ಚಿತ್ರದುರ್ಗ| ಹಿಂದೂ ಮಹಾಗಣಪತಿಯ ಪುರ ಪ್ರವೇಶಕ್ಕೆ ಸಿದ್ದವಾಗುತ್ತಿದೆ ಕೋಟೆನಾಡು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 3 : ವಿಶ್ವಹಿಂದು ಪರಿಷತ್-ಬಜರಂಗದಳದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಸೆ. 7 ರಿಂದ ಸೆ. 28ರವರೆಗೆ ಹಿಂದೂ ಮಹಾಗಣಪತಿ ಮಹೋತ್ಸವ ನಡೆಯಲಿದೆ ಎಂದು ದಕ್ಷಿಣ ಪ್ರಾಂತ ಬಜರಂಗದಳದ ಸಂಚಾಲಕ ಪ್ರಭಂಜನ್ ತಿಳಿಸಿದರು.

ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ವರ್ಣರಂಜಿತ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಶಾವತಾರ ಮಾದರಿಯಲ್ಲಿ ಪೆಂಡಾಲ್ ಕೆಲಸ ಆರಂಭಗೊಂಡಿದ್ದು, ಬುಧವಾರ ಗಣಪತಿ ಪುರ ಪ್ರವೇಶ ಮಾಡಲಿದೆ. ಹಿಂದೂ ಮಹಾಗಣಪತಿ ಎಂದರೆ ದೇಶಭಕ್ತಿಯನ್ನು ಹೆಚ್ಚಿಸುವುದು ಮಹೋತ್ಸವದ ಉದ್ದೇಶ.

ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ವಿವಿಧ ಕಲಾ ತಂಡ ವಾದ್ಯಗೋಷ್ಠಿಗಳೊಂದಿಗೆ ಹಿಂದು ಮಹಾಗಣಪತಿಯನ್ನು ಮೆರವಣಿಗೆ ಮೂಲಕ ಪೆಂಡಾಲ್‍ಗೆ ತರಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಎಲ್ಲಿಯೇ ಪ್ರತಿಷ್ಠಾಪಿಸುವ ಗಣಪತಿಯಲ್ಲಿ ರಾಷ್ಟ್ರೀಯತೆ, ದೇಶಭಕ್ತಿ, ಸಂಸ್ಕøತಿಯನ್ನು ಬಿಂಬಿಸುವುದು ಕಂಡು ಬಂದಲ್ಲಿ ಅಂತಹ 25 ಗಣಪತಿಗಳಿಗೆ ಬಹುಮಾನ ನೀಡಲಾಗುವುದು. ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಬಜರಂಗದಳದ ನೀರಜ್ ತೊಗೇರಿಯಾ ಉದ್ಗಾಟಿಸುವರು ಎಂದು ನುಡಿದರು.

2024ರ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ನಯನ್ ಮಾತನಾಡಿ ಸೆ. 7 ರಿಂದ 28ರವರೆಗೆ ಸುಮಾರು 21 ದಿನಗಳ ಕಾಲ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ್ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, ಸೆ. 28 ರಂದು ವಿಸರ್ಜಿಸಲಾಗುವುದೆಂದರು.

ಉತ್ಸವ ಸಮಿತಿಯ ಮಾರ್ಗದರ್ಶಕರಾದ ಟಿ.ಬದರಿನಾಥ್ ಮಾತನಾಡಿ ಗರುಡಾರೂಢ ಪ್ರಭಾವಳಿ ಪೀಠ ಸೇರಿ ಈ ಬಾರಿಯ ಗಣಪತಿ 17 ಅಡಿ ಎತ್ತರದಲ್ಲಿದೆ. ಐದು ಎಲ್.ಇ.ಡಿ. ವ್ಯವಸ್ಥೆಯಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ 11-45 ರಿಂದ 12-15 ರವರೆಗೆ ಸಂಜೆ 7-45 ರಿಂದ 8-15 ರವರೆಗೆ ಹದಿಮೂರಕ್ಕೂ ಹೆಚ್ಚು ರೀತಿಯ ಮಹಾ ಮಂಗಳಾರತಿ ನಡೆಯಲಿದೆ. ಹಿಂದೂ ಮಹಾ ಗಣಪತಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಸಮಸ್ತ ಭಕ್ತರು ಹಾಗೂ ಸಾರ್ವಜನಿಕರು, ದಾನಿಗಳ ಸಹಕಾರವಿದೆ ಕಾರ್ಕಳ ಸಾಗರದವರು ಪೆಂಡಾಲ್ ನಿರ್ಮಿಸುತ್ತಿದ್ದು,ಅಂದಾಜು ಹದಿನಾರರಿಂದ ಹದಿನೇಳು ಲಕ್ಷ ರೂ.ಗಳ ವೆಚ್ಚವಾಗಲಿದೆ. ಎಂದು ತಿಳಿಸಿದರು.

ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್, ಬಜರಂಗದಳದ ಜಿಲ್ಲಾ ಸಂಯೋಜಕ ಸಂದೀಪ್, ವಿಶ್ವಹಿಂದೂ ಪರಿಷತ್ ನಗರಾಧ್ಯಕ್ಷ ಈ.ಅಶೋಕ್, ಉಪಾಧ್ಯಕ್ಷ ಜಿ.ಎಸ್.ರಂಗಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *