
ನಾಗ್ಪುರದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು ಇನಿಂಗ್ಸ್ ಮತ್ತು 132 ರನ್ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ ಈ ಗೆಲುವಿನ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ತಂಡಕ್ಕೆ ಐಸಿಸಿ ದಂಡದ ಶಾಕ್ ನೀಡಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಮೊದಲ ಟೆಸ್ಟ್ ಗೆಲುವಿನ ರೂವಾರಿ ರವೀಂದ್ರ ಜಡೇಜಾಗೆ ಐಸಿಸಿ ಶೇ.25ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿದೆ. ಐಸಿಸಿಯ ಲೆವೆಲ್-1 ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ಜಡೇಜಾಗೆ ದಂಡ ವಿಧಿಸಲಾಗಿದೆ ಎಂದು ಐಸಿಸಿ ಮಾಹಿತಿ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಐಸಿಸಿ, ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಜಡೇಜಾ ತನ್ನ ನೀತಿ ಸಂಹಿತೆಯ 2.20 ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಪಂದ್ಯ ಶುಲ್ಕ ಶೇ.25ರಷ್ಟು ಹಣವನ್ನು ದಂಡವಾಗಿ ವಿಧಿಸಲಾಗಿದೆ ಎಂಬ ಮಾಹಿತಿ ನೀಡಿದೆ.
ದಂಡ ವಿಧಿಸಿದ್ದು ಯಾಕೆ?
ವಾಸ್ತವವಾಗಿ ಜಡೇಜಾಗೆ ತಂಡ ವಿಧಿಸಲು ಅದೊಂದು ಘಟನೆ ಕಾರಣವಾಗಿದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ನ 46 ನೇ ಓವರ್ನಲ್ಲಿ ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಬಳಿಯಿಂದ ನೋವು ನಿವಾರಕ ಕ್ರೀಮ್ ಪಡೆದುಕೊಂಡು ತಮ್ಮ ಬೆರಳಿಗೆ ಹಚ್ಚಿಕೊಂಡಿದ್ದರು. ಜಡೇಜಾ ತಮ್ಮ ಕೈಗೆ ಮುಲಾಮನ್ನು ಹಚ್ಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೇ ವಿಡಿಯೋವನ್ನು ಇಟ್ಟುಕೊಂಡು ಆಸ್ಟ್ರೇಲಿಯಾ ಮೀಡಿಯಾಗಳು ಕೂಡ ಮೋಸದಾಟದ ಬಣ್ಣ ಹಚ್ಚಲು ಆರಂಭಿಸಿದ್ದವು. ಆದರೆ ಜಡೇಜಾ ಅವರ ಬೆರಳಿಗೆ ಗಾಯವಾಗಿದ್ದು, ಅವರ ಎಡಗೈಗೆ ನೋವು ನಿವಾರಕ ಕ್ರೀಮ್ ಹಚ್ಚಿಕೊಂಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಆದರೆ ಆನ್ ಫೀಲ್ಡ್ ಅಂಪೈರ್ಗಳ ಅನುಮತಿ ಇಲ್ಲದೆ ಜಡೇಜಾ ಕ್ರೀಮ್ ಹಚ್ಚಿಕೊಂಡಿದಕ್ಕಾಗಿ ಈ ಕ್ರಮ ಕೈಗೊಳ್ಳಲಾಗೊದೆ.