ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕೂನಬೇವು ಗ್ರಾಮದಲ್ಲಿ ಬಯೋಡೈಜೆಸ್ಟರ್ ಕಾರ್ಯಾಗಾರ ರಾಸಾಯನಿಕ ಕೃಷಿಯಿಂದ ನೈಸರ್ಗಿಕ ಕೃಷಿಯತ್ತ ಮುಖ ಶ್ಲಾಘನೆ : ಜಂಟಿ ಕೃಷಿ ನಿರ್ದೇಶಕ ಮಂಜುನಾಥ
ಚಿತ್ರದುರ್ಗ ಮಾ. 17:
ತಾಲ್ಲೂಕಿನ ಕೂನಬೇವು ಗ್ರಾಮದಲ್ಲಿ ಬಯೋಡೈಜೆಸ್ಟರ್ ಕುರಿತು ರೈತರ ತರಬೇತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆಯ ಟೆಕ್ನೋಸರ್ವ್ ಸಂಸ್ಥೆಯಡಿಯಲ್ಲಿ ಕೈಗೊಂಡ ಸೃಷ್ಟಿ ಪುನರುತ್ಪಾದಕ ಕೃಷಿ ಯೋಜನೆಯಡಿಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಲಭವಾಗಿ ಜೀವಾಮೃತವನ್ನು ಉತ್ಪಾದಿಸುವ ಘಟಕದ ಬಗ್ಗೆ ಮಾಹಿತಿ ನೀಡಲು ಈ ತರಬೇತಿಯನ್ನು ತುರುವನೂರಿನ ಶ್ರೀ ರೈತ ಉತ್ಪಾದಕ ಕಂಪನಿ, ಕೃಷಿ ಇಲಾಖೆ ಚಿತ್ರದುರ್ಗ ಹಾಗೂ ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕರುಗಳಾದ ಮಂಜುನಾಥ ಮಾತನಾಡಿ ರಾಸಾಯನಿಕ ಕೃಷಿಯಿಂದ ನೈಸರ್ಗಿಕ ಕೃಷಿಯತ್ತ ಮುಖಮಾಡಿದ ಕೂನಬೇವು ಗ್ರಾಮದ ರೈತರ ಪ್ರಯತ್ನವನ್ನು ಶ್ಲಾಘಿಸಿ ಗ್ರಾಮದಲ್ಲಿ 30 ಕ್ಕೂ ಹೆಚ್ಚು ರೈತರು ಬಯೋಡೈಜೆಸ್ಟರ್ ಹಾಕಿಕೊಂಡಿರುವುದು ಪುನರುತ್ಪಾದಕ ಕೃಷಿಯೆಡೆಗಿನ ಒಲವನ್ನು ತೋರಿಸುತ್ತಿದ್ದು ಟೆಕ್ನೋಸರ್ವ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ರೈತರು ಹಾಗೂ ಗ್ರಾಮಗಳು ಈ ನಿಟ್ಟಿನಲ್ಲಿ ಮುಂದುವರೆಯಬೇಕು ಎಂದು ಕರೆ ನೀಡಿದರು.

ಟೆಕ್ನೋಸರ್ವ್ ಸಂಸ್ಥೆ ಕಳೆದ 5 ವರ್ಷಗಳಲ್ಲಿ ರೈತರ ಜೊತೆ ಕೆಲಸ ಮಾಡುತ್ತಿದ್ದು ಕಳೆದ 2024 ರಿಂದ ರೈತರಿಗೆ ಪುನರುತ್ಪಾದಕ ಕೃಷಿಯ ಬಗ್ಗೆ ತಾಲೂಕಿನ 2000 ರೈತರಿಗೆ ತರಬೇತಿ ನೀಡುತ್ತಿದೆ. ಕೂನಬೇವು ಗ್ರಾಮದಲ್ಲಿ 300 ಕ್ಕೂ ಹೆಚ್ಚು ರೈತರು ಜೀವಾಮೃತ, ಘನ ಜೀವಾಮೃತ, ಎಗ್ ಎಮಿನೋ ಆಸಿಡ್, ಅಂತರಬೆಳೆ, ಸುತ್ತು ಬೆಳೆ, ಬಹುವಾರ್ಷಿಕ ಬೆಳೆ ಹೀಗೆ ಹಲವು ಪದ್ಧತಿಗಳನ್ನು ಅಳವಡಿಸಿಕೊಂಡಿದ್ದು `ಸಾವಯವ ಗ್ರಾಮವಾಗಿ ಮಾರ್ಪಾಡು ಆಗುತ್ತಿದೆ ಎಂದು ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಯೋಡೈಜೆಸ್ಟರ್ ಅಳವಡಿಸಿಕೊಂಡು ಯಶಸ್ಸು ಗಳಿಸಿದ ಯುವ ರೈತರಾದ ಚಂದ್ರು ತಮ್ಮ ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ಗ್ರಾಮದ ಎರಡು ರೈತರಿಗೆ ಸಾಂಕೇತಿಕವಾಗಿ ನಾಟಿ ಹಸುಗಳನ್ನು ನೀಡಲಾಯಿತು. ಸೆಲ್ಕೋ ಫೌಂಡೇಶನ್ ಸಂಸ್ಥೆಯ ಶರಣ್, ಮಂಜುನಾಥ ಸ್ವಮಿ ರೈತ ಉತ್ಪಾದಕ ಸಂಸ್ಥೆಯ ಸಿಇಓ ಚನ್ನವೀರಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ನಾಗರಾಜ ಅವರು ಸಹ ತರಬೇತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಟೆಕ್ನೋಸರ್ವ್ ಸಂಸ್ಥೆಯ ಅವಿನಾಶ್, ಮುರುಗೇಶ, ಬಿಂದು, ಬಸವರಾಜ, ಹೇಮಣ್ಣ, ಅಶೋಕ, ಬೋರಮ್ಮ, ತಿಪ್ಪಮ್ಮ, ಏಕಾಂತಪ್ಪ, ತುರುವುನೂರು ರೈತ ಉತ್ಪಾದಕ ಕಂಪನಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಯೋಡೈಜೆಸ್ಟರ್ ಬಗ್ಗೆ ಆಸಕ್ತಿ ಹೊಂದಿದ ಸುಮಾರು 50 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
