ಚಿತ್ರದುರ್ಗ ಕೋಟೆಯಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ 75ನೇ ಜನ್ಮದಿನ ಆಚರಣೆ – ಕಲಾವಿದರು, ಲೇಖಕರಿಗೆ ಸನ್ಮಾನ.

ಚಿತ್ರದುರ್ಗ :ಸೆ. 20.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಹಾಗೂ ಕೋಟೆ ವಾಯು ವಿಹಾರಿಗಳ ಸಂಘ ಚಿತ್ರದುರ್ಗ ಇವರು ಸಂಯುಕ್ತವಾಗಿ ಕನ್ನಡ ಚಿತ್ರರಂಗದ ಮೇರುನಟ ಡಾ. ವಿಷ್ಣುವರ್ಧನ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಅಂಗವಾಗಿ ಅವರ ಕರ್ಮ ಭೂಮಿಯದ ಚಿತ್ರದುರ್ಗ ಕೋಟೆ ಆವರಣದಲ್ಲಿ ಗುರುವಾರ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್ ಅವರ ಜೀವನ ಕುರಿತು ಹೊರತಂದಿರುವ ‘ ಆ ಕರ್ಣನಂತೆ ‘ ಪುಸ್ತಕದ ಲೇಖಕ ಸಿದ್ದಾಪುರ ಶಿವಕುಮಾರ್ ಹಾಗೂ ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ಅವರನ್ನು ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಲೇಖಕ ಸಿದ್ದಾಪುರ ಶಿವಕುಮಾರ್ “ಡಾ. ವಿಷ್ಣುವರ್ಧನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಮಾತ್ರವಲ್ಲದೆ, ವೈಯಕ್ತಿಕ ಜೀವನದಲ್ಲಿಯೂ ತಮ್ಮ ಮಾನವೀಯ ಮೌಲ್ಯಗಳಿಗಾಗಿ ಹೆಸರುವಾಸಿಯಾಗಿದ್ದರು. ಅಭಿಮಾನಿಗಳಿಂದ “ಸಾಹಸಸಿಂಹ” ಎಂದು ಕರೆಸಿಕೊಳ್ಳುತ್ತಿದ್ದರೂ, ಅವರ ನಿಜವಾದ ವ್ಯಕ್ತಿತ್ವ ಅತ್ಯಂತ ನಮ್ರತೆ ಮತ್ತು ನಿರ್ಗತರ ಕುರಿತು ದಯಾ ಭಾವನೆ, ಮಹಿಳೆಯರಿಗೆ, ಹಿರಿಯ ಮತ್ತು ಕಿರಿಯರಿಗೆ ನೀಡುತ್ತಿದ್ದ ಗೌರವ ನನಗೆ ಆ ಕರ್ಣನಂತೆ ಗ್ರಂಥ ರಚನೆಗೆ ಪ್ರೇರಣೆ ನೀಡಿತು ಎಂದು ತಿಳಿಸಿದರು.


ಇದಕ್ಕೂ ಮೊದಲು ಡಾಕ್ಟರ್ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿತ್ರದುರ್ಗ ನಗರಸಭೆ ಸದಸ್ಯ ಆರ್. ಶ್ರೀನಿವಾಸ್ ಮಾತನಾಡಿ ಯಾವುದೇ ನಟರು ತಮ್ಮ ಪಾತ್ರಗಳ ಮೂಲಕ ಸಮಾಜದ ಮೇಲೆ ದೊಡ್ಡ ಪ್ರಭಾವ ಬೀರಬಹುದು. ಸ್ಫೂರ್ತಿದಾಯಕ ಪಾತ್ರಗಳು ಕೇವಲ ಮನರಂಜನೆ ನೀಡುವುದಲ್ಲದೆ, ಪ್ರೇಕ್ಷಕರಿಗೆ ಹೊಸ ಆಲೋಚನೆಗಳನ್ನು ಮತ್ತು ಸಕಾರಾತ್ಮಕ ಮೌಲ್ಯಗಳನ್ನು ಕಲಿಸುತ್ತವೆ. ಅಂತಹ ಪೂರ್ತಿದಾಯಕ ಮತ್ತು ಕೌಟುಂಬಿಕ ಚಲನಚಿತ್ರಗಳ ಮೂಲಕ ಅನೇಕ ಒಡೆದುಹೋದ ಕುಟುಂಬಗಳನ್ನು ಒಟ್ಟುಗೂಡಿಸಿದ ಹಿರಿಮೆ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್ ಸತ್ಯಣ್ಣ”ನಟ ಡಾ. ವಿಷ್ಣುವರ್ಧನ್ ಅವರಿಗೆ ಅವರ ಕರ್ಮಭೂಮಿಯದ ಚಿತ್ರದುರ್ಗದ ಮೇಲೆ ಅಪಾರ ಪ್ರೀತಿ ಇತ್ತು. ಇದು ಕೇವಲ ಮಾತಿನಲ್ಲಿ ಮಾತ್ರವಲ್ಲ, ಅವರ ನಡೆ ಮತ್ತು ನುಡಿಗಳಲ್ಲಿಯೂ ಕಾಣುತ್ತಿತ್ತು.ಈ ನೆಲದ ಮೇಲೆ ಅವರಿಗಿದ್ದ ಪ್ರೀತಿಯನ್ನು ಹಲವಾರು ಸಂದರ್ಶನಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವ್ಯಕ್ತಪಡಿಸಿದ್ದರು ಎಂದು ಹೇಳುತ್ತಾ ಸ್ವತಹ ತಾವೇ ಡಾಕ್ಟರ್ ವಿಷ್ಣುವರ್ಧನ್ ಭೇಟಿಯಾದ ಸಂದರ್ಭಗಳನ್ನು ಹಂಚಿಕೊಂಡರು.
ವೇದಿಕೆ ಕಾರ್ಯಕ್ರಮದ ಬಳಿಕ ಚಿತ್ರದುರ್ಗದ ಕರಡಿ ಸಿದ್ದಾಪುರ ಗ್ರಾಮದ ಗಾಯಕ ನಾಗಭೂಷಣ್ ಅವರು ನಡೆಸಿಕೊಟ್ಟ ಡಾಕ್ಟರ್ ವಿಷ್ಣುವರ್ಧನ್ ಅವರ ಚಲನಚಿತ್ರಗಳ ಗೀತಾ ಗಾಯನ ಪ್ರೇಕ್ಷಕರನ್ನು ರಂಜಿಸಿತು.


ಕಾರ್ಯಕ್ರಮದ ಆಯೋಜಕ ಹಾಗೂ ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ನಿರೂಪಣೆ ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಕೂಬ ನಾಯಕ್, ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಚಾರ್, ನಿವೃತ್ತ ಪಾಚಾರ್ಯ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಅವರ ಅನೇಕ ಅಭಿಮಾನಿಗಳು ಭಾಗವಹಿಸಿದ್ದರು.

Views: 118

Leave a Reply

Your email address will not be published. Required fields are marked *