Rishabh Pant Health Update: ರಿಷಭ್ ಪಂತ್​ಗೆ ಇಂದು ಮೊಣಕಾಲು ಪರೀಕ್ಷೆ, ಪ್ಲಾಸ್ಟಿಕ್ ಸರ್ಜರಿಗೆ ದೆಹಲಿಗೆ ಶಿಫ್ಟ್ ಸಾಧ್ಯತೆ

Rishabh Pant Health Update

ಟೀಮ್ ಇಂಡಿಯಾ (Team India) ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಶುಕ್ರವಾರ ಮುಂಜಾನೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದ ಸಂದರ್ಭ ಭೀಕರ ಕಾರು ಅಪಘಾತ (Accident) ಸಂಭವಿಸಿದ್ದು ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಪಂತ್ ಈಗ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಆದರೂ ಅವರು ಕೆಲವು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ತಲೆ, ಬೆನ್ನು ಮತ್ತು ಪಾದಗಳಿಗೆ ಗಂಭೀರ ಗಾಯಗಳಾಗಿದೆ. ಇಂದು ಗಾಯಗಳ ಪರೀಕ್ಷೆ ನಡೆಯಲಿದೆ.

ಪಂತ್ ಅವರ ಮೆದುಳು ಮತ್ತು ಬೆನ್ನುಮೂಳೆಯ ಎಂಆರ್‌ಐ ರಿಸಲ್ಟ್ ಬಂದಿದ್ದು, ಅದರಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. 25 ವರ್ಷದ ಪಂತ್ ಅವರ ಮುಖದ ಮತ್ತು ದೇಹದ ಗಾಯಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಲಾಗಿದೆ. ಆದರೆ ನೋವು ಮತ್ತು ಊತದಿಂದಾಗಿ ಅವರ ಪಾದ ಮತ್ತು ಮೊಣಕಾಲಿನ MRI ಸ್ಕ್ಯಾನ್ ಅನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.

Rishabh Pant Car Accident: ಅಪಘಾತದಲ್ಲಿ ರಿಷಭ್ ಪಂತ್​ಗೆ ಗಂಭೀರ ಗಾಯ: ಕಾರು ಸಂಪೂರ್ಣ ಭಸ್ಮ: ಫೋಟೋ

ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಮೊಣಕಾಲಿನ ಅಸ್ಥಿರಜ್ಜು ಗಾಯದ ಬಗ್ಗೆ ಶಂಕಿಸಿದ್ದಾರೆ. ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ರಿಷಭ್ ಅವರ ಹಣೆಯ ಮೇಲೆ ಎರಡು ಗಾಯಗಳು, ಬಲ ಮೊಣಕಾಲು ಮುರಿದಿದೆ. ಬಲ ಮಣಿಕಟ್ಟು, ಪಾದ ಮತ್ತು ಬೆನ್ನಿಗೆ ಗಾಯಗಳಾಗಿವೆ ಎಂದಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ​​(DDCA) ತಂಡವು ಪಂತ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮ್ಯಾಕ್ಸ್ ಆಸ್ಪತ್ರೆಗೆ ಹೋಗಿದೆ. ಅಗತ್ಯವಿದ್ದರೆ ಅವರನ್ನು ದೆಹಲಿಗೆ ಪ್ಲಾಸ್ಟಿಕ್ ಸರ್ಜರಿಗಾಗಿ ವಿಮಾನದಲ್ಲಿ ಕರೆದೊಯ್ಯುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.

 

ರಿಷಭ್ ಪಂತ್ ಮೊಣಕಾಲು ಬಲಪಡಿಸಲು ಜನವರಿ 6 ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹಾಜರಾಗಬೇಕಿತ್ತು. ಅಲ್ಲಿ ಕಂಡೀಷನಿಂಗ್ ಮತ್ತು ಅಭ್ಯಾಸ ಮಾಡಲು ಸೂಚನೆ ನೀಡಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅವರು ಫಿಟ್ ಆಗಬೇಕೆಂದು ಬಿಸಿಸಿಐ ಬಯಸಿತ್ತು. ಮೊದಲೇ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದ ಪಂತ್‌, ಅಪಘಾತನ ನಂತರ ಅದು ಹೆಚ್ಚಾಗಿರುವ ಸಾಧ್ಯತೆ ಇದೆ. ಅಪಘಾತದಲ್ಲಿ ಅವರಿಗೆ ಹಣೆಯ ಮೇಲೆ ಗಾಯವಾಗಿದೆ. ಬಲ ಮೊಣಕಾಲಿನ ಅಸ್ಥಿರಜ್ಜು ಕೂಡ ಗಾಯಗೊಂಡಿದ್ದು, ಬಲ ಮಣಿಕಟ್ಟು, ಪಾದ ಮತ್ತು ಬೆರಳಿಗೆ ಗಾಯವಾಗಿದ್ದು ಕ್ರಿಕೆಟ್​ನಿಂದ ಕನಿಷ್ಠ ಒಂದು ವರ್ಷ ದೂರವಿರಬೇಕಾಗಿದೆ.

ರಿಷಭ್ ಪಂತ್​ ಬೇಗ ಗುಣಮುಖರಾಗಲಿ ಎಂದು ಟೀಮ್ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸೇರಿದಂತೆ ವಿಶ್ವ ಕ್ರಿಕೆಟ್​ನ ಹಲವು ಗಣ್ಯರು ನಿರಂತರವಾಗಿ ಸಂದೇಶಗಳನ್ನು ನೀಡುತ್ತಿದ್ದಾರೆ. ಭಾರತ ತಂಡದ ದಂತಕಥೆ ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತ್ರವಲ್ಲದೇ ಪಾಕಿಸ್ತಾನ ತಂಡದ ಹಲವು ಆಟಗಾರರು ಕೂಡ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿ ಪ್ರಾರ್ಥಿಸಿದ್ದಾರೆ. ಇತ್ತ ಬಿಸಿಸಿಐ ಪಂತ್ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡಿದ್ದು ಅವಶ್ಯಕತೆ ಇದ್ದರೆ ಅವರಿಗೆ ವಿದೇಶದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ತಿಳಿಸಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rishabh-pant-car-accident-health-update-if-required-well-airlift-him-to-delhi-for-plastic-surgery-ddca-vb-au48-493559.html

Leave a Reply

Your email address will not be published. Required fields are marked *