಗ್ರಾಮದಲ್ಲಿ ವೈದ್ಯರು ಬೀಡು ಬಿಟ್ಟಿದ್ದಾರೆ. ಗ್ರಾಮಸ್ಥರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ.

ದಾವಣಗೆರೆ, ಆಗಸ್ಟ್ 30: ಕಲುಷಿತ ನೀರು (Contaminated water) ಸೇವಿಸಿ ಚನ್ನಗಿರಿ (Channagiri) ತಾಲೂಕಿನ ಜೋಳದಾಳ ಗ್ರಾಮದ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. 14 ಜನರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಮತ್ತು 6 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಐವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ರಾತ್ರಿಯಿಂದಲೇ ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲು ನಾಲ್ಕು ಜನರರಲ್ಲಿ ವಾಂತಿ-ಬೇಧಿ ಕಂಡಿತು. ಬಳಿಕ ಗ್ರಾಮದ 25 ಜನರು ವಾತಿ-ಭೇದಿ ಬಳಲಿದರು.
ಜೋಳದಾಳ ಗ್ರಾಮಕ್ಕೆ ಚನ್ನಗಿರಿ ಇಒ ಬಿ.ಕೆ.ಉತ್ತಮ್, ಕುಡಿಯುವ ನೀರು ವಿಭಾಗದ ಎಇಇ ಲೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೋಳದಾಳ ಗ್ರಾಮದಲ್ಲಿ ವೈದ್ಯರ ತಂಡ ಠಿಕಾಣಿ ಹೂಡಿದೆ. ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಗ್ರಾಮಸ್ಥರಿಗೆ ವೈದ್ಯರು ಸೂಚಿಸಿದ್ದಾರೆ.
ಕಲುಷಿತ ನೀರು ಸೇವಿಸಿ ಸಾವು
ಒಂದು ಹಿಂದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣದಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮದ ಏಳು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಏಳು ಜನರಲ್ಲಿ ಚಂದ್ರಮ್ಮ (60) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಗಸ್ಟ್ 21 ರಂದು ಆಸ್ಪಸ್ಥರಾಗಿ ಮೆಗ್ಗನ್ ಆಸ್ಪತ್ರೆಗೆ ಚಂದ್ರಮ್ಮ ದಾಖಲಾಗಿದ್ದರು. ವಾಂತಿ ಬೇಧಿ, ಜ್ವರದಿಂದ ಬಳಲುತ್ತಿದ್ದ ಚಂದ್ರಮ್ಮ ಅವರು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.
ಇನ್ನುಳಿದ ಆರು ಜನರು ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ. ಕುಡಿಯುವ ನೀರಿನ ಪೈಪ್ ಹೊಡೆದು ಚರಂಡಿ ನೀರು ಮಿಶ್ರಣವಾದ ಹಿನ್ನೆಲೆಯಲ್ಲಿ ನೀರು ಕಲುಷಿತಗೊಂಡಿತ್ತು. ಘಟನೆಯಾದ ನಂತರ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಜನರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು.
ಕಲುಷಿತ ನೀರು ಸೇವನೆ 15 ಕ್ಕೂ ಅಧಿಕ ಜನರಿಗೆ ವಾಂತಿ, ಭೇದಿ
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಉಬ್ಬಲಗಂಡಿ ಗ್ರಾಮದಲ್ಲಿ ನೀರು ಸೇವನೆ ಬಳಿಕ 15ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಕಳೆದ ನಾಲ್ಕು ದಿನಗಳಿಂದ ವಾಂತಿ, ಭೇದಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಘಟನಾ ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಾಂತಿ, ಭೇದಿ ಕಾಣಿಸಿಕೊಂಡ ಗ್ರಾಮಸ್ಥರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಯಾವುದೇ ರೀತಿ ಪ್ರಾಣಾಪಾಯ ಸಂಭವಿಸಿಲ್ಲ.