ಉತ್ತರ ಕನ್ನಡದಲ್ಲಿ ಮತ್ತೊಂದು ದುರಂತ: ಪ್ರವಾಸಕ್ಕೆಂದು ಬಂದಿದ್ದ ಮತ್ತೋರ್ವ ವಿದ್ಯಾರ್ಥಿ ಸಾವು!

ಕಾರವಾರ, (ಡಿಸೆಂಬರ್ 18): ಮೂತ್ರ ವಿಸರ್ಜನೆಗೆ ತೆರಳಿದ್ದ ವಿದ್ಯಾರ್ಥಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಮೃತ ದುರ್ದೈವಿ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ಗಾಣದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ 100 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದು, ಮೆಡಿಕಲ್ ಔಷಧಿಗಾಗಿ ಭಟ್ಕಳದಲ್ಲಿ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ನಿರುಪಾದಿ, ಭಟ್ಕಳದ ತಾಲೂಕು ಪಂಚಾಯತ್ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ. ಆದ್ರೆ, ಕತ್ತಲು ಆಗಿದ್ದರಿಂದ ಬಾವಿ ಕಂಡಿಲ್ಲ. ಹಾಗೇ ಆ ಬಾವಿಗೆ ತಡೆಗೋಡೆ ಸಹ ಇರಲಿಲ್ಲ. ಹೀಗಾಗಿ ಏಕಾಏಕಿ ಬಾವಿಯೊಳಗೆ ಬಿದ್ದಿದ್ದಾನೆ.

ನಿರುಪಾದಿ ಬಾವಿಗೆ ಬಿದ್ದ ತಕ್ಷಣ ಜೊತೆಗಿದ್ದ ಬಾಲಕರು ಕೂಗಿಕೊಂಡಿದ್ದಾರೆ. ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸಹ ಬಾವಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಅಸ್ವಸ್ಥಗೊಂಡಿದ್ದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ನಿರುಪಾದಿ ಕೊನೆಯುಸಿರೆಳೆದಿದ್ದಾನೆ.

Source : https://tv9kannada.com/karnataka/uttara-kannada/school-student-fell-down-in-well-at-bhatkal-who-came-educational-tour-from-koppal-news-in-kannada-rbj-951954.html

Leave a Reply

Your email address will not be published. Required fields are marked *